ಕರ್ನಾಟಕ

karnataka

ವಿರೋಧದ ನಡುವೆಯೂ ಮುಂದಿನ ತಿಂಗಳು 'ಕೈ' ಹಿಡಿಯಲಿರುವ ಶರತ್ ಬಚ್ಚೇಗೌಡ..

By

Published : Jan 17, 2021, 9:39 PM IST

ಬಿ ಎನ್ ಬಚ್ಚೇಗೌಡ ತಮ್ಮ ರಾಜಕೀಯ ಬದುಕನ್ನು ಜನತಾದಳದ ಮೂಲಕ ಆರಂಭಿಸಿದ್ದರು. ನಂತರ ಬಿಜೆಪಿ ಸೇರಿ ಗೆದ್ದು, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟಿಬಿ ನಾಗರಾಜ್ ವಿರುದ್ಧ ಸೋಲುಂಡರು. 2018ರಲ್ಲಿ ಇವರ ಬದಲು ಪುತ್ರ ಶರತ್ ಬಚ್ಚೇಗೌಡ ಕಣಕ್ಕಿಳಿದರೂ ಎಂಟಿಬಿ ವಿರುದ್ಧ ಗೆಲ್ಲಲಾಗಲಿಲ್ಲ..

sharath-bachegowda-will-join-congress
ಶರತ್ ಬಚ್ಚೇಗೌಡ

ಬೆಂಗಳೂರು :ರಾಜ್ಯ ರಾಜಕೀಯದಲ್ಲಿ ಈಗಿನ್ನೂ ಭವಿಷ್ಯ ರೂಪಿಸಿಕೊಳ್ಳುತ್ತಿರುವ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮುಂದಿನ ತಿಂಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಹೊಸಕೋಟೆ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾಂಗ್ರೆಸ್ ನಾಯಕರ ವಿರೋಧದ ಹಿನ್ನೆಲೆ ಕಳೆದ ಅಕ್ಟೋಬರ್ ತಿಂಗಳಲ್ಲೇ ಕಾಂಗ್ರೆಸ್​ ಪಕ್ಷ ಸೇರಬೇಕಿದ್ದ ಶರತ್​​ ಒಂದಿಷ್ಟು ದಿನ ಕಾಯುವಂತೆ ರಾಜ್ಯ ಕಾಂಗ್ರೆಸ್ ನಾಯಕರಿಂದ ಸಲಹೆ ಪಡೆದಿದ್ದರು. ಸ್ಥಳೀಯ ನಾಯಕರ ಮನವೊಲಿಸುವ ಯತ್ನವನ್ನು ಕೂಡ ಈ ಮಧ್ಯೆ ರಾಜ್ಯ ಕಾಂಗ್ರೆಸ್ ನಾಯಕರು ನಡೆಸಿದ್ದಾರೆ.

ಒಂದೆಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿರಂತರವಾಗಿ ಸ್ಥಳೀಯ ನಾಯಕರ ಮನವೊಲಿಕೆಯಲ್ಲಿ ತೊಡಗಿದ್ದಾರೆ. ಈ ಮಧ್ಯೆ ಶರತ್ ಬಚ್ಚೇಗೌಡ ಕೂಡ ಕಾಂಗ್ರೆಸ್ ನಾಯಕರನ್ನು ಆಗಾಗ ಭೇಟಿಯಾಗಿ ಸಮಾಲೋಚಿಸಿ ತೆರಳುತ್ತಿದ್ದಾರೆ.

ರಾಜಕೀಯ ಬದುಕು :ರಾಜ್ಯದಲ್ಲಿ ಶರತ್ ತಂದೆ ಬಿ ಎನ್ ಬಚ್ಚೇಗೌಡ ತಮ್ಮ ರಾಜಕೀಯ ಬದುಕನ್ನು ಜನತಾದಳದ ಮೂಲಕ ಆರಂಭಿಸಿದ್ದರು. ನಂತರ ಬಿಜೆಪಿ ಸೇರಿ ಗೆದ್ದು, ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂಟಿಬಿ ನಾಗರಾಜ್ ವಿರುದ್ಧ ಸೋಲುಂಡರು. 2018ರಲ್ಲಿ ಇವರ ಬದಲು ಪುತ್ರ ಶರತ್ ಬಚ್ಚೇಗೌಡ ಕಣಕ್ಕಿಳಿದರು.

