ಕರ್ನಾಟಕ

karnataka

ETV Bharat / city

ಹೈಕೋರ್ಟ್ ನೆಲಮಹಡಿ ಕಚೇರಿಗಳ ಸ್ಥಳಾಂತರ : ಹೆಚ್ಚುವರಿ ಮಾಹಿತಿ ಸಲ್ಲಿಸಿದ ರಿಜಿಸ್ಟ್ರಾರ್ ಜನರಲ್ - Registrar General submitted additional information to the High Court

ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲದೆ, ಆ ಕಚೇರಿಗಳಲ್ಲಿನ ಸಿಬ್ಬಂದಿ ಪ್ರತಿ ದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದ್ದಾರೆ. ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ತಳಮಹಡಿಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ..

High Court
ಹೈಕೋರ್ಟ್

By

Published : Oct 2, 2021, 6:40 PM IST

ಬೆಂಗಳೂರು :ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಕಟ್ಟಡದ ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳನ್ನು ಸ್ಥಳಾಂತರಿಸಲು ನಗರದ ಅರಮನೆ ರಸ್ತೆಯ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಕಟ್ಟಡದ ಮೊದಲನೇ ಮಹಡಿಯ ಎರಡು ಕೊಠಡಿಗಳನ್ನು ಸುಪರ್ದಿಗೆ ಪಡೆಯಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಈ ಕುರಿತು ತುಮಕೂರಿನ ವಕೀಲ ಎಲ್ ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರ್ ಗೌಡ ಅವರು ಈ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ಮೊದಲನೇ ಮಹಡಿಯ ಕೊಠಡಿ 6 ಮತ್ತು 8 ಅನ್ನು 2021ರ ಸೆ.21ರಂದು ಹೈಕೋರ್ಟ್ ವಿಶೇಷ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸುಪರ್ದಿಗೆ ಪಡೆದುಕೊಂಡಿದ್ದಾರೆ.

ತಳಮಹಡಿಯಲ್ಲಿರುವ ಕೋರ್ಟ್ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸಲು ನಿರ್ದೇಶನ ಕೋರಿ ಹೈಕೋರ್ಟ್ ಕಟ್ಟಡ ಸಮಿತಿಗೆ ಮನವಿ ಮಾಡಲಾಗಿದೆ. ಸಮಿತಿಯ ನಿರ್ದೇಶನಕ್ಕೆ ಕಾಯುತ್ತಿರುವುದಾಗಿ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅಲ್ಲದೇ, ನಗರದ ಆನಂದ್‌ ರಾವ್ ವೃತ್ತದ ಬಳಿ ನಿರ್ಮಾಣವಾಗುತ್ತಿರುವ ಇಂಧನ ಭವನದಲ್ಲಿ ಒಂದು ಲಕ್ಷ ಚದರ ಅಡಿ ನಿರ್ಮಿತ ಪ್ರದೇಶವನ್ನು ಹೈಕೋರ್ಟ್‌ಗೆ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೆ.16ರಂದು ಕೋರಲಾಗಿದೆ.

ಮಹಡಿಯ ನಕ್ಷೆ ಒದಗಿಸಲಾಗಿದೆ. ಆ ಜಾಗವು ಹೈಕೋರ್ಟ್ ಬಳಕೆಗೆ ಮೀಸಲಿಟ್ಟಿರುವುದಾಗಿ ನಕ್ಷೆಯಲ್ಲಿ ತೋರಿಸಲಾಗಿದೆ. ಇನ್ನು ಬಾಡಿಗೆ ಮತ್ತು ನಿರ್ವಹಣೆ ಶುಲ್ಕ ನಿಗದಿಪಡಿಸಬೇಕಿದೆ. ಆ ಕುರಿತು ಮಾಹಿತಿ ನೀಡಲಾಗುವುದು. ಈ ವಿಚಾರವನ್ನೂ ಹೈಕೋರ್ಟ್ ಕಟ್ಟಡ ಸಮಿತಿ ಮುಂದೆ ಇರಿಸಲಾಗಿದೆ.

ಸಮಿತಿಯು ಇಂಧನ ಭವನದಲ್ಲಿ ಗುರುತಿಸಲಾಗಿರುವ ನಿಖರ ಸ್ಥಳದ ಮಾಹಿತಿ ಕೋರಿದೆ. ಇಂಧನ ಇಲಾಖೆಯಿಂದ ಆ ಮಾಹಿತಿ ಪಡೆಯಬೇಕಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ತಳಮಹಡಿಯಲ್ಲಿರುವ ಕಚೇರಿಗಳನ್ನು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಕಟ್ಟಡದ ನೆಲ ಮಹಡಿಗೆ ಸ್ಥಳಾಂತರ ವಿಚಾರದಲ್ಲಿ ಆದ ಬೆಳವಣಿಗೆ ಕುರಿತು ಮಾಹಿತಿ ನೀಡುವಂತೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್ ಸಿ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠವು 2021ರ ಸೆ.3ರಂದು ರಿಜಿಸ್ಟ್ರಾರ್ ಜನರಲ್‌ಗೆ ನಿರ್ದೇಶಿಸಿತ್ತು.

ಈ ಅರ್ಜಿ ಅ.8ರಂದು ನ್ಯಾಯಪೀಠದ ಮುಂದೆ ಮತ್ತೆ ವಿಚಾರಣೆಗೆ ಬರಲಿದೆ. ರಾಜ್ಯ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠದ ಸಂಕೀರ್ಣದಲ್ಲಿ ಬೋರ್ಡ್ ಬ್ರ್ಯಾಂಚ್, ಸಿವಿಲ್ ಹಾಗೂ ಕ್ರಿಮಿನಲ್ ಬ್ರ್ಯಾಂಚ್ ಸೇರಿದಂತೆ ಇತರೆ ಕಚೇರಿ ಹಾಗೂ ಶಾಖೆಗಳು ತಳಮಹಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲದೆ, ಆ ಕಚೇರಿಗಳಲ್ಲಿನ ಸಿಬ್ಬಂದಿ ಪ್ರತಿ ದಿನ ಉಸಿರುಗಟ್ಟಿದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದ್ದಾರೆ. ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ತಳಮಹಡಿಯಲ್ಲಿರುವ ಕಚೇರಿ ಹಾಗೂ ಶಾಖೆಗಳನ್ನು ಸ್ಥಳಾಂತರಿಸಲು ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂ ಓದಿ:ಹೈಕೋರ್ಟ್ ನೆಲಮಹಡಿ ಕಚೇರಿಗಳ ಸ್ಥಳಾಂತರ ಕೋರಿ ಅರ್ಜಿ; ಮಾ.17ಕ್ಕೆ ಮುಂದಿನ ವಿಚಾರಣೆ

ABOUT THE AUTHOR

...view details