ಬೆಂಗಳೂರು :ಬಿಬಿಎಂಪಿ ವ್ಯಾಪ್ತಿಯಲ್ಲಿ 12 ಹೈ ಟ್ರಾಫಿಕ್ ಡೆನ್ಸಿಟಿ ಕಾರಿಡಾರ್ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ ಕಾಮಗಾರಿ ಹೆಸರಿನಲ್ಲಿ ಕೋಟ್ಯಂತರ ರೂ. ಲೂಟಿ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಕಾಂಗ್ರೆಸ್ ಮೇಯರ್ಗಳ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರಿಡಾರ್ ರಸ್ತೆ ಕಾಮಗಾರಿಗೆ 335 ಕೋಟಿ ರೂ.ವೆಚ್ಚವಾದರೆ, ರಸ್ತೆ ನಿರ್ವಹಣೆಗೆ ವಾರ್ಷಿಕವಾಗಿ ₹150 ಕೋಟಿಯಂತೆ ಒಟ್ಟು ಐದು ವರ್ಷಕ್ಕೆ 785.31 ಕೋಟಿ ರೂ. ನಿಗದಿಯಾಗಿದೆ. ಇದರ ಹಿಂದೆ ಲೂಟಿ ಮಾಡುವ ಹುನ್ನಾರ ಇದೆ ಎಂದು ಆರೋಪಿಸಿದರು.
ಯಾರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ? :ದೇಶದೆಲ್ಲೆಡೆ ನಿರ್ಮಿಸಿರುವ ರಸ್ತೆಗಳಿಗೆ 2 ವರ್ಷಗಳ ದೋಷ ಬಾಧ್ಯತಾ ಅವಧಿ ಕಡ್ಡಾಯವಾಗಿರುತ್ತದೆ. ನಿಯಮಾನುಸಾರ ಈ ನಿರ್ವಹಣೆಯನ್ನು ಗುತ್ತಿಗೆದಾರರು ಮಾಡಬೇಕು. ಹೀಗಿದ್ದರೂ 335 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆಗಳಿಗೆ ಎರಡು ವರ್ಷ 291.35 ಕೋಟಿ ನೀಡಿ ನಿರ್ವಹಣೆ ಮಾಡುವುದರ ಹಿಂದೆ ಯಾರಿಗೆ ಅನುಕೂಲ ಮಾಡಿ ಕೊಡುವ ಉದ್ದೇಶ ಇದೆ ಎಂದು ಕಿಡಿಕಾರಿದ್ದಾರೆ.
ಕಾಮಗಾರಿಯನ್ನು ಬಿಬಿಎಂಪಿಯಿಂದ ಕಿತ್ತು ಕೆಆರ್ಡಿಸಿಎಲ್ಗೆ ನೀಡಿರುವ ಹಿಂದೆ ಅಕ್ರಮ ಇದೆ ಎಂದು ಆರೋಪಿಸಿದೆ. ಬಿಬಿಎಂಪಿ ರಸ್ತೆ ನಿರ್ವಹಣೆಗೆ ಒಂದು ರೂ. ನೀಡದ ರಾಜ್ಯ ಸರ್ಕಾರ, ಕೆಆರ್ಡಿಸಿಎಲ್ಗೆ ಪ್ರತಿ ವರ್ಷ 150 ಕೋಟಿ ರೂ. ನೀಡಿರುವುದು ಏಕೆ?. ರಸ್ತೆ ಕಾಮಗಾರಿಯನ್ನು ಕೆಆರ್ಡಿಸಿಎಲ್ಗೆ ನೀಡಿರುವುದರ ಹಿಂದೆ ಯಾವ ಶಕ್ತಿ ಇದೆ?. ಈ 335 ಕೋಟಿ ಮೊತ್ತವನ್ನು ರಸ್ತೆ ಗುಂಡಿ ಮುಚ್ಚಲು ಬಳಸಬೇಕು ಎಂದು ರಾಮಲಿಂಗ ರೆಡ್ಡಿ ಒತ್ತಾಯಿಸಿದ್ದಾರೆ.