ಕರ್ನಾಟಕ

karnataka

ವಾಪಸ್​ ಪಡೆದ 3 ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿರಲಿಲ್ಲ: ಸಿ.ಟಿ. ರವಿ ಸಮರ್ಥನೆ

By

Published : Nov 28, 2021, 7:20 PM IST

ಅನ್ನದಾತರ ಹಿತದೃಷ್ಟಿಯಿಂದ ಮೂರು ಕೃಷಿ ಕಾಯ್ದೆಗಳನ್ನು ಜಾರಿ ಮಾಡಲಾಗಿತ್ತು. ಈ ಕಾಯ್ದೆಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

bjps ct ravi
ಬಿಜೆಪಿಯ ಸಿ.ಟಿ. ರವಿ ಸಮರ್ಥನೆ

ಬೆಂಗಳೂರು:ಕೃಷಿ ಸುಧಾರಣೆಗೆ ಸಂಬಂಧಿಸಿದ ಮೂರು ಕಾಯ್ದೆಗಳು ರೈತ ವಿರೋಧಿಯಲ್ಲ. ರೈತರೇ ಇವುಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಯ್ದೆಗಳನ್ನು ವಾಪಸ್​ ಪಡೆದಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

ಇಲ್ಲಿನ ಸರ್ವಜ್ಞನಗರ ಸೀತಾರಾಮ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನ್ನದಾತರ ಹಿತದೃಷ್ಟಿಯಿಂದ ಈ ಕಾಯ್ದೆಗಳನ್ನು ಜಾರಿ ಮಾಡಲಾಗಿತ್ತು. ಇವುಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ದೇಶವಿರೋಧಿ ಶಕ್ತಿಗಳು ಈ ಕಾಯ್ದೆಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಬಾರದೆಂಬ ಕಾರಣಕ್ಕಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದರು.

ರೈತರು ಎಲ್ಲಿ ಬೇಕಾದರೂ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡುವುದು ರೈತ ವಿರೋಧಿ ಕ್ರಮವೇ?. ಪ್ರತಿಪಕ್ಷಗಳು ಕಾಯ್ದೆಗಳು ರೈತವಿರೋಧಿ ಎಂಬ ಭ್ರಮೆಯನ್ನು ಹುಟ್ಟಿಸುವ ಕೆಲಸ ಮಾಡಿವೆ. ಒಂದಲ್ಲ ಒಂದು ದಿನ ಕೃಷಿ ಸುಧಾರಣಾ ಕಾಯ್ದೆ ವಿಷಯ ಜನರಿಗೆ ಅರ್ಥವಾಗಲಿದೆ. ಆಗ ರೈತರೇ ಬೀದಿಗಿಳಿದು ಈ ಇವುಗಳನ್ನು ಜಾರಿಗೊಳಿಸಲು ಒತ್ತಾಯಿಸುವ ದಿನ ಬರಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್​ ಕಡೆ ಸತ್ತ ಕತ್ತೆ ಬಿದ್ದಿದೆ:

ಕಮೀಷನ್​ ದಂಧೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, 40% ಕಮೀಷನ್​ ದಂಧೆ ನಡೆಯುತ್ತಿದೆ ಎಂದು ಕಾಂಗ್ರೆಸ್​ ಆರೋಪ ಮಾಡಿದೆ. ಅವರ ಕಡೆ ಸತ್ತ ಕತ್ತೆಯೇ ಬಿದ್ದಿದೆ. ಮೊದಲು ಅದನ್ನು ನೋಡಿಕೊಳ್ಳಲಿ ಎಂದು ಸಿ ಟಿ ರವಿ ಟೀಕಿಸಿದರು.

ಕಾಂಗ್ರೆಸ್ ವಂಶವಾದ, ಜಾತಿವಾದವನ್ನು ಪೋಷಿಸಿತು. ಭ್ರಷ್ಟಾಚಾರದ ಬೀಜ ಬಿತ್ತಿ, ಅದು ಹೆಮ್ಮರವಾಗಿ ಬೆಳೆಯಲು ಕಾರಣವಾಗಿದ್ದೇ ಕಾಂಗ್ರೆಸ್ ಎಂದು ಅವರು ಆರೋಪಿಸಿದರು.

ABOUT THE AUTHOR

...view details