ಕರ್ನಾಟಕ

karnataka

By

Published : Apr 9, 2022, 4:02 PM IST

ETV Bharat / city

ನೀರಾವರಿಗಾಗಿ ಟ್ರ್ಯಾಕ್ಟರ್ ರ‍್ಯಾಲಿ : ಏಕಾಂಗಿಯಾಗಿ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಮುಂದಾದ್ರಾ ಎಸ್​.ಆರ್​ ಪಾಟೀಲ್!?

ಎಸ್.ಆರ್. ಪಾಟೀಲ್ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಟ್ರ್ಯಾಕ್ಟರ್ ರ‍್ಯಾಲಿಗೆ ಮುಂದಾಗಿದ್ದಾರೆ.

Tractor Rally by S R Patil
ಟ್ರ್ಯಾಕ್ಟರ್ ರ‍್ಯಾಲಿಗೆ ಮುಂದಾದ ಎಸ್​.ಆರ್​ ಪಾಟೀಲ್

ಬೆಂಗಳೂರು: ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿಯೂ ಕಾರಣರಾಗಿದ್ದ ಮಾಜಿ ಸಚಿವ ಎಸ್ ಆರ್‌ ಪಾಟೀಲ್ ಈಗ ಏಕಾಂಗಿಯಾಗಿ ಹೊಸದೊಂದು ಹೋರಾಟಕ್ಕೆ ಮುಂದಾಗಿದ್ದಾರೆ. ಉತ್ತರಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ಟ್ರ್ಯಾಕ್ಟರ್ ರ‍್ಯಾಲಿಗೆ ಮುಂದಾಗಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸದಾ ತಮ್ಮ ಕಾಳಜಿ ವ್ಯಕ್ತಪಡಿಸುತ್ತಿದ್ದ ಎಸ್ಆರ್​ಪಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿ ನೀರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಹ ಪ್ರಮುಖ ಪಾತ್ರವಹಿಸಿತ್ತು. ಇದನ್ನು ಆಯೋಜಿಸುವಲ್ಲಿ ಎಸ್​ ಆರ್​ ಪಾಟೀಲರು ಪ್ರಮುಖ ಸ್ಥಾನ ನಿರ್ವಹಿಸಿದ್ದರು.

ನೀರಾವರಿ ಯೋಜನೆ ಜಾರಿಗಾಗಿ ಹೋರಾಟ :ಬಾಗಲಕೋಟೆ, ವಿಜಯಪುರ ಸೇರಿದಂತೆ ಐದು ಜಿಲ್ಲೆಗೆ ನೀರಾವರಿ ಸೌಕರ್ಯ ಕಲ್ಪಿಸುವ ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಗೆ ಅವಿರತವಾಗಿ ಶ್ರಮಿಸುತ್ತಿರುವ ಎಸ್ಆರ್ ಪಾಟೀಲ್​ ಇದೀಗ ವಿಧಾನ ಪರಿಷತ್ ಸದಸ್ಯತ್ವವನ್ನೂ ಕಳೆದುಕೊಂಡು, ಕಾಂಗ್ರೆಸ್ ಪಕ್ಷದ ಚಟುವಟಿಕೆಯಿಂದಲೂ ದೂರವುಳಿದು ಏಕಾಂಗಿಯಾಗಿದ್ದಾರೆ.

ಆದರೂ ಛಲ ಬಿಡದೇ ನೀರಾವರಿ ಯೋಜನೆ ಜಾರಿಗಾಗಿ ಹೋರಾಟ ಮುಂದುವರಿಸಲು ನಿಶ್ಚಯಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಚಟುವಟಿಕೆ, ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ಬಿಜೆಪಿ ಸೇರುತ್ತಾರೆ ಎನ್ನುವ ಅನುಮಾನವನ್ನು ಮೂಡಿಸಿದ್ದ ಎಸ್​ಆರ್​ಪಿ ಇದೀಗ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಸರ್ಕಾರದ ವಿರುದ್ಧದ ಹೋರಾಟಕ್ಕೆ ಯೋಚನೆ ಮಾಡಿದ್ದಾರೆ.

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹ :ಉತ್ತರಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆಗ್ರಹಿಸಿ ವಿನೂತನ ರ‍್ಯಾಲಿಗೆ ಮುಂದಾಗಿದ್ದಾರೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಏಪ್ರಿಲ್​ 13ರಿಂದ 17ರವರೆಗೆ ಟ್ರ್ಯಾಕ್ಟರ್ ರ‍್ಯಾಲಿ ಆಯೋಜಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಪಾಟೀಲರಿಗೆ ಇದೀಗ ಸಚಿವ ಮುರುಗೇಶ್ ನಿರಾಣಿ ಪ್ರತಿನಿಧಿಸುತ್ತಿರುವ ಬೀಳಗಿ ಕ್ಷೇತ್ರದಿಂದ ಟಿಕೆಟ್ ಭರವಸೆ ನೀಡಲಾಗಿದೆ. ಸದ್ಯ ಅವರು ನವಲಗುಂದದಿಂದ ಬೀಳಗಿವರೆಗೂ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.

