ಬೆಂಗಳೂರು : ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದರು.
ಕೋವಿಡ್ ಸಾಂಕ್ರಾಮಿಕದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ರಾಜ್ಯದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸೇರಿದಂತೆ 10 ರಾಜ್ಯಗಳ ಒಟ್ಟು 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಮೋದಿಯವರ ವಿಡಿಯೋ ಕಾನ್ಫರೆನ್ಸ್ ಉಪಯುಕ್ತವಾಗಿತ್ತು. ಅವರ ಉದ್ದೇಶ ಬೇರೆ ರಾಜ್ಯಗಳಲ್ಲಿ ವಿನೂತನವಾಗಿ ತೆಗೆದುಕೊಂಡಿರೋ ಕ್ರಮ ಏನು?. ಯಶಸ್ವಿ ಪ್ರಯೋಗ ಏನು, ಅದನ್ನು ಎಲ್ಲರೂ ಅಳವಡಿಸಿಕೊಳ್ಳಬಹುದಾ ಎಂಬ ಚರ್ಚೆ ಮಾಡಿದರು ಎಂದು ಗೃಹ ಸಚಿವರು ಸಭೆಯ ಬಗ್ಗೆ ವಿವರಿಸಿದರು.
ರಾಜ್ಯದಲ್ಲಿ ಕೈಗೊಂಡಿರುವ ಕ್ರಮದ ಬಗ್ಗೆ ಡಿಸಿಎಂ, ಬಿಬಿಎಂಪಿ ಮುಖ್ಯ ಆಯುಕ್ತರು ವಿವರಿಸಿದ್ದಾರೆ. ಟ್ರಯಾಜ್ ಸೆಂಟರ್ ಲಭ್ಯತೆ ಬಗ್ಗೆ ಬೇರೆ ಬೇರೆ ರಾಜ್ಯದಲ್ಲಿ ಏನು ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ.
ಗ್ರಾಮೀಣ ಮತ್ತು ಸೆಮಿ ಅರ್ಬನ್ ಪ್ರದೇಶಗಳಲ್ಲಿ ಕೊರೊನಾ ಹರಡುತ್ತಿದ್ದು, ವ್ಯಾಪಕತೆ ಜಾಸ್ತಿ ಇದೆ. ಸೋಂಕು ನಿಯಂತ್ರಿಸಲು ಜನರ ತೊಡಗಿಸಿಕೊಳ್ಳುವ ಕೆಲಸ ಆಗಬೇಕು.
ಮೈಕ್ರೋ ಕಂಟೇನ್ಮೆಂಟ್ ಯಶಸ್ವಿಯಾಗಿ ಮಾಡಬೇಕು. ಇದರಿಂದ ಸೋಂಕು ಹರೋಡೋದು ತಪ್ಪಿಸಬಹುದು ಎಂದು ಪ್ರಧಾನಿಗೆ ತಿಳಿಸಿದ್ದಾರೆ ಎಂದರು.
ಗ್ರಾಮಗಳಲ್ಲಿ ಎಲ್ಲರೂ ಅಂಗಡಿಗಳಿಗೆ ಹೋಗುವ ಬದಲು, ಕೆಲವರೇ ಹೋಗಿ ಖರೀದಿ ಮಾಡುವುದು ಸೂಕ್ತ. ಆರೋಗ್ಯ ಸೌಕರ್ಯಕ್ಕೆ ಒತ್ತು ನೀಡಬೇಕು. ಮಧ್ಯಪ್ರದೇಶದ ಗ್ರಾಮ ಪಂಚಾಯತ್ಗಳಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಉತ್ತಮ ಕೆಲಸ ಆಗಿದೆ.
ಮಕ್ಕಳಲ್ಲಿ ಮನೋಬಲ ತುಂಬಿಸಲು, ಕಾರ್ಟೂನ್, ಹಾಡು, ಸ್ಥಳೀಯ ಭಾಷೆಯಲ್ಲಿ ಜಾಗೃತಿ ಮೂಡಿಸಬೇಕು. ಲಸಿಕೆ ಉಳಿತಾಯ ಮಾಡುವ ಬಗ್ಗೆ ಕೂಡ ತಿಳಿಸಿದ್ದಾರೆ. ಡಿಸಿಗಳು ಫೀಲ್ಡ್ ಕಮಾಂಡರ್ ಆಗಿ ಕೆಲಸ ಮಾಡುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಲಾಕ್ಡೌನ್ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಬಿಟ್ಟಿದ್ದಾರೆ. ಸಿಎಂ ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.