ಕರ್ನಾಟಕ

karnataka

By

Published : Sep 23, 2021, 6:46 AM IST

Updated : Sep 23, 2021, 7:10 AM IST

ETV Bharat / city

ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಒತ್ತುವರಿ,ಸಂರಕ್ಷಣೆ: ವರದಿ ಕೇಳಿದ NGT

ರಾಮಮೂರ್ತಿನಗರ ನಿವಾಸಿ ಜಗನ್ ಕುಮಾರ್ ಮತ್ತು ನಾಗರಿಕರು, ಕೊಳಚೆ ನೀರಿನಿಂದ ಕಲುಷಿತಗೊಳ್ಳುತ್ತಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ರಕ್ಷಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದಾರೆ. ಹಾಗಾಗಿ ಕೆರೆ ಬಗ್ಗೆ ವರದಿ ಸಲ್ಲಿಸಲು ಸಮಿತಿ ರಚಿಸಿ ಅ.22ರ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

Ele Mallappa Shetty Lake
ಎಲೆ ಮಲ್ಲಪ್ಪ ಶೆಟ್ಟಿ ಕೆರೆ

ಬೆಂಗಳೂರು: ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸಂರಕ್ಷಿಸಲು ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡಿರುವ ಸಮಿತಿ ರಚಿಸಿ ಅ.22ರ ಒಳಗೆ ವರದಿ ಸಲ್ಲಿಸುವಂತೆ ಹಸಿರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಆದೇಶ ಮಾಡಿದೆ.

ರಾಮಮೂರ್ತಿನಗರ ನಿವಾಸಿ ಜಗನ್ ಕುಮಾರ್

ಜಲ ಮೂಲಗಳನ್ನು ರಕ್ಷಿಸುವಲ್ಲಿ ಸರ್ಕಾರಿ ಸಂಸ್ಥೆಗಳ ವೈಫಲ್ಯದ ಬಗ್ಗೆ ಅಸಮಾಧಾನಗೊಂಡ ರಾಮಮೂರ್ತಿನಗರ ನಿವಾಸಿ ಜಗನ್ ಕುಮಾರ್ ಮತ್ತು ನಾಗರಿಕರು, ಕೊಳಚೆ ನೀರಿನಿಂದ ಕಲುಷಿತಗೊಳ್ಳುತ್ತಿರುವ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯನ್ನು ರಕ್ಷಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮೊರೆ ಹೋಗಿದ್ದಾರೆ.

ವರದಿ ಸಲ್ಲಿಕೆ ಸಮಿತಿ ರಚಿಸುವಂತೆ ಸೂಚನೆ:

ಇವರ ಮನವಿಯ ಮೇರೆಗೆ, ಎನ್.ಜಿ.ಟಿ. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (KSPCB) ಕೆರೆ ಪ್ರದೇಶ ಅತಿಕ್ರಮಣ, ಹೆಚ್ಚುತ್ತಿರುವ ಮಾಲಿನ್ಯದ ಮಟ್ಟ ನಿಯಂತ್ರಿಸಲು ಜಿಲ್ಲಾಧಿಕಾರಿ, ಬಿಬಿಎಂಪಿ ಜಂಟಿ ಆಯುಕ್ತರು, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಇಲಾಖೆಗೆ ಇತರ ಪರಿಸರೇತರ ಚಟುವಟಿಕೆಗಳನ್ನು ನೋಡಲು ಮತ್ತು ಅಕ್ಟೋಬರ್ ಅಥವಾ ಅದಕ್ಕೂ ಮುನ್ನ ವರದಿಯನ್ನು ಸಲ್ಲಿಸಲು ಸಮಿತಿ ರಚಿಸುವಂತೆ ನಿರ್ದೇಶನ ನೀಡಿದೆ.

ಸಮಿತಿ ಯಾರನ್ನು ಒಳಗೊಂಡಿರಬೇಕು?

ಎನ್‌ಜಿಟಿ ನಿರ್ದೇಶನಗಳ ಪ್ರಕಾರ, ಸಮಿತಿಯು ಉಪ ಆಯುಕ್ತರು, ಬೆಂಗಳೂರು ನಗರ ಹಿರಿಯ ಪರಿಸರ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ ಅಧಿಕಾರಿ ಮತ್ತು ಹಿರಿಯ ಕೆಎಸ್‌ಪಿಸಿಬಿ ಅಧಿಕಾರಿಗಳನ್ನು ಒಳಗೊಂಡಿರಬೇಕು ಎಂದು ತಿಳಿಸಿದೆ.

ದೂರುದಾರ ಜಗನ್ ಕುಮಾರ್ ಪ್ರತಿಕ್ರಿಯೆ:

ಈಟಿವಿ ಭಾರತ ಜೊತೆಗೆ ಮಾತನಾಡಿದ ದೂರುದಾರ ಜಗನ್ ಕುಮಾರ್, ಕೆರೆ ಸಂರಕ್ಷಣೆಗೆ ಸಂಬಂಧಿಸಿದ ಅಧಿಕಾರಿಗಳು ಕೆರೆ ಪ್ರದೇಶವನ್ನು ಪರೀಕ್ಷಿಸುವಂತೆ ಎನ್‌.ಜಿ.ಟಿ ನಿರ್ದೇಶನ ಮಾಡಿತ್ತು. ಆದರೆ ಯಾರೂ ಸ್ಥಳವನ್ನು ಪರೀಕ್ಷಿಸಲು ಬಂದಿಲ್ಲ ಎಂದು ಆರೋಪಿಸಿದರು.

