ಕರ್ನಾಟಕ

karnataka

ETV Bharat / city

ಖಾಸಗಿ ಶಾಲೆಗಳ ಶುಲ್ಕ ವಿವಾದ: ಸರ್ಕಾರದ ಆದೇಶ ರದ್ದು​, ಶೇ.15ರಷ್ಟು ರಿಯಾಯಿತಿಗೆ ಹೈಕೋರ್ಟ್ ಆದೇಶ

ಖಾಸಗಿ ಶಾಲೆಗಳು ತಮ್ಮ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ರಿಯಾಯಿತಿ ನೀಡಬೇಕೆಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಜೊತೆಗೆ ಪ್ರಸಕ್ತ ಸಾಲಿನಲ್ಲಿ ಶೇ.15ರಷ್ಟು ರಿಯಾಯಿತಿ ನೀಡುವಂತೆ ಆದೇಶಿಸಿದೆ.

By

Published : Sep 16, 2021, 3:51 PM IST

Private School fee
Private School fee

ಬೆಂಗಳೂರು:ಕೋವಿಡ್ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ಕಡಿತ ಮಾಡಿದ್ದ ಸರ್ಕಾರದ ಆದೇಶ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಈ ಕುರಿತಂತೆ ಖಾಸಗಿ ಶಾಲೆಗಳು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಇಂದು ಇತ್ಯರ್ಥಪಡಿಸಿರುವ ಹೈಕೋರ್ಟ್, 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಶೇ.15 ರಷ್ಟು ಶುಲ್ಕ ರಿಯಾಯಿತಿಗೆ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ರಾಜ್ಯದ ಖಾಸಗಿ ಶಾಲೆಗಳು ಹಾಗೂ ಸರ್ಕಾರದ ನಡುವಿನ ಬಿಕ್ಕಟ್ಟನ್ನು ಹೈಕೋರ್ಟ್‌ ಪರಿಹರಿಸಿದೆ. ಸರ್ಕಾರದ ಶುಲ್ಕ ಕಡಿತ ಆದೇಶವನ್ನು ರದ್ದುಪಡಿಸುವಂತೆ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಸೇರಿ ಹಲವು ಸಂಘಟನೆಗಳು ಹೈಕೋರ್ಟ್​ಗೆ ತಕರಾರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ಪೀಠ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಿರುವ ಪೀಠ, 2019-20ನೇ ಸಾಲಿನಲ್ಲಿ ಎಷ್ಟು ಶುಲ್ಕವನ್ನು ಸಂಗ್ರಹ ಮಾಡಲಾಗಿತ್ತೋ ಅದರಲ್ಲಿ ಶೇ.15ರಷ್ಟು ವಿನಾಯ್ತಿ ನೀಡಿದೆ. ಹಾಗೆಯೇ, 2020-21ನೇ ಸಾಲಿನಲ್ಲಿ ಖಾಸಗಿ ಶಾಲೆಗಳು ಶೇ.15ರಷ್ಟು ರಿಯಾಯಿತಿ ನೀಡಿ ಶುಲ್ಕ ಸಂಗ್ರಹಿಸಿಲು ಅವಕಾಶ ನೀಡಿದೆ. 2021ರ ಮೇ 3ರಂದು ಸುಪ್ರೀಂಕೋರ್ಟ್ ಜೋಧ್ ಪುರದ ಇಂಡಿಯನ್ ಸ್ಕೂಲ್ ಮತ್ತು ರಾಜಸ್ಥಾನ ಪ್ರಕರಣದಲ್ಲಿ 2020-21ನೇ ಸಾಲಿಗೆ ಶೇ.15 ರಷ್ಟು ರಿಯಾಯಿತಿ ನೀಡಿ ಉಳಿದ ಶುಲ್ಕವನ್ನು ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ನೀಡಿತ್ತು. ಹಾಗೆಯೇ, ಶಾಲೆಗಳು ಶುಲ್ಕದ ಕಾರಣಕ್ಕೆ ಮಕ್ಕಳನ್ನು ಆನ್ ಲೈನ್ ತರಗತಿಗಳಿಂದ ನಿರ್ಬಂಧಿಸಬಾರದು ಎಂದು ಸೂಚಿಸಿತ್ತು. ಇದೇ ತೀರ್ಪು ಆಧರಿಸಿ ರಾಜ್ಯ ಹೈಕೋರ್ಟ್ ಕೂಡ ಶುಲ್ಕ ವಿವಾದವನ್ನು ಬಗೆಹರಿಸಿದೆ.

ಪ್ರಕರಣದ ಹಿನ್ನೆಲೆ:

ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪೋಷಕರಿಗೆ ಪೂರಕವಾಗಿ ಸರ್ಕಾರ ಖಾಸಗಿ ಶಾಲೆಗಳು ತಮ್ಮ ಬೋಧನಾ ಶುಲ್ಕದಲ್ಲಿ ಶೇ.70 ರಷ್ಟನ್ನು ಮಾತ್ರವೇ ಪಡೆಯಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ಖಾಸಗಿ ಶಾಲೆಗಳ ಒಕ್ಕೂಟ, ಶೇ.30 ರಷ್ಟು ಶುಲ್ಕ ಸಂಗ್ರಹಿಸದಂತೆ ಸರ್ಕಾರ ಹೊರಡಿಸಿರುವ ಆದೇಶ ನಿಯಮಬಾಹಿರ. ಸರ್ಕಾರದಿಂದ ಯಾವುದೇ ಅನುದಾನ ಪಡೆಯದ ಶಾಲೆಗಳಿಗೆ ಇಂತಹ ನಿಯಮ ವಿಧಿಸುವ ಅಧಿಕಾರವಿಲ್ಲ.

ಹಾಗೆಯೇ, ಕೋವಿಡ್​​ನಿಂದಾಗಿ ಶಾಲೆಗಳು ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಶಿಕ್ಷಕರು ಮತ್ತು ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶುಲ್ಕ ಸಂಗ್ರಹಕ್ಕೆ ನಿರ್ಬಂಧ ವಿಧಿಸಿರುವ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಖಾಸಗಿ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಮಧ್ಯಂತರ ಆದೇಶ ನೀಡಿ ಖಾಸಗಿ ಶಾಲೆಗಳ ಮೇಲೆ ಸರ್ಕಾರ ಬಲವಂತದ ಕ್ರಮ ಕೈಗೊಳ್ಳಬಾರದು. ಹಾಗೆಯೇ ಶಾಲೆಗಳೂ ಪೋಷಕರಿಗೆ ಶುಲ್ಕಕ್ಕಾಗಿ ಒತ್ತಾಯಿಸುವುದು ಅಥವಾ ಮಕ್ಕಳಿಗೆ ಶಿಕ್ಷಣ ನಿರಾಕರಿಸುವುದನ್ನು ಮಾಡಬಾರದು ಎಂದಿತ್ತು. ವಿವಾದ ಬಗೆಹರಿಸಲು ಸರ್ಕಾರ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ ರಚನೆಗೆ ಪ್ರಸ್ತಾವ ಮುಂದಿಟ್ಟಿತ್ತು.

ಇದನ್ನೂ ಓದಿ: ಶುಲ್ಕಕ್ಕೆ ಪಟ್ಟು ಹಿಡಿದು ಸರ್ಕಾರಿ ಶಾಲೆಗೆ ಟಿಸಿ ಕೊಡದ ಖಾಸಗಿ ಶಾಲೆ: ವಿದ್ಯಾರ್ಥಿ ಪರದಾಟ

ABOUT THE AUTHOR

...view details