ಕರ್ನಾಟಕ

karnataka

ಪುಟ್ಟ ಪ್ರತಿಭೆ ಜ್ಞಾನ ಗುರುರಾಜ್ ಸೇರಿ 11 ಪ್ರಮುಖರಿಗೆ ಸಾಲುಮರ ತಿಮ್ಮಕ್ಕ ಪ್ರಶಸ್ತಿ

By

Published : Jun 30, 2022, 8:50 AM IST

ಎರಡೂವರೆ ವರ್ಷದಲ್ಲೇ ಸಂಗೀತ ಲೋಕಕ್ಕೆ ಏರಿದ್ದ ಈ ಪುಟ್ಟ ಬಾಲೆ ತೊದಲು ನುಡಿಯುವ ವಯಸ್ಸಿನಲ್ಲೇ ತನ್ನ ಮುದ್ದು ಕಂಠದಿಂದ ಸುಮಾರು 20 ಕ್ಕೂ ಅಧಿಕ ಹಾಡುಗಳನ್ನು ಹಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಳು.

Jnana Gururaj
ಬಾಲಪ್ರತಿಭೆ ಜ್ಞಾನ ಗುರುರಾಜ್‌

ಸುಬ್ರಮಣ್ಯ:ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ್ದ ಬಾಲಪ್ರತಿಭೆ ಜ್ಞಾನ ಗುರುರಾಜ್‌ಗೆ ಸಾಲುಮರದ ತಿಮ್ಮಕ್ಕ ಪ್ರಶಸ್ತಿ ಒಲಿದಿದ್ದು, ಇಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ತನ್ನ ತೊದಲು ನುಡಿಯ ಮೂಲಕ ದೇಶದ ಜನರ ಗಮನ ಸೆಳೆದು ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾಖಲೆ ನಿರ್ಮಿಸಿದ್ದಳು ಈ ಪುಟ್ಟ ಪ್ರತಿಭೆ.

ಬೆಂಗಳೂರಿನ ಸಾಲುಮರದ ತಿಮ್ಮಕ್ಕ ಇಂಟರ್ ನ್ಯಾಶನಲ್ ಫೌಂಡೇಶನ್ ಕೊಡ ಮಾಡುವ ಸಾಲುಮರದ ತಿಮ್ಮಕ್ಕ ನ್ಯಾಷನಲ್ ಗ್ರೀನರಿ ಅವಾರ್ಡ್​ಗೆ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ದಿ ಪಡೆದ ಸುಮಾರು ಹನ್ನೊಂದು ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಈ ಸಾಲಿಗೆ ಸಂಗೀತ ಕ್ಷೇತ್ರದಿಂದ ಬಾಲಪ್ರತಿಭೆ ಜ್ಞಾನ ಗುರುರಾಜ್ ಆಯ್ಕೆಯಾಗಿದ್ದಾಳೆ. ಶಾಸಕ ಡಾ.ಜಿ.ಪರಮೇಶ್ವರ್ ನೇತೃತ್ವದ ಆಯ್ಕೆ ಸಮಿತಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಇಂದು ನಡೆಯುವ ತಿಮ್ಮಕ್ಕ ಅಭಿನಂದನಾ ಸಮಾರಂಭ ಹಾಗೂ ಪರಿಸರ ಜಾತ್ರೆಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೌರವಾರ್ಪಣೆ ನಡೆಯಲಿದೆ. ಪ್ರಶಸ್ತಿಯು ತಲಾ 25 ಸಾವಿರ ರೂ ನಗದು, ಬೆಳ್ಳಿಪದಕ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದೆ. ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಗರಿಮೆ ಪಡೆದಿರುವ ಜ್ಞಾನ ಗುರುರಾಜ್ ಕನ್ನಡ ವಾಹಿನಿಯ ಸರಿಗಮಪದ ಮೂಲಕ ಖ್ಯಾತಿ ಪಡೆದಿದ್ದಳು.

ಆರು ವರ್ಷ ಪ್ರಾಯದ ಈ ಪೋರಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಳು. ಎರಡೂವರೆ ವರ್ಷದಲ್ಲೇ ಸಂಗೀತ ಲೋಕಕ್ಕೆ ಏರಿದ್ದ ಈ ಪುಟ್ಟ ಬಾಲೆ ತೊದಲು ನುಡಿಯುವ ವಯಸ್ಸಿನಲ್ಲೇ ತನ್ನ ಮುದ್ದು ಕಂಠದಿಂದ ಸುಮಾರು 20 ಕ್ಕೂ ಅಧಿಕ ಹಾಡುಗಳನ್ನು ಹಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಳು. ಇವಳು ಈಗಾಗಲೇ 125 ಕ್ಕೂ ಅಧಿಕ ಮೆಡಲ್ಸ್‌ ಹಾಗೂ ಟ್ರೋಫಿಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.

