ಬೆಂಗಳೂರು: ನಾನು ರಾಜೀನಾಮೆ ನೀಡಬೇಕು ಎಂದರೆ ಅದನ್ನು ಯಾರಿಗೆ ನೀಡಬೇಕು?, ಸ್ವೀಕರಿಸಲು ಉಪಸಭಾಪತಿಗಳು ಇಲ್ಲ. ಅವರ ನೇಮಕವಾದ ನಂತರ ನೋಡೋಣ ಎಂದು ವಿಧಾನಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ತಿಳಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ವಿಧಾನ ಪರಿಷತ್ ಅಧಿವೇಶನದ ಸಮಯದಲ್ಲಿ ಡಿ.15 ರಂದು ನಡೆದ ಅಹಿತಕರ ಘಟನೆ ಕುರಿತು ವಿಚಾರಣೆ ನಡೆಸಿ, ವರದಿ ಸಲ್ಲಿಸಲು ರಚಿಸಲಾಗಿದ್ದ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರ ಅಧ್ಯಕ್ಷತೆಯ ಸದನ ಸಮಿತಿಯ ಮಧ್ಯಂತರ ವರದಿಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೊದಲು ಉಪಸಭಾಪತಿ ಅವರ ಆಯ್ಕೆ ಆಗಬೇಕಲ್ಲವೇ?, ಅ ನಂತರ ನನ್ನ ರಾಜೀನಾಮೆ ವಿಚಾರ ಎಂದು ಹೇಳುವ ಮೂಲಕ ತಮ್ಮ ರಾಜೀನಾಮೆ ವದಂತಿಗೆ ತೆರೆ ಎಳೆದರು.
ಸಭಾಪತಿ ಬದಲಾವಣೆ ಅಥವಾ ರಾಜಿನಾಮೆ ಕುರಿತು ಈ ಸಂದರ್ಭದಲ್ಲಿ ಚರ್ಚೆ ಮಾಡುವುದು ಸೂಕ್ತವಲ್ಲ. ಅಲ್ಲದೆ ಇದನ್ನು ಯಾರಿಗೆ ಸಲ್ಲಿಕೆ ಮಾಡಲಾಗಿದೆಯೋ ಅವರನ್ನು ಕೇಳಬೇಕು, ಯಾವತ್ತು?, ಹೇಗೆ?, ಏನು?, ಎನ್ನುವುದನ್ನು ದೂರು ಸಲ್ಲಿಸಿದವರು ಕೇಳಿ ತಿಳಿದುಕೊಳ್ಳಬೇಕು. ಫೈಲ್ ನನ್ನ ಬಳಿ ಬಂದ ಮೇಲೆ ನೋಡಿ ನಾನು ತೀರ್ಮಾನ ಕೈಗೊಳ್ಳುತ್ತೇನೆ. ಏನನ್ನು ನೋಡದೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕೇಳಬೇಕಾದವರು ಯಾವಾಗ ಕೇಳುತ್ತಾರೋ ನೋಡೋಣ, ಅವರಿಗೆ ಸೂಕ್ತ ಉತ್ತರ ನೀಡುತ್ತೇನೆ. ಇದಕ್ಕೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಅಗತ್ಯವಿಲ್ಲ ಎಂದರು.
ವರದಿ ವಿಚಾರ ಪ್ರಸ್ತಾಪ:
ಅಂದು ನಡೆದ ಅಹಿತಕರ ಘಟನೆ ಕುರಿತು ಐದು ಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ಸರ್ಕಾರ ರಚಿಸಿ ಆದೇಶ ಹೊರಡಿಸಿತ್ತು. ಆದರೆ ಅದರಲ್ಲಿ ಹೆಚ್.ವಿಶ್ವನಾಥ್ ಮತ್ತು ಸಂಕನೂರು ಅವರು ಖಾಸಗಿ ಕಾರಣಗಳಿಂದ ಸಮಿತಿಗೆ ರಾಜಿನಾಮೆ ನೀಡಿದ್ದು, ಪ್ರಸ್ತುತ ಸಮಿತಿಯಲ್ಲಿ 3 ಜನ ಸದಸ್ಯರಿದ್ದಾರೆ. ಸಮಿತಿಗೆ 20 ದಿನಗಳ ಒಳಗಾಗಿ ವರದಿಯನ್ನು ಸಲ್ಲಿಸಲು ಸೂಚಿಸಲಾಗಿತ್ತು. ಸಮಿತಿಗೆ ಕಾಲಾವಕಾಶ ಸಾಕಾಗುತ್ತಿಲ್ಲವೆಂದು ಇಂದು ಮಧ್ಯಂತರ ವರದಿಯನ್ನು ಸಲ್ಲಿಸಿ, ಹೆಚ್ಚಿನ ಸಮಯವನ್ನು ಕೋರಿದೆ. ಸಮಿತಿ ಸಲ್ಲಿಸಿರುವ ಮಧ್ಯಂತರ ವರದಿಯನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.
ಸದನ ಸಮಿತಿ ನೇಮಿಸಿದ ಸಂದರ್ಭ ಐವರು ಸದಸ್ಯರು ಇದ್ದರು. ಆದರೆ ಹೆಚ್ ವಿಶ್ವನಾಥ್ ಹಾಗೂ ಎಸ್.ವಿ ಸಂಕನೂರು ನಂತರದ ದಿನಗಳಲ್ಲಿ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಅಧ್ಯಕ್ಷ ಮರಿತಿಬ್ಬೇಗೌಡರ ಜೊತೆಗೆ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಆರ್.ಬಿ.ತಿಮ್ಮಾಪುರ್ ಸಮಿತಿಯಲ್ಲಿ ಮುಂದುವರೆದು ಮಧ್ಯಂತರ ವರದಿ ಸಲ್ಲಿಕೆ ಮಾಡಿದ್ದಾರೆ. ಇದು ಶಾಸನ ಬದ್ಧವಾಗಿ ಸಲ್ಲಿಕೆಯಾಗಿದೆ. ಈ ಹಿನ್ನೆಲೆ ಯಾವುದೇ ಬೇರೆ ರೀತಿಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಇನ್ನು ವರದಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ಬೇಕು ಎಂದು ಸದಸ್ಯರು ಕೇಳಿದ್ದಾರೆ. ಸದ್ಯಕ್ಕೆ ಮಧ್ಯಂತರ ವರದಿ ನೀಡಿದ್ದಾರೆ. ಪೂರ್ಣ ವರದಿಗೆ ಇನ್ನಷ್ಟು ಕಾಲಾವಕಾಶ ಕೇಳಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸದನ ಸಮಿತಿಯ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಹಾಗೂ ಆರ್.ಬಿ.ತಿಮ್ಮಾಪುರ ಅವರು ಉಪಸ್ಥಿತರಿದ್ದರು.