ಕರ್ನಾಟಕ

karnataka

By

Published : Jul 14, 2022, 4:29 PM IST

ETV Bharat / city

ದೇಶದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಕೌಶಲ್ಯಭರಿತ ಕರ್ನಾಟಕ ನನ್ನ ಕನಸು: ಬೊಮ್ಮಾಯಿ

6 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿ ಮೇಲ್ದರ್ಜೆಗೆ ಏರಿಸಲಿದ್ದು, 1960ರಲ್ಲಿ ಇದ್ದ ಟೆಕ್ನಿಕಲ್ ಸ್ಕೂಲ್ಸ್ ಯೋಜನೆ ಮತ್ತೆ ತರಲಿದ್ದೇವೆ. ಈ ಮೂಲಕ 8,9,10 ನೇ ತರಗತಿ ಮಕ್ಕಳಿಗೆ ಟೆಕ್ನಿಕಲ್ ಸ್ಕಿಲ್ ತರುವ ಆಲೋಚನೆ ಇದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

CM Basavaraja Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕೌಶಲ್ಯಭರಿತ ಕರ್ನಾಟಕ ನನ್ನ ಕನಸಾಗಿದ್ದು, ಎಲ್ಲರಿಗೂ ಕೌಶಲ್ಯ ತರಬೇತಿ ಸಿಗುವಂತಹ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಸರ್ಕಾರ ಎಲ್ಲ ಪ್ರಯತ್ನ ನಡೆಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ವಿಶ್ವ ಯುವ ಕೌಶಲ್ಯ ದಿನ ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕವಾಗಿ ದೇವರು ಕೊಟ್ಟಿರುವ ಪ್ರಕ್ರಿಯೆಗೆ ನಾವು ಸ್ವಲ್ಪ ಜ್ಞಾನ ಸೇರಿಸಬೇಕು ಅದೇ ಕೌಶಲ್ಯ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು. ಪ್ರತಿಯೊಬ್ಬನಲ್ಲಿನ ಗುಣಾತ್ಮಕ ಕೌಶಲ್ಯ ಗುರುತಿಸುವ ಕೆಲಸ ಮಾಡಬೇಕು. ಕೌಶಲ್ಯವನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಕೌಶಲ್ಯಕ್ಕೆ ಜ್ಞಾನ ಕೊಟ್ಟು ಉಪಯೋಗಿಸಿಕೊಂಡಾಗ ಅದರ ಬೆಲೆ ಇಮ್ಮಡಿಯಾಗುತ್ತದೆ ಎಂದರು.

ವಿಶ್ವ ಯುವ ಕೌಶಲ್ಯ ದಿನಾಚರಣೆ

ದೇಶವನ್ನು ಕಟ್ಟುವವರು ದುಡಿಯುವ ವರ್ಗ, ಅವರ ಮೇಲೆ ಆರ್ಥಿಕತೆ ನಿಂತಿದೆ. ಪ್ರಸ್ತುತ ದಿನಮಾನದಲ್ಲಿ ಕೌಶಲ್ಯ ಅತ್ಯಗತ್ಯವಾಗಿದೆ. ಎಲ್ಲರಿಗೂ ಕೌಶಲ್ಯ ತರಬೇತಿ ಸಿಗಬೇಕಾದರೆ, ಕೌಶಲ್ಯ ಕೊಡುವವರು, ಪಡೆದುಕೊಳ್ಳುವವರನ್ನು ಒಂದೇ ಕಡೆ ಸೇರಿಸಬೇಕು. ಆ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ಸ್ವಾತಂತ್ರ್ಯದಿನಾಚರಣೆಯ ಅಮೃತ ಮಹೋತ್ಸವದ ನಿಮಿತ್ತ 75 ಸಾವಿರ ಜನರಿಗೆ ಕೌಶಲ್ಯ ತರಬೇತಿ ನೀಡುವ ಗುರಿ ನೀಡಿದ್ದೆ. ಅದನ್ನು ಸಚಿವ ಅಶ್ವತ್ಥ ನಾರಾಯಣ ಮಾಡುತ್ತಿದ್ದಾರೆ. ಗುರಿ ತಲುಪುತ್ತಿದ್ದಾರೆ. ಕೌಶಲ್ಯಾಭಿವೃದ್ಧಿಯಲ್ಲಿ ದೇಶಕ್ಕೆ ಮೊದಲ ಸ್ಥಾನ ಹಾಗೂ ಜಗತ್ತಿನಲ್ಲಿ ಹತ್ತನೆ ಸ್ಥಾನದೊಳಗೆ ಬರುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಡೆಯಲಿದೆ ಎಂದರು.