ಜ್ಞಾನ ತಾಯಿ ರೇಖಾ ಅವರು ಕಡಬದ ಕೊಂಬಾರು ಗ್ರಾಮದ ಕಟ್ಟೆ ಇಡ್ಯಡ್ಕದವರಾಗಿದ್ದು, ಬೆಂಗಳೂರಿನ ರಾಮನಗರ ಹನುಮಾನ ಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿದ್ದಾರೆ. ಜ್ಞಾನ ತಂದೆ ಗುರುರಾಜ್ ಬೆಂಗಳೂರಿನಲ್ಲಿ ಸಂಗೀತ ಗುರುಗಳಾಗಿದ್ದಾರೆ. ಜ್ಞಾನ ನೂರಾರು ವೇದಿಕೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ, ಟಿ.ವಿ. ಶೋಗಳಲ್ಲಿ ಭಾಗವಹಿಸಿ ಖ್ಯಾತ ನಟರಿಂದ, ಸಂಗೀತ ಮಾಂತ್ರಿಕರಿಂದ ಭೇಷ್ ಎನಿಸಿಕೊಂಡವಳು.

ಇಂದು ಪ್ರಶಸ್ತಿ ಪಡೆಯುವ ಪ್ರಮುಖರು:

1. ಎ.ಎಸ್. ಕಿರಣ್ ಕುಮಾರ್‌, ವಿಜ್ಞಾನಿ ಮತ್ತು ಮಾಜಿ ಅಧ್ಯಕ್ಷ, ಇಸ್ರೋ ಬೆಂಗಳೂರು- ವಿಜ್ಞಾನ ತಂತ್ರಜ್ಞಾನ ಕ್ಷೇತ್ರ

2. ಸಂತೋಷ್ ಕುಮಾರ್‌ ರಾಜ್ಯಸಭಾ ಸದಸ್ಯ, ತೆಲಂಗಾಣ ಗ್ರೀನ್ ಇಂಡಿಯಾ ಚಾಲೆಂಜ್ ಸಂಸ್ಥಾಪಕ- ಪರಿಸರ ಸಂರಕ್ಷಣೆ

3. ಡಾ.ಚಂದ್ರಮೌಳಿ, 10 ರೂ . ಖ್ಯಾತಿಯ ವೈದ್ಯರು ಬೇಲೂರು ಹಾಸನ- ವೈದ್ಯಕೀಯ ಕ್ಷೇತ್ರ

4. ಡಾ.ಗೋವಿಂದ ಬಾಬು ಪೂಜಾರಿ, ಬಿಜೂರು, ಬೈಂದೂರು- ಸಮಾಜ ಸೇವಾ ಕ್ಷೇತ್ರ

5. ರಂಗನಾಥ್ ಭಾರದ್ವಾಜ್‌ ಪ್ರಧಾನ ನಿರ್ಮಾಪಕರು ಟಿ.ವಿ 9 ಕನ್ನಡ ಬೆಂಗಳೂರು, ಸಾಮಾಜಿಕ ಕಳಕಳಿ
6. ಸತ್ಯ ಮಾರ್ಗನಿ ಪರಿಸರ ಸಂರಕ್ಷಕರು ಕಡಿಯಂ ಪರಿಸರ ಆಂಧ್ರ ಪ್ರದೇಶ- ಪರಿಸರ ಸಂರಕ್ಷಣೆ, ಸಾಮಾಜಿಕ ಕಳಕಳಿ

7. ಡಾ. ಗುರುರಾಜ್ ಕರಜಗಿ, ಶಿಕ್ಷಣ ತಜ್ಞರು, ಸಂಶೋಧನಾ ಲೇಖಕರು ಬೆಂಗಳೂರು- ಶಿಕ್ಷಣ ಮತ್ತು ಸಾಮಾಜಿಕ ಕಳಕಳಿ

8. ಅಮರ್ ನಾಗೇಶ್‌ ರಾವ್‌ ಚಿಕ್ಕಬಳ್ಳಾಪುರ- ಸಮಾಜ ಸೇವಾ ಕ್ಷೇತ್ರ

9. ಕೆ.ಶಿವಕುಮಾರ್‌ ಪೊಲೀಸ್ ಇಲಾಖೆ- ಸಾರ್ವಜನಿಕ ಸೇವಾ ಕ್ಷೇತ್ರ

10. ಸತೀಶ್ ಭದ್ರಣ್ಣ ಪ್ರಧಾನ ಕಾರ್ಯದರ್ಶಿ ಆಸ್ಟ್ರೇಲಿಯ ಕನ್ನಡ ಒಕ್ಕೂಟ, ಆಸ್ಟ್ರೇಲಿಯ- ಸಾಮಾಜಿಕ ಕಳಕಳಿ.

ಇದನ್ನೂ ಓದಿ :ಎಸ್​ ಎಂ ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ: ಸಚಿವ ಅಶ್ವತ್ಥ ನಾರಾಯಣ್

ABOUT THE AUTHOR

...view details