ಕರ್ನಾಟಕ

karnataka

ETV Bharat / city

ದರೋಡೆಕೋರರಿಗೆ ಪತ್ರಿಕಾ ವಿತರಕರೇ ಟಾರ್ಗೆಟ್‌; ಒಂದೇ ತಿಂಗಳಲ್ಲಿ ಹಲವರ ಮೇಲೆ ದಾಳಿ - ಪತ್ರಿಕಾ ವಿತರರ ಮೇಲೆ ದಾಳಿ

ಓದುಗರಿಗೆ ಸರಿಯಾದ ಸಮಯಕ್ಕೆ ಪತ್ರ ತಲುಪಿಸಲು ಮುಂಜಾನೆ ಎದ್ದು ಪತ್ರಿಕೆಗಳನ್ನು ವಿತರಿಸಲು ಪತ್ರಿಕಾ ವಿತರಕರು ಶ್ರಮ ವಹಿಸಿ ಕೆಲಸ ಮಾಡ್ತಿದ್ದಾರೆ. ಆದ್ರೆ ಇದೀಗ ದರೋಡೆಕೋರರ ಮನಸು ಪತ್ರಿಕೆ ವಿತರಕರತ್ತ ನೆಟ್ಟಿದ್ದು, ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹಲವು ಪ್ರಕರಣಗಳು ದಾಖಲಾಗಿಲೆ.

news papre distrubbutorts attacked by dacoits early morning yesterday in Banglaore
ದರೋಡೆಕೋರರಿಗೆ ಪತ್ರಿಕಾ ವಿತರಕರೇ ಟಾರ್ಗೆಟ್‌; ಒಂದೇ ತಿಂಗಳಲ್ಲಿ ಹಲವರ ಮೇಲೆ ದಾಳಿ

By

Published : Aug 10, 2021, 1:35 AM IST

ಬೆಂಗಳೂರು:ಶಿವಾಜಿನಗರದಿಂದ ಪೇಪರ್ ಬಂಡಲ್ ತುಂಬಿಕೊಂಡು ಡೆಲಿವರಿ ಮಾಡಲು ಹೋಗುತ್ತಿದ್ದ ಆಟೋ ಚಾಲಕ ಹಾಗೂ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದವರನ್ನು ಬೈಕ್‌ನಲ್ಲಿ ಬಂದ ದರೋಡೆಕೋರರು ಹಲ್ಲೆ ಮಾಡಿದ್ದಾರೆ. ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ದರೋಡೆಕೋರರು ಅಡ್ಡಗಟ್ಟಿ ಹಲ್ಲೆ ನಡೆಸಿ 2 ಸಾವಿರ ರೂ. ನಗದು ಹಾಗೂ ಮೊಬೈಲ್ ಕಸಿದು ಪರಾರಿಯಾಗಿರುವ ಘಟನೆ ಅಶೋಕ್‍ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿನಿ ಲೇಔಟ್‍ನ ಆಟೋ ಚಾಲಕ ತಿಮ್ಮಪ್ಪ, ಮುನೇಶ್ವರ ನಗರದ ಅಶ್ವಿನ್‍ಕುಮಾರ್ ಶರ್ಮಾ ಎಂಬುವರು ಹಣ ಹಾಗೂ ಮೊಬೈಲ್ ಕಳೆದುಕೊಂಡಿರುವ ಬಗ್ಗೆ ಅಶೋಕ್‍ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ರಿಕಾ ವಿತರಕ ತಿಮ್ಮಪ್ಪ ಬೆಳಗಿನ ಜಾವ ಶಿವಾಜಿನಗರದಿಂದ ದಿನಪತ್ರಿಕೆಗಳನ್ನು ಆಟೋದಲ್ಲಿ ತುಂಬಿಕೊಂಡು ಹೊಸೂರು ರಸ್ತೆಯಿಂದ ಸರ್ಜಾಪುರ ಮಾರ್ಗದಲ್ಲಿರುವ ನ್ಯೂಸ್ ಏಜೆನ್ಸಿಗಳಿಗೆ ಡೆಲಿವರಿ ಮಾಡುತ್ತಿದ್ದರು.

