ಕರ್ನಾಟಕ

karnataka

By

Published : Apr 24, 2021, 6:08 PM IST

ETV Bharat / city

ಹೈಕೋರ್ಟ್ ಎಚ್ಚರಿಕೆ ಬಳಿಕ ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡಿದ ಮೈಸೂರು ಡಿಸಿ

ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ಮಾಡಿದ ನಂತರವೂ ತಮಗೆ ಜಮೀನು ಮಂಜೂರು ಮಾಡಿಲ್ಲ ಎಂದು ಮೈಸೂರಿನ ನಿವೃತ್ತ ಯೋಧರಾದ ಕೆ.ಬಿ.ನಾಣಯ್ಯ, ಬಿ.ಎನ್. ಶಿವಲಿಂಗಪ್ಪ, ಕೆ.ಬಿ.ಭೀಮಯ್ಯ ಮತ್ತು ಇಕ್ಬಾಲ್ ಹುಸೇನ್ ವಿಭಾಗೀಯ ಪೀಠದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

Highcourt
Highcourt

ಬೆಂಗಳೂರು : ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಮೈಸೂರು ಜಿಲ್ಲಾಧಿಕಾರಿ ನ್ಯಾಯಾಲಯದ ಆದೇಶದಂತೆ ನಾಲ್ವರು ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡಿದ್ದಾರೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೈಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ.


ಹೈಕೋರ್ಟ್‌ನ ಏಕಸದಸ್ಯ ಪೀಠ ಆದೇಶ ಮಾಡಿದ ನಂತರವೂ ತಮಗೆ ಜಮೀನು ಮಂಜೂರು ಮಾಡಿಲ್ಲ ಎಂದು ಮೈಸೂರಿನ ನಿವೃತ್ತ ಯೋಧರಾದ ಕೆ.ಬಿ.ನಾಣಯ್ಯ, ಬಿ.ಎನ್. ಶಿವಲಿಂಗಪ್ಪ, ಕೆ.ಬಿ.ಭೀಮಯ್ಯ ಮತ್ತು ಇಕ್ಬಾಲ್ ಹುಸೇನ್ ವಿಭಾಗೀಯ ಪೀಠದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಮೈಸೂರು ಜಿಲ್ಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಜೀವದ ಹಂಗು ತೊರೆದು ದೇಶ ಸೇವೆ ಮಾಡಿದ ಯೋಧರಿಗೆ ಭೂಮಿ ಮಂಜೂರು ಮಾಡದೇ ವಿಳಂಬ ಮಾಡಿರುವ, ಕಚೇರಿಯಿಂದ ಕಚೇರಿಗೆ ಅಲೆಯುವಂತೆ ಮಾಡಿರುವುದು ಸರಿಯಾದ ನಡವಳಿಕೆಯಲ್ಲ. ನ್ಯಾಯಾಂಗ ನಿಂದನೆ ಅರ್ಜಿ ದಾಖಲಾದ ಬಳಿಕ ಭೂಮಿ ಹಂಚಿಕೆ ಮಾಡಲು ನೆಪಗಳನ್ನು ಹುಡುಕುತ್ತಿದ್ದೀರಿ ಎಂದು ಜಿಲ್ಲಾಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.

ಅಲ್ಲದೇ, ಕೂಡಲೇ ಭೂಮಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವುದಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡು ನಿವೃತ್ತ ಯೋಧರಿಗೆ ಭೂಮಿ ಮಂಜೂರು ಮಾಡಿರುವುದಾಗಿ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಸರ್ಕಾರಿ ವಕೀಲ ಕಿರಣ್ ಕುಮಾರ್ ಅವರು ಜಿಲ್ಲಾಧಿಕಾರಿ ಪ್ರಮಾಣಪತ್ರವನ್ನು ಕೋರ್ಟ್ ಗೆ ಸಲ್ಲಿಸಿದ್ದು, ನ್ಯಾಯಾಲಯದ ಆದೇಶದಂತೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಮಣ ಪತ್ರ ದಾಖಲಿಸಿಕೊಂಡಿರುವ ಪೀಠ ಅರ್ಜಿದಾರ ಯೋಧರ ಸ್ಪಷ್ಟನೆಗಾಗಿ ವಿಚಾರಣೆ ಮುಂದೂಡಿದೆ.


ಪ್ರಕರಣದ ಹಿನ್ನೆಲೆ -
ಅರ್ಜಿದಾರರಾದ ನಿವೃತ್ತ ಯೋಧರಿಗೆ ಜಮೀನು ಮಂಜೂರು ಮಾಡಲು ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಯೋಧರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಹೈಕೋರ್ಟ್ ಏಕಸದಸ್ಯ ಪೀಠ 2013ರಲ್ಲಿ ಭೂಮಿ ಮಂಜೂರು ಮಾಡುವಂತೆ ಸರ್ಕಾರಕ್ಕೆ ಆದೇಶಿಸಿತ್ತು.

ಆದರೆ, ಜಿಲ್ಲಾಡಳಿತ ನ್ಯಾಯಾಲಯದ ಆದೇಶ ಪಾಲನೆ ಮಾಡಿರಲಿಲ್ಲ. ಕೋರ್ಟ್ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ ಬಳಿಕ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಅರ್ಜಿದಾರರಿಗೆ ಹಂಚಿಕೆ ಮಾಡಲು ಸಾಕಷ್ಟು ಭೂಮಿ ಲಭ್ಯವಿಲ್ಲ ಎಂದಿದ್ದರು.

ವಾದ ಒಪ್ಪಲು ನಿರಾಕರಿಸಿದ್ದ ಪೀಠ, ಮಾಜಿ ಯೋಧರಿಗೆ ಜಮೀನು ನೀಡಲು ಸಾಧ್ಯವಿಲ್ಲವಾದರೆ ಆ ಕುರಿತು ಸರ್ಕಾರ ತನ್ನ ನೀತಿ ಬದಲಿಸಲಿ. ಅದು ಬಿಟ್ಟು ಕೆಲ ಯೋಧರಿಗೆ ಜಮೀನು ಮಂಜೂರು ಮಾಡಿ, ಉಳಿದವರಿಗೆ ನೀಡದೇ ತಾರತಮ್ಯ ಮಾಡುವುದನ್ನು ಕೋರ್ಟ್ ಎಂದಿಗೂ ಸಹಿಸುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತಲ್ಲದೇ, ಕೂಡಲೇ ಭೂಮಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿತ್ತು.

ABOUT THE AUTHOR

...view details