ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹಾಗೂ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಮಧ್ಯೆ ನಿನ್ನೆ ನೆಡೆದಿದ್ದ ವಾಕ್ಸಮರದ ಟೀಕೆ-ಟಿಪ್ಪಣಿ ಇಂದೂ ಸಹ ಪ್ರತಿಧ್ವನಿಸಿ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಹೀಗಾಗಿ, ಸ್ಪೀಕರ್ ಅವರು ಕಲಾಪವನ್ನು ಕೆಲಕಾಲ ಮುಂದೂಡಿದರು.
ಇಂದು ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ರಮೇಶ್ ಕುಮಾರ್ ವಿರುದ್ಧ ಸಿಡಿದೆದ್ದ ಸಚಿವ ಈಶ್ವರಪ್ಪ, ಅವರನ್ನು (ರಮೇಶ್ ಕುಮಾರ್) ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು. ಈಶ್ವರಪ್ಪ ಅವರಿಗೆ ಬಿಜೆಪಿ ಶಾಸಕರು ಸಹ ಸಾಥ್ ನೀಡಿದರು.
ಒಬ್ಬ ಸಚಿವರ ವಿರುದ್ಧ ರಮೇಶ್ ಕುಮಾರ್ ಮಾತನಾಡಿದ್ದು ಸರಿಯಲ್ಲ. ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಆಗ ಬಿಜೆಪಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ಮಧ್ಯೆ ಸಿದ್ದರಾಮಯ್ಯ ಮಾತನಾಡಿ, ಹಕ್ಕುಚ್ಯುತಿ ಮೇಲಿನ ಚರ್ಚೆಗೆ ಅವಕಾಶ ಕೊಡಬೇಕು ಒತ್ತಾಯಿಸಿದಾಗ, ಕಾಂಗ್ರೆಸ್ ಸದಸ್ಯರು ಬೆಂಬಲಿಸಿದರು.
ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿದ್ದರಾಮಯ್ಯ ಅವರು ನೀಡಿದ ಹಕ್ಕುಚ್ಯುತಿ ಮೇಲಿನ ಚರ್ಚೆಗೆ ಅವಕಾಶ ಕೊಡುತ್ತೇನೆ. ಸಚಿವ ಡಾ. ಕೆ.ಸುಧಾಕರ್ ಕೂಡ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ. ಅವರಿಗೂ ಚರ್ಚೆಗೆ ಅವಕಾಶ ಕೊಡುತ್ತೇನೆ. ಎರಡೂ ಕಡೆ ಹಕ್ಕುಚ್ಯುತಿ ನನಗೆ ತಲುಪಿದೆ. ಪ್ರಶ್ನೋತ್ತರದ ನಂತರ ಹಕ್ಕುಚ್ಯುತಿ ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು.
ಸದನಕ್ಕೆ ರಮೇಶ್ ಕುಮಾರ್ ಬಾರದಿದ್ದಾಗ, ಅವರು ಪಲಾಯನವಾದಿ ಎಂದು ಬಿಜೆಪಿ ಸದಸ್ಯರು ಕೂಗಿದರು. ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ಗಲಾಟೆಯಲ್ಲಿ ಸದನ ನಡೆಸಲು ಆಗಲ್ಲ ಎಂದು ಸ್ಪೀಕರ್ ಸದನವನ್ನು ಕೆಲಕಾಲ ಮುಂದೂಡಿದರು.
ಸ್ಪೀಕರ್ ಕಚೇರಿಯಲ್ಲಿ ಸಭೆ: ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಪ್ರಮುಖರ ಸಂಧಾನ ಸಭೆ ಸ್ಪೀಕರ್ ಕಚೇರಿಯಲ್ಲಿ ನಡೆಯುತ್ತಿದೆ. ಉಭಯ ನಾಯಕರನ್ನು ಮನವೊಲಿಸಲು ಸ್ಪೀಕರ್ ಯತ್ನಿಸುತ್ತಿದ್ದಾರೆ. ಸಚಿವರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಧುಸ್ವಾಮಿ, ಸುಧಾಕರ್, ಸರ್ಕಾರಿ ಮುಖ್ಯಸಚೇತಕ ಸುನೀಲ್ ಕುಮಾರ್ ಸಭೆಯಲ್ಲಿ ಭಾಗವಹಿಸಿದ್ದಾರೆ.