ಇದೇ ರೀತಿ ಸೋಮವಾರ ಶಿವಾಜಿನಗರದಿಂದ ಪತ್ರಿಕೆಗಳನ್ನು ತುಂಬಿಕೊಂಡು ಹೋಗುವಾಗ ಬೆಳಗಿನ ಜಾವ 4.15ರ ಸಮಯದಲ್ಲಿ ಬ್ರಿಗೇಡ್ ರಸ್ತೆಯ ಮಾಡೆಲ್ ಮೆಡಿಕಲ್ ಮುಂಭಾಗದ ರಸ್ತೆಯಲ್ಲಿ ಪಲ್ಸರ್ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಆಟೋ ಅಡ್ಡಗಟ್ಟಿದ್ದರು. ಬಳಿಕ ಮೊಬೈಲ್ ಕಿತ್ತುಕೊಳ್ಳಲು ಮುಂದಾದರು. ಆದರೆ, ಅದಕ್ಕೆ ಅವಕಾಶ ಕೊಡದಿದ್ದಾಗ ಮಾರಕಾಸ್ತ್ರದಿಂದ ತಲೆಗೆ ಹೊಡೆದು ಜೇಬಿನಲ್ಲಿದ್ದ 2 ಸಾವಿರ ರೂ. ನಗದು ಕಸಿದುಕೊಂಡು ಪರಾರಿಯಾಗಿದ್ದಾರೆ.

ಇದೇ ವೇಳೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಅಶ್ವಿನ್‍ಕುಮಾರ್ ಶರ್ಮಾರನ್ನು ಅಡ್ಡಗಟ್ಟಿ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ ಎಂದು ಪತ್ರಿಕಾ ವಿತರಕರ ತಂಡ ದೂರಿನಲ್ಲಿ ಉಲ್ಲೇಖಿಸಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಒಂದೇ ತಿಂಗಳಲ್ಲಿ ನಾಲ್ವರು ವಿತರಕರ ದರೋಡೆ..!

ಕಳೆದ ಜುಲೈನಲ್ಲಿ ನಾಲ್ವರು ಪತ್ರಿಕಾ ವಿತರಕರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಿರುವ ಘಟನೆ ನಡೆದಿದೆ. ಪತ್ರಿಕಾ ವಿತರಕರಾದ ಸಲ್ವಾನ್, ಕುಪ್ಪನ್, ಶ್ರೀನಾಥ್, ರಾಜನ್ ದರೋಡೆಗೊಳಗಾಗಿದ್ದಾರೆ. ನಸುಕಿನ ಜಾವದಲ್ಲೇ ಪತ್ರಿಕಾ ವಿತರಣೆ ಕಾರ್ಯವಿರುವುದರಿಂದ ಪತ್ರಿಕಾ ವಿತರಕರು ವಿತರಣಾ ಕೆಲಸಕ್ಕೆ ತೆರಳುತ್ತಾರೆ. ಈ ವೇಳೆ ಸಾರ್ವಜನಿಕರ ಓಡಾಟವು ಕಡಿಮೆ ಇರುತ್ತದೆ. ಹಾಗಾಗಿ, ಪತ್ರಿಕಾ ವಿತರಕರನ್ನೇ ಗುರಿಯಾಗಿಸಿಕೊಂಡು ಬರುವ ಮುಸುಕದಾರಿಗಳು ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದಾರೆ ಎಂದು ಪತ್ರಿಕಾ ವಿತರಕರು ತಿಳಿಸಿದ್ದಾರೆ.

ನೀಲಸಂದ್ರದಿಂದ ಬ್ರಿಗೇಡ್ ರಸ್ತೆಯವರೆಗೂ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ರಸ್ತೆಯಲ್ಲಿ ಹೋಗುವವರನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದಾರೆ. ನಗದು ಹಾಗೂ ಮೊಬೈಲ್ ಕೊಡಲಿಲ್ಲವೆಂದರೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಾರೆ. ಹೀಗಾಗಿ, ಬೆಳಗಿನ ಜಾವ ಮತ್ತು ರಾತ್ರಿ ವೇಳೆಯಲ್ಲಿ ಈ ಮಾರ್ಗದಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೆಳಗಿನ ಜಾವ ಪತ್ರಿಕೆ ವಿತರಣೆಗೆ 4 ಗಂಟೆಗೆ ತೆರಳುವುದೇ ಕಷ್ಟವಾಗಿದೆ. ದರೋಡೆಕೋರರು ಅಡ್ಡಗಟ್ಟಬಹುದೆಂಬ ಜೀವ ಭಯದಿಂದಲೇ ತೆರಳಬೇಕಾಗಿದೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದ್ದು, ಬೆಳಗಿನ ಜಾವದಲ್ಲಿ ಗಸ್ತು ಹೆಚ್ಚಿಸುವಂತೆಯೂ ಪೊಲೀಸರಲ್ಲಿ ಮನವಿ ಮಾಡಲಾಗಿದೆ ಪತ್ರಿಕಾ ವಿತರಕ ವರದರಾಜ್ ತಿಳಿಸಿದ್ದಾರೆ.

ABOUT THE AUTHOR

...view details