ಆದರೆ, ಎಂಟಿಬಿ ವಿರುದ್ಧ ಮಗ ಕೂಡ ಸೋತಿದ್ದರು. 2019ರಲ್ಲಿ ಎಂಟಿಬಿ ರಾಜೀನಾಮೆ ನೀಡಿ ಬಿಜೆಪಿ ಸೇರಿ ಅಭ್ಯರ್ಥಿ ಆದಾಗ ಅವರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ಶರತ್ ಗೆಲುವು ಸಾಧಿಸಿದರು. ನಿರಂತರವಾಗಿ ಮೂರು ಅವಧಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದ ಎಂಟಿಬಿ ನಾಗರಾಜ್ ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದರು.

ಓದಿ-ಬೆಳಗಾವಿಯಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ಮರಳಿದ ಅಮಿತ್ ಶಾ

2018ರಲ್ಲಿ 98 ಸಾವಿರ ಮತ ಪಡೆದಿದ್ದ ಎಂಟಿಬಿ ಉಪಚುನಾವಣೆಯಲ್ಲಿ 70 ಸಾವಿರ ಮತಕ್ಕೆ ಕುಸಿದಿದ್ದಾರೆ. ಈಗಲೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬೆಂಬಲ ಇದೆ ಅನ್ನೋದಕ್ಕೆ ಇದೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಪದ್ಮಾವತಿ 40 ಸಾವಿರ ಮತ ಪಡೆದಿದ್ದರು. ಇದರಿಂದ ಶರತ್ ಬಚ್ಚೇಗೌಡಗೆ ಯುವ ನಾಯಕತ್ವದ ಅನುಭವವಿದೆ.

ಕಾಂಗ್ರೆಸ್ ಮತ ಬ್ಯಾಂಕ್ ಸಹ ಗಟ್ಟಿಯಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಇಲ್ಲವೇ ಅವರ ಪುತ್ರ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. ಅವರನ್ನು ಸೋಲಿಸಲು ಡಿಕೆಶಿ ಈಗಾಗಲೇ ಯೋಜನೆ ರೂಪಿಸುತ್ತಿದ್ದಾರೆ. ತಂದೆ ಬಿಜೆಪಿ ಸಂಸದರಾಗಿದ್ದರೂ, ಬಿಜೆಪಿಯತ್ತ ಮುಖ ಮಾಡದೇ ಶರತ್ ತಮ್ಮ ನೆಲೆಯನ್ನು ಕಾಂಗ್ರೆಸ್​​​ನಲ್ಲಿ ಕಂಡುಕೊಳ್ಳಲು ಬಯಸುತ್ತಿದ್ದಾರೆ.

ಅಧಿವೇಶನ ಬಳಿಕ ಸೇರ್ಪಡೆ :ಈ ವರ್ಷದ ಮೊದಲ ವಿಧಾನ ಮಂಡಲ ಅಧಿವೇಶನ ಜ.28ರಿಂದ ಆರಂಭವಾಗಲಿದೆ. ಫೆ.5ಕ್ಕೆ ಮುಕ್ತಾಯವಾಗಲಿದೆ. ಇದಾದ ಬಳಿಕ ಒಂದು ಸೂಕ್ತ ದಿನಾಂಕ ನಿಗದಿಪಡಿಸಿ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಹಾಲಿ ಶಾಸಕರಾಗಿರುವ ಹಿನ್ನೆಲೆ ಇವರ ಕ್ಷೇತ್ರದಲ್ಲಿಯೇ ಸಮಾರಂಭ ಹಮ್ಮಿಕೊಳ್ಳುವ ಇಚ್ಛೆಯನ್ನು ಕಾಂಗ್ರೆಸ್ ಹೊಂದಿದೆ. ಇದಕ್ಕೆ ಪೂರಕವಾಗಿ ಶರತ್ ಬಚ್ಚೇಗೌಡ ಸ್ಪಂದಿಸಿದ್ದಾರೆ.

ABOUT THE AUTHOR

...view details