ಕರ್ನಾಟಕ

karnataka

ರೇರಾ ಕಾಯ್ದೆ ಇನ್ನಷ್ಟು ಬಲಪಡಿಸಲು ನಿರ್ಧಾರ: ಸಚಿವ ವಿ.ಸೋಮಣ್ಣ

By

Published : May 30, 2020, 5:17 PM IST

ರೇರಾ ಕಾಯ್ದೆಯಡಿ ಪರಿಹಾರ ವಸೂಲಾತಿ‌ ಮಾಡುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ರೇರಾ ನಿಯಮ-2017 ಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕರ್ನಾಟಕ (ರೇರಾ) ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಲು ಹೊಸ ಮಾರ್ಪಾಡು ತರಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರೇರಾ ಕಾಯ್ದೆಯಡಿ ಪರಿಹಾರ ವಸೂಲಾತಿ‌ ಮಾಡುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ರೇರಾ ನಿಯಮ-2017ಗೆ ತಿದ್ದುಪಡಿ ತರಲು ಮುಂದಾಗಿದ್ದೇವೆ. ಇದರಿಂದ ಮೋಸಕ್ಕೊಳಗಾದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.

ಅಪಾರ್ಟ್​​​ಮೆಂಟ್​​ಗಳ ನಿರ್ಮಾಣ ಮತ್ತು ಖರೀದಿ ನಡುವೆ ಪ್ರಾಧಿಕಾರ ಸಂಪರ್ಕ ಸೇತುವೆಯಾಗಲಿದೆ. ಅಪಾರ್ಟ್​​​​ಮೆಂಟ್​​​ ಖರೀದಿ ವ್ಯವಹಾರ ಕಾನೂನು ಚೌಕಟ್ಟಿನಲ್ಲಿ ತರುತ್ತೇವೆ. 4 ಸಾವಿರ ರಿಯಲ್ ಎಸ್ಟೇಟ್ ಏಜೆಂಟ್​​​​ಗಳನ್ನು ನೋಂದಣಿ ಮಾಡಿಸಲಾಗಿದೆ. ರಾಜ್ಯದಲ್ಲಿ ಹಲವು ಅಪಾರ್ಟ್​​​ಮೆಂಟ್​​ ಮಾಲೀಕರು ನಿಯಮ ಪಾಲಿಸುತ್ತಿಲ್ಲ. ರೇರಾ ಪ್ರಾಧಿಕಾರವು ಅಪಾರ್ಟ್​​​ಮೆಂಟ್​​ ಖರೀದಿ, ನಿರ್ಮಾಣ ಸಂಬಂಧ ದೂರುಗಳನ್ನು ಪರಿಶೀಲಿಸಲಿದೆ. ಎಲ್ಲವೂ ರೇರಾ ಕಾಯ್ದೆಯಡಿಯೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ವಸತಿ ಸಚಿವ ವಿ.ಸೋಮಣ್ಣ

1.20 ಲಕ್ಷ ನಿವೇಶನಗಳನ್ನು ಬಡವರಿಗೆ ಹಂಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಈ ಕುರಿತು ಪ್ರಕ್ರಿಯೆ ಆರಂಭವಾಗಲಿದ್ದು, ಬಡವರಿಗೆ ಉಚಿತ ನಿವೇಶನ ಜೊತೆಗೆ ಮೂಲಸೌಕರ್ಯ ಒದಗಿಸುತ್ತೇವೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಟೌನ್​​​ಶಿಪ್ ನಿರ್ಮಾಣ

ಜಿಗಣಿ ಹೋಬಳಿಯ ಸ್ವಾಮಿ ವಿವೇಕಾನಂದ ಯೋಗ ವಿವಿ ಬಳಿ 1,938 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯದ 30,000 ನಿವೇಶನಗಳ ಪ್ರಧಾನ ಮಂತ್ರಿ ಟೌನ್ ಶಿಪ್ ನಿರ್ಮಿಸಲು ಯೋಜಿಸಲಾಗಿದೆ. ಇಲ್ಲಿ 100 ಎಕರೆ ಜಾಗದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ‌ ಮಾಡಲಿದ್ದೇವೆ‌. ಮುತ್ಯಾಲ ಮಡುವಿನಲ್ಲಿ 120 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಮಾಡಲಿದ್ದೇವೆ ಎಂದರು.

