ಕರ್ನಾಟಕ

karnataka

ಸ್ಮಾರ್ಟ್ ಸಿಟಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ರಾಕೇಶ್​ ಸಿಂಗ್​​ ತಾಕೀತು

By

Published : Jun 12, 2021, 7:21 AM IST

ರಾಜಧಾನಿಯ ಹೃದಯ ಭಾಗವಾಗಿರುವ ಕೇಂದ್ರ ವಾಣಿಜ್ಯ ಪ್ರದೇಶಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದು, ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಲಾಕ್​​ಡೌನ್ ತೆರವಾಗುತ್ತಿದ್ದಂತೆ ಈ ರಸ್ತೆಗಳಲ್ಲಿ ಸಂಚಾರ ಅಡಚಣೆಯಾಗಲಿದೆ. ಕೆಲವೆಡೆ ದಟ್ಟಣೆಯೂ ಸೃಷ್ಟಿಯಾಗಲಿದೆ ಎನ್ನುವ ಅನುಮಾನ ಎದ್ದಿದೆ.

Rakesh Singh
ರಾಕೇಶ್ ಸಿಂಗ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಮುಖ್ಯಸ್ಥ ರಾಕೇಶ್ ಸಿಂಗ್ ಗುತ್ತಿಗೆದಾರರಿಗೆ ಸೂಚಿಸಿದರು.

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಡೆಯುತ್ತಿರುವ 27 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಮುಕ್ತಾಯಗೊಳಿಸಬೇಕು. ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ರಾಕೇಶ್ ಸಿಂಗ್ ತಾಕೀತು ಮಾಡಿದರು.

ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಚಾಲನೆಗೆ ಯಾವುದೇ ಅಡೆತಡೆ ಉಂಟಾಗದಂತೆ ರಸ್ತೆಗಳ‌ ಮೇಲೆ ಬಿದ್ದಿರುವ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಬೇಕು. ರಸ್ತೆ ಅಗೆದಿರುವ ಭಾಗಗಳಲ್ಲಿ ಸರಿಯಾಗಿ ಬ್ಯಾರಿಕೇಡ್ ಹಾಕಬೇಕು. ತೆರೆದಿರುವ ಮ್ಯಾನ್ ಹೋಲ್​ಗಳನ್ನು ಮುಚ್ಚಬೇಕು ಎಂದು ರಾಕೇಶ್ ಸಿಂಗ್ ಗುತ್ತಿಗೆದಾರರಿಗೆ ಹೇಳಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ಪರಿಶೀಲಿಸಿದ ರಾಕೇಶ್ ಸಿಂಗ್

ಪರಿಶೀಲನೆಗೂ ಮುನ್ನ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ಮಹತ್ವದ ಸಭೆ ನಡೆಸಿದ ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಸ್ಮಾರ್ಟ್ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ರಂಗನಾಥ ನಾಯ್ಕರನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಸೂಚಿಸಿದರು.

ಪಾಲಿಕೆ ಆಡಳಿತಾಧಿಕಾರಿಯಿಂದ ನೈಟ್ ರೌಂಡ್ಸ್:

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ರಸ್ತೆಗಳ ಡಾಂಬರೀಕರಣ ಕಾಮಗಾರಿಗಳನ್ನು ಪರಿಶೀಲಿಸಿದ್ದಾರೆ. ಮಳೆಗಾಲ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗಳನ್ನು ಶೀಘ್ರವಾಗಿ ಮುಕ್ತಾಯಗೊಳಿಸುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ಮಾಡಲಿದ್ದಾರೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾತ್ರಿಯೇ ಬ್ರಿಗೇಡ್ ರಸ್ತೆಯ ಕಾಮಗಾರಿಯನ್ನು ಪರಿವೀಕ್ಷಿಸಿ ಹಲವು ರಸ್ತೆಗಳ ಡಾಂಬರೀಕರಣವನ್ನು ಸ್ಮಾರ್ಟ್ ಸಿಟಿ ಲಿಮಿಟೆಡ್​ನ‌ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಲಿದ್ದಾರೆ ಎಂದು ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಶೀಲನೆಗೆ ಕಾರಣ:

