ಕರ್ನಾಟಕ

karnataka

By

Published : Oct 2, 2020, 1:44 AM IST

ETV Bharat / city

ಮುನಿರತ್ನಗೆ ಟಿಕೆಟ್ ಅಂತಿಮಗೊಳಿಸುವಲ್ಲಿ ಸಿಎಂಗೆ ಹಿನ್ನಡೆ: ಹೈಕಮಾಂಡ್ ಮಟ್ಟದಲ್ಲಿ ಯಶಸ್ವಿಯಾಗ್ತಾರಾ ಬಿಎಸ್​ವೈ?

ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರಂಭಿಕ ಹಿನ್ನಡೆ ಅನಿಭವಿಸಿದ್ದಾರೆ. ಎಲ್ಲರಿಗೂ ಟಿಕೆಟ್ ಕೊಡುವುದಾಗಿ ನೀಡಿದ್ದ ಭರವಸೆ ಈಡೇರಿಕೆಗೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅಡ್ಡಿಯಾಗಿದ್ದಾರೆ.

bsy,muniranta,rrnagar bypoll
ಮುನಿರತ್ನಗೆ ಟಿಕೆಟ್ ಅಂತಿಮಗೊಳಿಸುವಲ್ಲಿ ಸಿಎಂಗೆ ಹಿನ್ನಡೆ

ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದ ಎಲ್ಲರಿಗೂ ಉಪ‌ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುನಿರತ್ನ ವಿಚಾರದಲ್ಲಿ ವಿಫಲರಾಗಿದ್ದು, ಹೈಕಮಾಂಡ್‌ ನಿರ್ಧಾರಕ್ಕೆ ಬಿಡಲಾಗಿದೆ.

ಹೌದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಕಾಂಗ್ರೆಸ್, ಜೆಡಿಎಸ್​ನ ಎಲ್ಲರಿಗೂ ಈ ಹಿಂದೆ ನಡೆದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಟಿಕೆಟ್ ನೀಡಲಾಗಿತ್ತು. ಸರ್ಕಾರ ರಚನೆಗೆ ಕಾರಣರಾದವರಿಗೆ ಟಿಕೆಟ್ ನೀಡಿ ಮಾತು ಉಳಿಸಿಕೊಳ್ಳಲೇಬೇಕು ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪ ಒತ್ತಡಕ್ಕೆ ಮಣಿದಿದ್ದ ರಾಜ್ಯ ಘಟಕ ಹೆಸರನ್ನು ಶಿಫಾರಸ್ಸು ಮಾಡಿತ್ತು. ಬಿಜೆಪಿ ಹೈಕಮಾಂಡ್ ಅವರಿಗೆಲ್ಲಾ ಟಿಕೆಟ್ ನೀಡಲು ಸಮ್ಮತಿಸಿತ್ತು. ಜೊತೆಗೆ ಬಳಿಕ ಗೆದ್ದ ಶಾಸಕರಿಗೆ ಕೊಟ್ಟ ಮಾತಿನಂತೆ ಸಚಿವ ಸ್ಥಾನವನ್ನೂ ನೀಡಿದ್ದ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಸೋತ ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್ ಹಾಗೂ ಪಕ್ಷದ ಸೂಚನೆಯಂತೆ ಉಪ ಚುನಾವಣಾ ಕಣದಿಂದ ಹಿಂದೆ ಸರಿದಿದ್ದ ಆರ್.ಶಂಕರ್ ಅವರನ್ನು ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಆದರೆ ಇದೀಗ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ಎಲ್ಲರಿಗೂ ಟಿಕೆಟ್ ಕೊಡುವುದಾಗಿ ನೀಡಿದ್ದ ಭರವಸೆ ಈಡೇರಿಕೆಗೆ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅಡ್ಡಿಯಾಗಿದ್ದಾರೆ.

ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರ್.ಆರ್.ನಗರ ಕ್ಷೇತ್ರದಿಂದ ಮುನಿರತ್ನಗೆ ಟಿಕೆಟ್ ನೀಡುವಂತೆ ಪ್ರಸ್ತಾಪ ಮಂಡಿಸಿದರು. ಸರ್ಕಾರ ರಚನೆಗೆ ಕಾರಣರಾದವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ, ಹಾಗಾಗಿ ಒಂದೇ ಹೆಸರನ್ನು ಕಳಿಸೋಣ ಎಂದರು. ಆದರೆ ತುಳಸಿ ಮುನಿರಾಜುಗೌಡ ಹೆಸರನ್ನೂ ಪರಿಗಣಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿಂದೆ ನಡೆದ ಉಪ ಚುನಾವಣೆಯಲ್ಲಿನ ಚಿತ್ರಣವೇ ಬೇರೆ ಈಗ ಬೇರೆ ಇದೆ, ಇಬ್ಬರ ಹೆಸರು ಕಳಿಸೋಣ. ಹೈಕಮಾಂಡ್ ಈ ಬಗ್ಗೆ ತೀರ್ಮಾನಿಸಲಿ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಎಷ್ಟೇ ಮನವಿ ಮಾಡಿದರೂ ಒಂದೇ ಹೆಸರು ಕಳಿಸಲು ಒಮ್ಮತಕ್ಕೆ ಬರಲು ಕೋರ್ ಕಮಿಟಿ ಸಭೆಯಲ್ಲಿ ಸಾಧ್ಯವಾಗಿಲ್ಲ. ಅಂತಿಮವಾಗಿ ಎರಡು ಹೆಸರನ್ನು ಕಳಿಸುವ ನಿರ್ಣಯ ಕೈಗೊಳ್ಳಲಾಗಿದೆ.

ಕೋರ್ ಕಮಿಟಿ‌ ಸಭೆಗೂ ಮುನ್ನ ಸಚಿವರಾದ ಎಸ್.ಟಿ ಸೋಮಶೇಖರ್, ಡಾ.ಸುಧಾಕರ್ ಹಾಗೂ ಬೈರತಿ ಬಸವರಾಜ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದ್ದರು. ಆರ್.ಆರ್.ನಗರ ಕ್ಷೇತ್ರದಿಂದ ಮುನಿರತ್ನ ಅವರ ಒಂದೇ ಹೆಸರನ್ನು ಕೋರ್ ಕಮಿಟಿ ಸಭೆಯಿಂದ ಶಿಫಾರಸ್ಸು ಮಾಡಿಸಿ ಎಂದು ಒತ್ತಾಯಿಸಿದ್ದರು. ಆದರೆ ಖಚಿತ ಭರವಸೆ ನೀಡದ ಸಿಎಂ, ಅವರಿಗೆಲ್ಲಾ ಪ್ರಯತ್ನ ನಡೆಸುವ ಹೇಳಿಕೆ ನೀಡಿದ್ದರು. ಕಡೆಗೂ ಒಂದೇ ಹೆಸರನ್ನು ಅಂತಿಮಗೊಳಿಸುವಲ್ಲಿ ಸಿಎಂ ಯಡಿಯೂರಪ್ಪ ವಿಫಲರಾಗಿದ್ದು, ರಾಜೀನಾಮೆ ಕೊಟ್ಟು ಬಂದವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಮೊದಲ ಬಾರಿ ಹಿನ್ನಡೆ ಅನುಭವಿಸಿದ್ದಾರೆ.

ಇದೀಗ ಆರ್.ಆರ್.ನಗರ ಕ್ಷೇತ್ರದಿಂದ ಯಡಿಯೂರಪ್ಪ ಕಡೆಯಿಂದ ಮುನಿರತ್ನ ಹೆಸರು, ಸಂಘಟನೆ ಕಡೆಯಿಂದ ತುಳಸಿ ಮುನಿರಾಜುಗೌಡ ಹೆಸರನ್ನು ಹೈಕಮಾಂಡ್​ಗೆ ಕಳಿಸಲಾಗಿದ್ದು, ಹೈಕಮಾಂಡ್ ನಿರ್ಧಾರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರವನ್ನು ಬಿಡಲಾಗಿದೆ.

ರಾಜ್ಯ ಮಟ್ಟದಲ್ಲೇ ಮುನಿರತ್ನಗೆ ಟಿಕೆಟ್ ಅಂತಿಮಗೊಳಿಸುವ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಯತ್ನ ವಿಫಲವಾಗಿದ್ದು, ಇದೀಗ ದೆಹಲಿ ಮಟ್ಟದಲ್ಲಿ ಪ್ರಯತ್ನ ನಡೆಸಬೇಕಿದೆ. ಸದ್ಯದಲ್ಲೇ ದೆಹಲಿ ಪ್ರವಾಸಕ್ಕೆ ಮುಂದಾಗಿರುವ ಸಿಎಂ, ವರಿಷ್ಠರ ಭೇಟಿ ವೇಳೆ ಮುನಿರತ್ನ ಪರ ಬ್ಯಾಟಿಂಗ್ ಮಾಡಲಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಹಾಗಾಗಿ ಮುನಿರತ್ನಗೆ ಟಿಕೆಟ್ ಅಂತಿಮಗೊಳಿಸುವಂತೆ ಒತ್ತಾಯ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details