ಸ್ಲಮ್‌ ಮುಕ್ತ ರಾಜ್ಯದ ಗುರಿ

750 ಕೊಳಚೆ ಪ್ರದೇಶಗಳನ್ನು ಕೊಳಚೆ ರಹಿತ ಪ್ರದೇಶವಾಗಿ ಮಾಡುತ್ತಿದ್ದು, ಸ್ಲಮ್ ಮುಕ್ತ ರಾಜ್ಯ ನಮ್ಮ ಗುರಿಯಾಗಿದೆ. ಈ ಸಲ ಬೆಂಗಳೂರಲ್ಲೂ 250 ಸ್ಲಮ್​​​​ಗಳನ್ನು ಕೊಳಚೆ ರಹಿತ ಮಾಡುತ್ತೇವೆ. ಕೊಳಚೆ ಪ್ರದೇಶದ ಜನ ಸಾಮಾನ್ಯ ಜನರಂತೆ ಬದುಕುವ ವ್ಯವಸ್ಥೆ ತರುತ್ತೇವೆ ಎಂದು ಹೇಳಿದರು.

ಯಡಿಯೂರಪ್ಪ ಪ್ರಶ್ನಾತೀತ ನಾಯಕ

ಯಡಿಯೂರಪ್ಪ ಹೇಳಿದಂತೆ ನಾವೆಲ್ಲ ಕೇಳಬೇಕಾಗುತ್ತದೆ. ಅವರು ನಮ್ಮ ಪ್ರಶ್ನಾತೀತ ನಾಯಕ. ಯತ್ನಾಳ್ ಅವರು ಹಿರಿಯರು, ಕೇಂದ್ರದಲ್ಲಿ ಮಂತ್ರಿಯಾಗಿದ್ದವರು. ಯತ್ನಾಳ್ ಅವರು ಯಡಿಯೂರಪ್ಪ ಅವರ ಜೊತೆ ಚರ್ಚಿಸಲಿ. ಸಾಮರಸ್ಯ ಬೆಳೆಸಿಕೊಳ್ಳಬೇಕು. ಸಾರ್ವಜನಿಕವಾಗಿ ಯತ್ನಾಳ್ ಹೇಳಿಕೆಗಳನ್ನು ಕೊಡಬಾರದು ಎಂದರು.

ಯತ್ನಾಳ್ ನೇರ ನುಡಿಗೆ ಹೆಸರಾದವರು. ಅನುಸರಿಸಿಕೊಂಡು ಹೋಗುವಂತೆ ನಾನೂ ಸಹ ಯತ್ನಾಳ್ ಅವರಿಗೆ ಹೇಳುತ್ತೇನೆ. ಯಡಿಯೂರಪ್ಪ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ರಾಜ್ಯದ, ಎಲ್ಲ ಸಮುದಾಯಗಳ ನಾಯಕ ಎಂದು ಸ್ಪಷ್ಟಪಡಿಸಿದರು.

ಇಮ್ರಾನ್ ಪಾಷ ವಿರುದ್ಧ ಕಿಡಿ:ಇದೇ ವೇಳೆ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ವಿರುದ್ಧ ಸಚಿವ ಸೋಮಣ್ಣ ಕಿಡಿ‌ಕಾರಿದರು. ಕಾರ್ಪೊರೇಟರ್ ಆದ್ರೇನು ಬೇರೆ ಆದ್ರೇನು?. ಎಲ್ರೂ ಕಾನೂನಿಗೆ ಬೆಲೆ ಕೊಡಬೇಕು. ಎಲ್ಲರೂ ಕಾನೂನು ಪಾಲಿಸಬೇಕು. ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ದರು.. ಕಾರ್ಪೊರೇಟರ್ ಯಾವ ಲೆಕ್ಕ ಹೇಳಿ. ಕೋತಿ ತಾನು ಕೆಡ್ತು ಅಂತ ಹೊಲವೆಲ್ಲ ಕೆಡಿಸೋಕೆ ಹೊಗಬಾರದು. ಇಮ್ರಾನ್ ಪಾಷಾಗೆ ಇನ್ನೂ ಸಣ್ಣ ವಯಸ್ಸು. ಕಾನೂನಿಗೆ ಅವರು ಬೆಲೆ ಕೊಡಲಿ ಎಂದು ಕಿವಿ ಮಾತು ಹೇಳಿದರು.

ABOUT THE AUTHOR

...view details