ಒತ್ತುವರಿ?

ಮೇಡಹಳ್ಳಿ ಗ್ರಾಮದ ಸರ್ವೇ ನಂ. 63 ರಲ್ಲಿರುವ 507 ಹೆಕ್ಟೇರ್​​ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ಕರ್ನಾಟಕ ಸಣ್ಣ ನೀರಾವರಿ ಇಲಾಖೆ ಒತ್ತುವರಿ ಮಾಡಿಕೊಂಡು ಕಟ್ಟಡ ‌ನಿರ್ಮಾಣ ಮಾಡಲಾಗುತ್ತಿದೆ‌. NGT ಆದೇಶದ ಪ್ರಕಾರ ಕೆರೆಯ ಅಂಗಳದಲ್ಲಿ ಕಟ್ಟಡ ಕಾಮಗಾರಿ ನಿರ್ಮಾಣ ಮಾಡುವಂತಿಲ್ಲ. ಆದರೆ, ಸಣ್ಣ ನೀರಾವರಿ ಇಲಾಖೆ ಏತ ನೀರಾವರಿ ಯೋಜನೆಗೆ ಕಾಮಗಾರಿ ಪ್ರಾರಂಭಿಸಿ ನಿಯಮಗಳನ್ನು ಗಾಳಿಗೆ ತೂರಿದೆ ಎಂದು ತಿಳಿಸಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ:

ಈ ಕೆರೆ ಪ್ರದೇಶದಲ್ಲಿ ಅನೇಕ ವಸತಿ ಅಪಾರ್ಟ್‌ಮೆಂಟ್‌ಗಳು ಮತ್ತು ಲೇಔಟ್‌ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ನಿರ್ಮಾಣ ಭಗ್ನಾವಶೇಷಗಳು ಮತ್ತು ತ್ಯಾಜ್ಯಗಳು ಕೆರೆಗೆ ಹೋಗಿವೆ. ಸಂಸ್ಕರಿಸದ ಕೊಳಚೆ ನೀರನ್ನು ಕೆರೆಗೆ ಬಿಡುವುದು ಮಾತ್ರವಲ್ಲ, ಬಫರ್ ವಲಯವನ್ನೂ ಅತಿಕ್ರಮಿಸಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ:ವಿದೇಶಿ ಮಹಿಳೆಯ ಬಂಧನ: 30 ಕೋಟಿ ರೂ.ಮೌಲ್ಯದ ಹೆರಾಯಿನ್ ಜಪ್ತಿ

ಎನ್‌ಜಿಟಿ ನಿರ್ದೇಶನಗಳಲ್ಲಿ, ಕೆರೆಯ ಮೂಲ ಕಂದಾಯ ದಾಖಲೆಗಳನ್ನು, ಅತಿಕ್ರಮಣ ವಿವರಗಳು, ಬಫರ್ ವಲಯದಲ್ಲಿ ಪಂಪಿಂಗ್ ಸ್ಟೇಷನ್ ನಿರ್ಮಿಸಲಾಗಿದೆಯೇ ಇಲ್ಲವೇ ಎಂದು ಸಮಗ್ರ ವರದಿಯನ್ನು ಕೇಳಿದೆ, ಎಲ್ಲ ವಿವರಗಳನ್ನು ಮುಂದಿನ ತಿಂಗಳು ಅಕ್ಟೋಬರ್ 22 ರ ಒಳಗೆ ಸಮಗ್ರ ಮಾಹಿತಿಯನ್ನು ಎನ್.ಜಿ.ಟಿಗೆ ನೀಡಬೇಕು ಎಂದರು.

ನಾವು ಚಿಕ್ಕ ವಯಸ್ಸಿನಲ್ಲಿರುವಾಗ ಈ ಕೆರೆ ಬಹಳ ಸುಂದರವಾಗಿತ್ತು ಮತ್ತು ಈ ಕೆರೆ ಪಕ್ಷಿಧಾಮವಾಗಿತ್ತು. ನೂರಾರು ಎಕರೆ ಜಮೀನಿಗೆ ನೀರಿನ ಮೂಲವಾಗಿತ್ತು. ಆದರೆ, ಇಂದು ಕಲುಶಿತಗೊಂಡು ದುರ್ವಾಸನೆ ಬೀರುವ ಕೆರೆಯಾಗಿದೆ. ಸರ್ಕಾರ ಕೆರೆಯನ್ನು ಅಭಿವೃದ್ಧಿ ಮಾಡಿ ಕೆರೆ ಒತ್ತುವರಿ ವಶಕ್ಕೆ ಪಡೆದು ಮುಂದಿನ ದಿನಗಳಲ್ಲಿ ಪಕ್ಷಿಧಾಮವಾಗಿ ಮಾಡಬೇಕು, ಮುಂದಿನ ಪೀಳಿಗೆಗೆ ಈ ಕೆರೆಯ ಸೊಬಗನ್ನು ಸವಿಯುವಂತಾಗಬೇಕು ಎಂದು ಮನವಿ ಮಾಡಿದರು.

Last Updated : Sep 23, 2021, 7:10 AM IST

ABOUT THE AUTHOR

...view details