ಬೆಂಗಳೂರು: ಹೈಜಾಕ್ ಮಾಡಲಿಕ್ಕೆ ಮೇಕೆದಾಟು ಯೋಜನೆ ಕುಮಾರಸ್ವಾಮಿ ಮಾಡಿದ್ರಾ ಅಂತಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಶಿವಾನಂದ ವೃತ್ತದ ಬಳಿಯಿರುವ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಯಾತ್ರೆಯನ್ನ ಕಾಂಗ್ರೆಸ್ ಹೈಜಾಕ್ ಮಾಡಿದ್ರು ಎಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.
ಮೇಕೆದಾಟು ಯೋಜನೆ ವಿವರವನ್ನು ಕೇಂದ್ರಕ್ಕೆ ಕಳಿಸಿದವರು ನಾವು. ನಾನು ಸಿಎಂ ಆಗಿದ್ದಾಗ ಡಿಪಿಆರ್ ಸಿದ್ಧಪಡಿಸಿದ್ದೆವು. ನಮ್ಮ ಯೋಜನೆ ಅನುಷ್ಠಾನಗೊಳಿಸಲಿಕ್ಕಾಗಿ ನಾವು ಪಾದಯಾತ್ರೆ ಆರಂಭಿಸ್ತಿದ್ದೇವೆ. ಕುಮಾರಸ್ವಾಮಿ ಅವರಿಗೆ ಏಕೆ ಹೊಟ್ಟೆಯುರಿ ಎಂದು ಕೇಳಿದ್ದಾರೆ.
ರಾಜಕೀಯ ಪಕ್ಷವಾಗಿ ನಮ್ಮ ಹೋರಾಟ :ಪಾದಯಾತ್ರೆ ಹೈಜಾಕ್ ಅಂದ್ರೆ ಅರ್ಥ ಏನು? ಅದೇನು ಸರ್ಕಾರಿ ಕಾರ್ಯಕ್ರಮವಾ ಹೈಜಾಕ್ ಮಾಡಲಿಕ್ಕೆ?. ರಾಜಕೀಯ ಪಕ್ಷವಾಗಿ ನಾವು ಹೋರಾಟ ಮಾಡುತ್ತಿರೋದು. ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಆದ್ರೆ, ನಾವು ಪಾದಯಾತ್ರೆ ನಡೆಸುವುದು ಬೆಳಗ್ಗೆ. ನೈಟ್ ಕರ್ಫ್ಯೂನಿಂದ ನಮ್ಮ ಯಾತ್ರೆಗೆ ಯಾವುದೇ ತೊಂದರೆ ಇಲ್ಲ ಎಂದರು.
ಇದನ್ನೂ ಓದಿ:ಕಾಂಗ್ರೆಸ್ ಜನರಿಗೆ ಮೇಕೆದಾಟು ಮಕ್ಮಲ್ ಟೋಪಿ ಹಾಕುತ್ತಿದೆ: ಎಚ್ಡಿಕೆ
ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಸಂಬಂಧ ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಜನವರಿ 9ರಂದು ಆರಂಭವಾಗಲಿದ್ದು, 19ರಂದು ಮುಕ್ತಾಯವಾಗಲಿದೆ. ಕಾಂಗ್ರೆಸ್ನ ಎಲ್ಲ ರಾಜ್ಯ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ.