ಕರ್ನಾಟಕ

karnataka

By

Published : Nov 7, 2020, 3:19 AM IST

ETV Bharat / city

ಸಹಕಾರ ಸಪ್ತಾಹ ಆಚರಣೆ: ಸರಳವಾಗಿ ಆಚರಿಸಲು ಸಚಿವರು ಸೂಚಿಸಿದ್ದರೂ, ಅದ್ಧೂರಿ ಆಚರಣೆಗೆ ಅಧಿಕಾರಿಗಳ ತಯಾರಿ!

ಸಹಕಾರ ಇಲಾಖೆ ದುಂದುವೆಚ್ಚ ಕಾರ್ಯಕ್ರಮ ಮಾಡಲು ಮುಂದಾಗಿದೆ. ಸಹಕಾರ ಸಚಿವರು ಸರಳ ಸಮಾರಂಭ ಮಾಡಿ ಅಂದ್ರೂ ಅಧಿಕಾರಿಗಳು ಮಾತ್ರ ಅದನ್ನು ಡೋಂಟ್ ಕೇರ್ ಮಾಡಿ ಅದ್ಧೂರಿ ಸಮಾರಂಭ ನಡೆಸಲು ತಯಾರಿ ನಡೆಸುತ್ತಿದ್ದಾರೆ.

Sahakari saptah
ಸಹಕಾರ ಸಪ್ತಾಹ ಆಚರಣೆ

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆ ಈಗಾಗಲೇ ರಾಜ್ಯದ ಬೊಕ್ಕಸ ಖಾಲಿ ಖಾಲಿಯಾಗಿದೆ. ಹೀಗಾಗಿ ಎಲ್ಲಾ ಸರ್ಕಾರಿ ಕಾರ್ಯಕ್ರಮ, ಸಭೆ, ಸಮಾರಂಭ ಹಾಗೂ ದುಂದುವೆಚ್ಚಕ್ಕೆ ಸರ್ಕಾರ ಕಡಿವಾಣ ಹಾಕಿದೆ. ಹಾಗಿದ್ದರೂ ಕೆಲ ಇಲಾಖೆ ಅಧಿಕಾರಿಗಳು ಸರಳ ಕಾರ್ಯಕ್ರಮ ಮಾಡುವುದನ್ನು ಬಿಟ್ಟು ದುಂದುವೆಚ್ಚದೊಂದಿಗೆ ಅದ್ಧೂರಿ ಸಮಾರಂಭ ಮಾಡಲು ಮುಂದಾಗಿದ್ದಾರೆ.

ಸಹಕಾರ ಸಪ್ತಾಹ
ಹೌದು, ಸಹಕಾರ ಇಲಾಖೆ ಇಂಥ ದುಂದುವೆಚ್ಚ ಕಾರ್ಯಕ್ರಮ ಮಾಡಲು ಮುಂದಾಗಿದೆ. ಸಹಕಾರ ಸಚಿವರು ಸರಳ ಸಮಾರಂಭ ಮಾಡಿ ಅಂದ್ರೂ ಅಧಿಕಾರಿಗಳು ಮಾತ್ರ ಅದನ್ನು ಡೋಂಟ್ ಕೇರ್ ಮಾಡಿ ಅದ್ಧೂರಿ ಸಮಾರಂಭ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಸಮಾರಂಭ ಯಾವುದು ಅನ್ನೋ ಸ್ಟೋರಿ ಇಲ್ಲಿದೆ.
ಸಹಕಾರ ಸಪ್ತಾಹ
67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ 14.11.2020 ರಿಂದ 20.11.2020 ರವರೆಗೆ 7 ದಿನಗಳ ಕಾಲ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ. ಈ ಹಿಂದೆ ಸುಮಾರು 10 ಸಾವಿರ ಜನರನ್ನು ಸೇರಿಸಿ, ಸಪ್ತಾಹ ಕಾರ್ಯಕ್ರಮವನ್ನು ಹಾಗೂ ಸಹಕಾರಿ ಸಹಸ್ರಮಾನ ಕಾರ್ಯಕ್ರಮವನ್ನು ಮಹಾರಾಷ್ಟ್ರ ಮುಖ್ಯಮಂತ್ರಿಯವರನ್ನು ಆಹ್ವಾನಿಸಿ ಸಾವಿರಾರು ಜನರನ್ನು ಸೇರಿಸಿ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಬಹಳ ಅದ್ಧೂರಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಅ.14ರಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಬಾರಿ ಸರಳವಾಗಿ ಸಹಕಾರ ಸಪ್ತಾಹ ಆಚರಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಸರಳವಾಗಿ ಗರಿಷ್ಠ 100 ಅಥವಾ 200 ಜನಗಳಿಗೆ ಮಾತ್ರ ಆಹ್ವಾನಿಸಿ, ಅಚ್ಚುಕಟ್ಟಾಗಿ ಯಾವುದೇ ದೂರುಗಳು ಬರದಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದರು.
ಸಹಕಾರ ಸಪ್ತಾಹ
ವೈಭವಪೂರ್ಣವಾಗಿ ಆಚರಿಸಲು ನಿರ್ಧಾರ:ಸಹಕಾರ ಸಚಿವರು ಸರಳವಾಗಿ ಆಚರಿಸಲು ಸೂಚಿಸಿದ್ದರೂ, ಅಧಿಕಾರಿಗಳು ಮಾತ್ರ ಸಹಕಾರ ಸಪ್ತಾಹವನ್ನು ವೈಭವಪೂರ್ಣವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಸಹಕಾರ ಸಚಿವರ ಸೂಚನೆಗೂ ಡೋಂಟ್ ಕ್ಯಾರ್ ಅಂದಿರುವ ಅಧಿಕಾರಿಗಳು, ಸಹಕಾರ ಸಪ್ತಾಹವನ್ನು ಅದ್ಧೂರಿಯಾಗಿ ಮಾಡಲು ನಿರ್ಧರಿಸಿದ್ದು, ದುಂದುವೆಚ್ಚ ಮಾಡಲು ಮುಂದಾಗಿದ್ದಾರೆ.ಅ.20ರಂದು ಸಹಕಾರ ಸಂಘಗಳ ನಿಬಂಧಕ ಜಿಯಾಉಲ್ಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆ ಸಭೆಯ ನಡವಳಿ ಲಭ್ಯವಾಗಿದ್ದು, ಅದರಲ್ಲಿ ಸಹಕಾರ ಸಂಘಗಳ ನಿಬಂಧಕರು ಮಾತನಾಡುತ್ತಾ, 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಆಚರಣೆಯನ್ನು ರಾಜ್ಯದಲ್ಲಿ ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಸಹಕಾರ ಸಚಿವರು ಸರಳವಾಗಿ ಆಚರಿಸುವಂತೆ ತಿಳಿಸಿದ್ದರೂ ಸಹ, ಕಾರ್ಯಕ್ರಮವನ್ನು ವೈಭವಪೂರ್ಣವಾಗಿ ಆಚರಿಸಬೇಕು ಎಂದು ತಿಳಿಸಿದ್ದಾರೆ.ಇದಕ್ಕೆ ಬೇಕಾದ ವೇದಿಕೆ ಅಲಂಕಾರ, ಆಹ್ವಾನ ಪತ್ರಿಕೆ ಮುದ್ರಣ ಮತ್ತು ಹಂಚಿಕೆ, ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಣೆ ಇತ್ಯಾದಿ ಕೆಲಸ ಕಾರ್ಯಗಳನ್ನು ನೇತೃತ್ವ ವಹಿಸಿಕೊಂಡಿರುವ ಆಯಾ ಸಹಕಾರ ಸಂಸ್ಥೆಗಳು, ಇಲಾಖಾ ಸಮನ್ವಯಾಧಿಕಾರಿಗಳು ಆಯಾ ಜಿಲ್ಲೆಯ ಸಹಕಾರಿಗಳು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು. ಈ ಬಾರಿ ಸಹಕಾರ ಸಪ್ತಾಹವು ದೀಪಾವಳಿ ಹಬ್ಬದಂದೇ ಬಂದಿರುವುದರಿಂದ, ಸಹಕಾರ ಸಪ್ತಾಹವನ್ನು 'ಸಹಕಾರಿ ಹಬ್ಬ'ವಾಗಿ ರಾಜ್ಯಾದ್ಯಂತ ಆಚರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದಿದ್ದಾರೆ. ಅದರಂತೆ ಈ ಬಾರಿಯೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಸಪ್ತಾಹದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಕ್ಕಾಗಿ ತಲಾ 5 ಲಕ್ಷ ರೂ.ಗಳಂತೆ ಮತ್ತು ಉಳಿದ 5 ದಿನಗಳ ರಾಜ್ಯಮಟ್ಟದ ಕಾರ್ಯಕ್ರಮಗಳಿಗಾಗಿ ತಲಾ 5 ಲಕ್ಷ ರೂ.ಗಳಂತೆ ಭರಿಸಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷ ಆಗುತ್ತಿದ್ದ ಖರ್ಚೆಷ್ಟು?:ಪ್ರತಿ ವರ್ಷ ಸಹಕಾರ ಸಪ್ತಾಹದ 7 ದಿನಗಳ ರಾಜ್ಯಮಟ್ಟದ ಕಾರ್ಯಕ್ರಮಗಳಿಗಾಗಿ ಮಹಾಮಂಡಳವು ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಕ್ಕಾಗಿ ತಲಾ 10 ಲಕ್ಷ ರೂ.ಗಳಂತೆ ಮತ್ತು ಉಳಿದ 5 ದಿನಗಳ ರಾಜ್ಯಮಟ್ಟದ ಕಾರ್ಯಕ್ರಮಗಳಿಗಾಗಿ ತಲಾ 5 ಲಕ್ಷ ರೂ.ಗಳಂತೆ ಅನುದಾನ ನೀಡುತ್ತಿತ್ತು. ಈ ಬಾರಿ ಸಹಕಾರ ಸಂಘ ಸಂಸ್ಥೆಗಳ ಎನ್‌ಪಿಎ ಜಾಸ್ತಿಯಾಗಿರುವುದರಿಂದ, ಸಹಕಾರ ಸಂಘ/ಸಂಸ್ಥೆಗಳು ತೊಂದರೆಗೀಡಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಾಗಿ ಈ ಬಾರಿ ಸರಳವಾಗಿ ಆಚರಿಸಲು ಸಹಕಾರ ಸಚಿವರು ಸೂಚಿಸಿದ್ದರು. ಆದರೂ ಅದಕ್ಕೆ ಕಿವಿಗೊಡದ ಅಧಿಕಾರಿಗಳು ಕಳೆದ ಬಾರಿಯಂತೆ, ಈ ಬಾರಿಯೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಸಪ್ತಾಹದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಕ್ಕಾಗಿ ತಲಾ 10 ಲಕ್ಷದ ಬದಲಾಗಿ ತಲಾ 5 ಲಕ್ಷ ರೂ.ಗಳಂತೆ ಮತ್ತು ಉಳಿದ 5 ದಿನಗಳ ರಾಜ್ಯಮಟ್ಟದ ಕಾರ್ಯಕ್ರಮಗಳಿಗಾಗಿ ತಲಾ 5 ಲಕ್ಷ ರೂ.ಗಳಂತೆ ಖರ್ಚು ಮಾಡಲು ನಿರ್ಧರಿಸಿದೆ. ಅಂದರೆ ಕಳೆದ ವರ್ಷಗಿಂತ ಕೇವಲ 10 ಲಕ್ಷ ರೂ.ವನ್ನು ಮಾತ್ರ ಕಡಿತಗೊಳಿಸಿ, ಕನಿಷ್ಠ ಜನರೊಂದಿಗೆ ಈ ಮುಂಚಿನಂತೆಯೇ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿರುವುದು ದುರಂತವೇ ಸರಿ.

ABOUT THE AUTHOR

...view details