ಕರ್ನಾಟಕ

karnataka

ಡಿ.ಜೆ.ಹಳ್ಳಿ ಗಲಭೆ ಸಂಬಂಧ ಎನ್ಐಎ ಸಲ್ಲಿಸಿದ ಆರೋಪ ಪಟ್ಟಿ ಪೂರ್ವ ನಿರ್ದೇಶಿತ: ಎಸ್​ಡಿಪಿಐ

By

Published : Feb 26, 2021, 8:24 PM IST

Updated : Feb 26, 2021, 10:51 PM IST

ಡಿ‌.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆಯ ಕೇಂದ್ರಬಿಂದು ಸಂಪತ್ ರಾಜ್ ಹಾಗೂ ಸ್ಥಳೀಯ ಕಾರ್ಪೋರೇಟರ್ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುವ ಹಂತದಲ್ಲಿ ಕೇಂದ್ರದ ಅಣತಿಯಂತೆ ಎನ್ಐಎ ನಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು‌ ಎಸ್​ಡಿಪಿಐ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆರೋಪಿಸಿದರು.

ಎಸ್​ಡಿಪಿಐ
ಎಸ್​ಡಿಪಿಐ

ಬೆಂಗಳೂರು: ಡಿ‌.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಸಂಬಂಧ ಇತ್ತೀಚೆಗೆ ಎನ್ಐಎ ನ್ಯಾಯಾಲಯಕ್ಕೆ ಏಳು ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಸಿತ್ತು. ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದ್ದ 247 ಗಲಭೆಕೋರರ ಪೈಕಿ 40ಕ್ಕೂ ಹೆಚ್ಚು ಮಂದಿ ಎಸ್​ಡಿಪಿಐ ಕಾರ್ಯಕರ್ತರ ಹೆಸರು ಉಲ್ಲೇಖವಾಗಿತ್ತು. ‌ಈ ಬಗ್ಗೆ ಸೋಷಿಯಲ್‌ ಡ್ರೆಮಾಕ್ರಟಿಕ್ ಪಾರ್ಟಿ ಆಫ್‌ ಇಂಡಿಯಾ (ಎಸ್​ಡಿಪಿಐ) ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬಗ್ಗೆ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಮಾತನಾಡಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಎಸ್​ಡಿಪಿಐನ ಗುರಿಯಾಗಿಸಿಕೊಂಡು ಚಾರ್ಜ್​ಶೀಟ್​ನಲ್ಲಿ ಹೆಸರು ಉಲ್ಲೇಖಿಸಿದೆ. ಗಲಭೆಯ ಕೇಂದ್ರಬಿಂದು ಸಂಪತ್ ರಾಜ್ ಹಾಗೂ ಸ್ಥಳೀಯ ಕಾರ್ಪೋರೇಟರ್ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುವ ಹಂತದಲ್ಲಿ ಕೇಂದ್ರದ ಅಣತಿಯಂತೆ ಎನ್ಐಎ ನಮ್ಮ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು‌ ಆರೋಪಿಸಿದರು.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎನ್ಐಎ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ

ಬಿಜೆಪಿ ಸರ್ಕಾರದ ನಿರ್ದೇಶನದಂತೆ ಎನ್ಐಎ ದೆಹಲಿಯಿಂದಲೇ ಎಸ್​ಡಿಪಿಐ ವಿರುದ್ಧ ಎಫ್ಐಆರ್ ದಾಖಲಿಸಿ ಬಂದಿತ್ತು. ಈ ಬಗ್ಗೆ ಕಳೆದ ಆರು ತಿಂಗಳಲ್ಲಿ 2000ಕ್ಕೂ ಹೆಚ್ಚು ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಲಾಗಿತ್ತು. ಈ ಪೈಕಿ ಕಾಂಗ್ರೆಸ್ ಮುಖಂಡ ಸಂಪತ್ ರಾಜ್, ಜೆಡಿಎಸ್ ಮತ್ತಿತರ ಪಕ್ಷಗಳ ಮುಖಂಡರೇ ನೇರ ಹೊಣೆಗಾರರಾಗಿದ್ದು, ಇದರಲ್ಲಿ ರಾಜಕೀಯ ಷಡ್ಯಂತ್ರವಿದೆ ಎಂದು ಸ್ಥಳೀಯ ಶಾಸಕ ಶ್ರೀನಿವಾಸಮೂರ್ತಿ ಹಾಗೂ ತನಿಖೆ ನಡೆಸಿದ ಸಿಸಿಬಿ ಹೇಳಿರುವುದು ವರದಿಯಾಗಿತ್ತು. ಆದರೂ ತಪ್ಪಿತಸ್ಥರು ಸುಲಭವಾಗಿ ಜಾಮೀನಿನಲ್ಲಿ ಬಿಡುಗಡೆಯಾಗಿರುವುದನ್ನು ಗಮನಿಸಿದರೆ ಅಮಾಯಕರನ್ನು ಸಿಲುಕಿಸಿ ತಪ್ಪಿತಸ್ಥರನ್ನು ರಕ್ಷಿಸುವ ಹುನ್ನಾರವಾಗಿದೆ ಎಂದು‌ ಆಪಾದಿಸಿದರು.

Last Updated : Feb 26, 2021, 10:51 PM IST

ABOUT THE AUTHOR

...view details