ರಾಜಧಾನಿಯ ಹೃದಯ ಭಾಗವಾಗಿರುವ ಕೇಂದ್ರ ವಾಣಿಜ್ಯ ಪ್ರದೇಶಗಳು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿನ ರಸ್ತೆಗಳಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳು ಒಟ್ಟೊಟ್ಟಿಗೆ ನಡೆಯುತ್ತಿದ್ದು, ಸದ್ಯಕ್ಕೆ ಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ಲಾಕ್​​ಡೌನ್ ತೆರವಾಗುತ್ತಿದ್ದಂತೆ ಈ ರಸ್ತೆಗಳಲ್ಲಿ ಸಂಚಾರ ಅಡಚಣೆಯಾಗಲಿದೆ. ಕೆಲವೆಡೆ ದಟ್ಟಣೆಯೂ ಸೃಷ್ಟಿಯಾಗಲಿದೆ ಎನ್ನುವ ಅನುಮಾನ ಎದ್ದಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಮುಖ ರಸ್ತೆಗಳನ್ನು ಟೆಂಡರ್ ಶೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತಿದೆ. ಕಾಮಗಾರಿ ಅಪೂರ್ಣವಾಗಿರುವುದರಿಂದ ಹೆಚ್ಚು ಸಮಸ್ಯೆಯಾಗಲಿದೆ ಎಂದು ಸುತ್ತಮುತ್ತಲಿನ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಾಮಗಾರಿಗಾಗಿ ರಸ್ತೆ, ಫುಟ್​ಪಾತ್​ಗಳನ್ನು ಅಗೆದು ಹಾಕಲಾಗಿದೆ. ಡಕ್ಟ್​ಗಳ ಅಳವಡಿಕೆಗಾಗಿ ತೆಗೆದ ಗುಂಡಿಗಳು ಹಾಗೆಯೇ ಇವೆ. ರಸ್ತೆಯ ತುಂಬಾ ಫುಟ್​ಪಾತ್​ಗಳಲ್ಲಿ ಜಲ್ಲಿ, ಮರಳು, ಬೃಹತ್ ಗಾತ್ರದ ಕೊಳವೆಗಳನ್ನು ಇರಿಸಲಾಗಿದೆ. ರಸ್ತೆಗಳೆಲ್ಲ ಕಿರಿದುಗೊಂಡಿದ್ದು, ವಾಹನ ಸಂಚಾರಕ್ಕಷ್ಟೇ ಅಲ್ಲ ಜನರ ಓಡಾಟಕ್ಕೂ ಜಾಗವಿಲ್ಲದಂತಾಗಿದೆ. ಅರಮನೆ ರಸ್ತೆ, ರೇಸ್ ಕೋರ್ಸ್ ರಸ್ತೆ, ನೆಹರು ತಾರಾಲಯದ ರಸ್ತೆ, ಮಿಲ್ಲರ್ಸ್ ರಸ್ತೆ , ರಾಜಭವನ ರಸ್ತೆ, ಅವೆನ್ಯೂ ರಸ್ತೆ, ಕ್ವೀನ್ಸ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಜುಮ್ಮಾ ಮಸೀದಿ ರಸ್ತೆ, ಕಾಮರಾಜ ರಸ್ತೆ, ಎನ್.ಆರ್.ರಸ್ತೆ, ಸೆಂಟ್ರಲ್ ಸ್ಟ್ರೀಟ್, ಬೌರಿಂಗ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ಟೆಂಡರ್ ಶೂರ್ ಕಾಮಗಾರಿ ತೆವಳುತ್ತಾ ಸಾಗಿದೆ.

ABOUT THE AUTHOR

...view details