ಕರ್ನಾಟಕ

karnataka

ಭ್ರಷ್ಟಾಚಾರದ ಸಸಿಗೆ ನೀರು, ಗೊಬ್ಬರ ಹಾಕಿದ್ದು ಕಾಂಗ್ರೆಸ್ ಪಕ್ಷ: ಪಿ.ರಾಜೀವ್

By

Published : May 5, 2022, 7:15 AM IST

ಕಾಂಗ್ರೆಸ್ ಸರ್ಕಾರ ತಾನು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿತು. ಬಿಜೆಪಿ ಸರ್ಕಾರವು ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬೆಳಕಿಗೆ ತಂದಿದೆ. ಭ್ರಷ್ಟಾಚಾರಕ್ಕೆ ಬಿಜೆಪಿ ಎಂದಿಗೂ ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಪಿ.ರಾಜೀವ್ ಹೇಳಿದರು.

ಪಿ.ರಾಜೀವ್
ಪಿ.ರಾಜೀವ್

ಬೆಂಗಳೂರು: ಭ್ರಷ್ಟಾಚಾರದ ಸಸಿಗೆ ನೀರು, ಗೊಬ್ಬರ ಹಾಕಿದ್ದು ಕಾಂಗ್ರೆಸ್ ಪಕ್ಷ. ಹೊಲಸು ತಿಂದು ಬೇರೆಯವರ ಮುಖಕ್ಕೆ ಒರೆಸುವ ಸಂಪ್ರದಾಯ ಕಾಂಗ್ರೆಸ್ಸಿಗರದು ಎಂದು ಬಿಜೆಪಿ ರಾಜ್ಯ ವಕ್ತಾರ ಪಿ ರಾಜೀವ್ ಟೀಕಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಅಧಿಕಾರದ ಅವಧಿಯಲ್ಲಿ ಅರ್ಕಾವತಿ ಲೇಔಟ್ ಡಿನೋಟಿಫಿಕೇಷನ್ ಹಗರಣದ ದಾಖಲೆಗಳನ್ನು ಮಾಯ ಮಾಡಿ ಕರ್ನಾಟಕದ ಜನತೆಗೆ ಮಾಯಾ ಬಜಾರ್ ದರ್ಶನ ಮಾಡಿದ ಕಾಂಗ್ರೆಸ್‍ನವರಿಂದ ನಾವೇನೂ ಪಾಠ ಕಲಿಯಬೇಕಾಗಿಲ್ಲ ಎಂದು ವಾಕ್‌ಪ್ರಹಾರ ನಡೆಸಿದರು.

ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ತಪ್ಪು ಮಾಹಿತಿ, ತಪ್ಪು ಅಂಕಿಅಂಶಗಳ ಮೂಲಕ ಸುಳ್ಳು ಸುದ್ದಿ ಹರಡುವುದರಲ್ಲಿ ನಿಸ್ಸೀಮ ಎಂದು ಟೀಕಿಸಿದ ಅವರು, ಕಾಂಗ್ರೆಸ್‍ನವರ ಬುದ್ಧಿ ಮಾತಿನಿಂದ ನಾವೇನೂ ಪಾಠ ಕಲಿಯಬೇಕಿಲ್ಲ. ದೇಶದ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿರುವ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಜಗತ್ತಿನ ಪ್ರಮುಖ ದೇಶವಾಗಿ ಹೊರಹೊಮ್ಮುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರ ತಾನು ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿತು. ಬಿಜೆಪಿ ಸರ್ಕಾರವು ಕಾಂಗ್ರೆಸ್ ಸರ್ಕಾರದ ಹಗರಣಗಳನ್ನು ಬೆಳಕಿಗೆ ತಂದಿದೆ. ಭ್ರಷ್ಟಾಚಾರಕ್ಕೆ ಬಿಜೆಪಿ ಎಂದಿಗೂ ಅವಕಾಶ ಕೊಡುವುದಿಲ್ಲ.

ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿತ್ತು. ಲೋಕೇಶ್, ಸ್ನೇಹಿತರಾದ ಲಕ್ಷ್ಮೀಕಾಂತ್ ಸೇರಿಕೊಂಡು ಸಾರ್ವಜನಿಕರಿಂದ 2013ರಿಂದ 2017ರವರೆಗೆ ಡಿವೈಎಸ್​ಪಿ ಮತ್ತಿತರ ಸರ್ಕಾರಿ ಹುದ್ದೆ ಕೊಡಿಸುವುದಾಗಿ ನಂಬಿಸಿ 18 ಕೋಟಿ ವಸೂಲಿ ಮಾಡಿದ ಪ್ರಕರಣ ಇದಾಗಿದೆ. ಡಿವೈಎಸ್​ಪಿ ರ್‍ಯಾಂಕ್ ಅಧಿಕಾರಿಯ ದೂರು ಇದಾಗಿದ್ದು, ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲೂ ಇದೇ ವಿಚಾರವಾಗಿ ಸರಣಿ ದೂರುಗಳು ದಾಖಲಾಗಿವೆ. ಆದರೆ, ಅದು ಮಾಧ್ಯಮದಲ್ಲಿ ಬರದಂತೆ ನೋಡಿಕೊಂಡರು. ತಮ್ಮ ಸರ್ಕಾರದ ಅವಧಿಯಲ್ಲಿ ಹಗರಣ ಮಾಡಲು ರಾಜಾರೋಷವಾಗಿ ಬಿಟ್ಟವರು ಕಾಂಗ್ರೆಸ್‍ನವರು ಎಂದು ಆಕ್ಷೇಪಿಸಿದರು.

ಇದನ್ನೂ ಓದಿ:ಪಿಎಸ್‌ಐ ಅಕ್ರಮ: ಡಿವೈಎಸ್​ಪಿ ಮಲ್ಲಿಕಾರ್ಜುನ ಸಾಲಿ ವಿಚಾರಣೆ, ಮತ್ತೊಬ್ಬ ಕಾನ್ಸ್​ಟೇಬಲ್ ಬಂಧನ

ABOUT THE AUTHOR

...view details