ಬೆಂಗಳೂರು: ವಿಧಾನಸಭೆ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಒಳಗೊಂಡಂತೆ ಉಳಿದವರ ಫೋಟೋಗಳನ್ನು ಕಾಲಮಿತಿ ಒಳಗೆ ಹಾಕಲು ಸರ್ಕಾರ ಬದ್ಧವಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆಯಲ್ಲಿ ಹೇಳಿದರು.
ಅದರ ಬಗ್ಗೆ ಯಾವುದೇ ಗೊಂದಲ ಇಲ್ಲ. ಆ ಸಮಸ್ಯೆಯೂ ಇಲ್ಲ. ಅಂಬೇಡ್ಕರ್ ಭಾವಚಿತ್ರವನ್ನು ಕಾಲಮಿತಿ ಒಳಗೆ ಹಾಕುತ್ತೇವೆ ಎಂದರು. ವಿಧಾನಸಭೆ ಸಭಾಂಗಣದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕದೇ ಇರುವುದಕ್ಕೆ ಹಿಂದಿನ ಸದನದಲ್ಲಿ ಜೆಡಿಎಸ್ ಶಾಸಕ ಅನ್ನದಾನಿ ಧ್ವನಿ ಎತ್ತಿದ್ದರು. ಸದನದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲೇಬೇಕು ಎಂದು ಸಭಾಧ್ಯಕ್ಷರ ಜತೆ ಸದನದಲ್ಲಿ ವಾದ ಮಾಡಿದ್ದ ಅನ್ನದಾನಿ, ಎಲ್ಲಾ ಶಾಸಕರಿಂದ ಸಹಿ ಸಂಗ್ರಹಿಸಿದ್ದರು.