ಕರ್ನಾಟಕ

karnataka

ಬೆಂಗಳೂರು ಗಲಭೆ: ಜನರು ಪ್ರಕರಣ ಮರೆಯುವ ಮೊದಲೇ ಕ್ರಮ ಕೈಗೊಳ್ಳಿ ಎಂದ ಹೈಕೋರ್ಟ್

By

Published : Oct 20, 2020, 5:54 PM IST

ಬೆಂಗಳೂರಿನ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆಯನ್ನು ಎನ್ಐಗೆ ವಹಿಸಲು ಹಾಗೂ ಗಲಭೆಯಲ್ಲಿ ಆಗಿರುವ ನಷ್ಟದ ಹೊಣೆಗಾರಿಕೆ ನಿಗದಿಪಡಿಸಿ ವಸೂಲು ಮಾಡಲು ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಕೋರಿ, ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

riot-case-take-steps-to-make-people-forget-high-court-order
ಗಲಭೆ ಪ್ರಕರಣ: ಜನ ಮರೆತು ಹೋಗುವಷ್ಟರಲ್ಲಿ ಕ್ರಮ ಕೈಗೊಳ್ಳಿ, ಹೈಕೋರ್ಟ್ ಆದೇಶ

ಬೆಂಗಳೂರು: ಜನರ ನೆನಪಿನ ಶಕ್ತಿ ಕಡಿಮೆ, ಹೀಗಾಗಿ ಜನ ಮರೆತು ಹೋಗುವಷ್ಟರಲ್ಲಿ ಅಗತ್ಯ ಕ್ರಮ ಜರುಗಿಸಿ ಎಂದು ಹೈಕೋರ್ಟ್ ಡಿ ಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಮೌಖಿಕವಾಗಿ ಆದೇಶಿಸಿದೆ.

ಗಲಭೆ ಪ್ರಕರಣದ ತನಿಖೆಯನ್ನು ಎನ್ಐಗೆ ವಹಿಸಲು ಹಾಗೂ ಗಲಭೆಯಲ್ಲಿ ಆಗಿರುವ ನಷ್ಟದ ಹೊಣೆಗಾರಿಕೆ ನಿಗದಿಪಡಿಸಿ ವಸೂಲು ಮಾಡಲು ಕ್ಲೇಮ್ ಕಮಿಷನರ್ ನೇಮಕ ಮಾಡುವಂತೆ ಕೋರಿ, ಸಲ್ಲಿಸಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಎನ್ಐಎ ಸೇರಿದಂತೆ ತನಿಖಾ ಸಂಸ್ಥೆಗಳು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದ ತನಿಖಾ ಪ್ರಗತಿ ವರದಿಯನ್ನು ಪರಿಶೀಲಿಸಿದ ಪೀಠ, ಮತ್ತೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲೇ ಭದ್ರವಾಗಿರಿಸಲು ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿತು. ಬಳಿಕ ಕ್ಲೇಮ್ ಕಮಿಷನರ್​ಗೆ ಎಲ್ಲ ಸೂಕ್ತ ವ್ಯವಸ್ಥೆ ಮಾಡಲಾಗಿದೆಯೇ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು ಕಚೇರಿ, ಸಿಬ್ಬಂದಿ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಇದೇ ವೇಳೆ ಅರ್ಜಿದಾರ ವಕೀಲ ಎನ್ ಪಿ ಅಮೃತೇಶ್ ಪೀಠಕ್ಕೆ ಮನವಿ ಮಾಡಿ, ಕ್ಲೇಮ್ ಕಮಿಷನರ್ ಕಚೇರಿಯನ್ನು ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ನೀಡಿದರೆ ಸಾರ್ವಜನಿಕರು ದೂರು ನೀಡಲು, ವ್ಯವಹರಿಸಲು ಕಷ್ಟವಾಗಬಹುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮೊದಲು ಕ್ಲೇಮ್ ಕಮಿಷನರ್​ಗೆ ನೀಡಿರುವ ಕಚೇರಿ, ಸೌಲಭ್ಯಗಳ ಕುರಿತು ಸರ್ಕಾರ ವರದಿ ನೀಡಲಿ. ನಂತರ ಈ ಕುರಿತು ಪರಿಶೀಲಿಸೋಣ ಎಂದಿತು. ಅಲ್ಲದೇ, ಕ್ಲೇಮ್ ಕಮಿಷನರ್ ಗೆ ಅಧಿಕಾರ ನೀಡಿ ಹೊರಡಿಸಿರುವ ಅಧಿಸೂಚನೆ ದೋಷಪೂರಿತವಾಗಿದೆ. ಹೀಗಾಗಿ ಸರ್ಕಾರ ಲೋಪಗಳನ್ನು ಸರಿಪಡಿಸಿ, ಹೊಸದಾಗಿ ಅಧಿಸೂಚನೆ ಹೊರಡಿಸಬೇಕು. ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ನೀಡಿ, ಅವರಿಗೆ ಕಾರ್ಯಾರಂಭ ಮಾಡಲು ಎಲ್ಲ ವ್ಯವಸ್ಥೆ ಮಾಡಬೇಕು. ಈ ಕುರಿತ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details