200 ಐಟಿಐ ಕಾಲೇಜುಗಳನ್ನು ಹೈಟೆಕ್ ಐಟಿಐ ಮಾಡುತ್ತಿದ್ದೇವೆ. 6 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿ ಮೇಲ್ದರ್ಜೆಗೆ ಏರಿಸಲಿದ್ದೇವೆ.‌ 1960 ರಲ್ಲಿ ಇದ್ದ ಟೆಕ್ನಿಕಲ್ ಸ್ಕೂಲ್ಸ್ ಯೋಜನೆ ಮತ್ತೆ ತರಲಿದ್ದೇವೆ. 8,9,10 ನೇ ತರಗತಿ ಮಕ್ಕಳಿಗೆ ಟೆಕ್ನಿಕಲ್ ಸ್ಕಿಲ್ ತರುವ ಆಲೋಚನೆ ಇದೆ.

ನಾವು ಕೂಡ ಐಐಟಿ ಮಟ್ಟದಲ್ಲಿ ನಮ್ಮ ಇಂಜಿನಿಯರಿಂಗ್ ಕಾಲೇಜು ಮೇಲ್ದರ್ಜೆಗೇರಿಸಬೇಕು. ಆ ಮೂಲಕ ಇತರ ರಾಜ್ಯದಿಂದ ನಮ್ಮಲ್ಲಿಗೆ ಶಿಕ್ಷಣ ಹುಡುಕಿಕೊಂಡು ವಿದ್ಯಾರ್ಥಿಗಳು ಬರಬೇಕು. ಆ ಮಟ್ಟದ ಶಿಕ್ಷಣ ಕೊಡಬೇಕು ಎಂದು ಅಶ್ವತ್ಥ ನಾರಾಯಣ್​ ಅವರಿಗೆ ಸೂಚನೆ ನೀಡಿದ್ದೇನೆ ಎಂದರು.

ಸೆಲ್ಫಿ ವಿತ್ ಸಿಎಂ:ಇನ್ನು ಕಾರ್ಯಕ್ರಮದಲ್ಲಿ ಸಂಜೀವಿನಿ ಯೋಜನೆಯಡಿ ತರಬೇತಿ ಪಡೆದವರನ್ನು ವೇದಿಕೆ ಮೇಲೆ ಕರೆಸಿಕೊಂಡು ಸಿಎಂ ಬೊಮ್ಮಾಯಿ ಮಾತನಾಡುತ್ತಿದ್ದರು. ಆ ವೇಳೆ, ಗುಂಪಿನಲ್ಲಿದ್ದ ಮಹಿಳೆಯೊಬ್ಬರು ಸಿಎಂ ಜೊತೆ ಸೆಲ್ಫಿ ತೆಗೆದುಕೊಂಡರು. ತಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡ ಮಹಿಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಎಂದು ಸಿಎಂ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು.

ಇದನ್ನೂ ಓದಿ :ಪದವಿ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ: ಎನ್ ಎಸ್ ಇ ಜೊತೆ ಶಿಕ್ಷಣ ಇಲಾಖೆ ಒಪ್ಪಂದ

ABOUT THE AUTHOR

...view details