ಕಾಂಗ್ರೆಸ್ ಬೆಂಬಲ ಪಡೆಯದ ಎಸ್​ಆರ್​ಪಿ :ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ಬೆಂಬಲವಿಲ್ಲದೇ ಏಕಾಂಗಿಯಾಗಿ ಹೋರಾಟಕ್ಕೆ ಇಳಿದಿರುವುದು ಒಂದು ಅನುಮಾನ ತರಿಸಿದರೆ, ಆಯ್ಕೆ ಮಾಡಿಕೊಂಡ ಸ್ಥಳ ಇವರು ಕಾಂಗ್ರೆಸ್​ನಿಂದ ಕಣಕ್ಕಿಳಿಯಲು ಅಣಿಯಾಗುತ್ತಿದ್ದಾರಾ ಎನ್ನುವ ಅನುಮಾನವನ್ನೂ ಮೂಡಿಸುತ್ತಿದೆ. ಒಟ್ಟಾರೆ ಮಹಾದಾಯಿ, ಕೃಷ್ಣಾ ಯೋಜನೆಗಳ ಜಾರಿ, ತುಂಗಭದ್ರಾ ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕಾಗಿ ಪಾಟೀಲರು ಈ ಟ್ರ್ಯಾಕ್ಟರ್ ರ‍್ಯಾಲಿ ನಡೆಸುತ್ತಿದ್ದಾರೆ.

ಕಾಂಗ್ರೆಸ್ ರ‍್ಯಾಲಿ?:ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಟ್ರ್ಯಾಕ್ಟರ್ ರ‍್ಯಾಲಿ ಮಾಡಲು ಸಿದ್ಧತೆ ನಡೆಸಿರುವ ನಡುವೆಯೇ ಎಸ್ ಆರ್ ಪಾಟೀಲ್ ಟ್ರ್ಯಾಕ್ಟರ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ಸದ್ಯ ಕಾಂಗ್ರೆಸ್ ಪಕ್ಷ ಸಹ ಪಾದಯಾತ್ರೆ ಇಲ್ಲವೇ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಯೋಚಿಸಿದೆ. ಈ ಮಧ್ಯೆ ಪ್ರತ್ಯೇಕವಾಗಿ ಎಸ್​​ಆರ್​ಪಿ ತಮ್ಮ ದಾಳ ಎಸೆಯಲು ಮುಂದಾಗಿದ್ದಾರೆ.

ಏಪ್ರಿಲ್ 13 ರಿಂದ 17ರವರೆಗೆ ನಾಲ್ಕು ದಿನ ನಡೆಯುವ ಟ್ರ್ಯಾಕ್ಟರ್ ರ‍್ಯಾಲಿ ಎಸ್ ಆರ್ ಪಾಟೀಲರ ಬಲವನ್ನು ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿಸಲಿದೆ ಎಂಬ ಮಾತು ಕೇಳಿ ಬರುತ್ತಿವೆ. ಉತ್ತರ ಕರ್ನಾಟಕ ಸ್ವಾಭಿಮಾನಿ ವೇದಿಕೆ ಹೆಸರಲ್ಲಿ ರ‍್ಯಾಲಿ ನಡೆಯುತ್ತಿದೆ. ಅನ್ನದಾತನ ಕೂಗು ಎಂಬ ಹೆಸರಲ್ಲಿ ಹೋರಾಟಕ್ಕೆ ಮುಂದಾದ ಎಸ್​ಆರ್​ಪಿ, ರೈತ ಸಂಘಟನೆಗಳು, ಗುತ್ತಿ ಬಸವಣ್ಣ ಯೋಜನೆ ಹೋರಾಟ ಸಮಿತಿ, ಮಹಾದಾಯಿ ಹೋರಾಟಗಾರರ ಬೆಂಬಲದೊಂದಿಗೆ ಇದನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ:ಆರ್‌ಎಸ್‌ಎಸ್​ನ ಹಿಂದೂ ರಾಷ್ಟ್ರವನ್ನ ನಾವು ಒಪ್ಪಲ್ಲ.. ಹಿಂದೂ ಧರ್ಮ ಎಲ್ಲರನ್ನೂ ಒಳಗೊಳ್ಳುತ್ತೆ.. ಶಾಸಕಿ ಅಂಜಲಿ ನಿಂಬಾಳ್ಕರ್

ಬಾದಾಮಿ, ಕೂಡಲಸಂಗಮ, ಗಲಗಲಿ ಹಾಗೂ ಮುಧೋಳದಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ಕಾರ್ಯಕರ್ತರು ವಾಸ್ತವ್ಯ ಹೊಡಲಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಟ್ರ್ಯಾಕ್ಟರ್​ಗಳ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿರುವ ಎಸ್ ಆರ್​ ಪಾಟೀಲ್​, ತಮ್ಮನ್ನು ನಿರ್ಲಕ್ಷ್ಯ ಮಾಡಿರುವ ಕಾಂಗ್ರೆಸ್​ಗೆ ಪರೋಕ್ಷವಾಗಿ ತಮ್ಮ ಶಕ್ತಿ ತೋರಿಸಲು ಮುಂದಾಗಿದ್ದಾರಾ ಅಥವಾ ಬೀಳಗಿಯಿಂದ ಸ್ಪರ್ಧಿಸಲು ಕಣ ಸಿದ್ಧಪಡಿಸಿಕೊಳ್ಳುತ್ತಿದ್ದಾರಾ ಎನ್ನುವುದಕ್ಕೆ ಉತ್ತರ ಸಿಕ್ಕಿಲ್ಲ.

ABOUT THE AUTHOR

...view details