ಬೆಂಗಳೂರು:ಮೇ ತಿಂಗಳ 2ರ ನಂತರ ಸಿಎಂ ಬದಲಾವಣೆ ಖಚಿತ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಹಕ್ಕು ಬಾಧ್ಯತೆಗಳ ಸಮಿತಿ ಸಭೆ ಬಳಿಕ ಮಾತನಾಡಿದ ಅವರು, ಮೇ 2ರ ನಂತರ ಸಿಎಂ ಬದಲಾವಣೆ ಖಚಿತ. ಉತ್ತರ ಕರ್ನಾಟಕ ಭಾಗದವರೇ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಮೀಸಲಾತಿ ಯಡಿಯೂರಪ್ಪ ಕೊಡಲಿಲ್ಲ ಅಂದ್ರೂ ಮೇ 2ರ ನಂತರ ಬರುವ ಮುಖ್ಯಮಂತ್ರಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಡುತ್ತಾರೆ ಎಂದಿರುವ ಯತ್ನಾಳ್, ವಿಜಯೇಂದ್ರ ವಿರುದ್ಧ ಹರಿಹಾಯ್ದಿದ್ದಾರೆ.
ವಿಜಯೇಂದ್ರಗೆ ಸವಾಲ್
ವಿಜಯೇಂದ್ರ ಬಳಿ ಸಾವಿರಾರು ಕೋಟಿ ಇದೆ. ಅದಕ್ಕೆ ಅವರನ್ನು ಇಂಚಾರ್ಜ್ ಮಾಡಿದ್ದಾರೆ. ನಮ್ಮಂತ ಯೋಗ್ಯರಿಗೆ ಹೇಗೆ ಉಸ್ತುವಾರಿ ನೀಡುತ್ತಾರೆ? ವಿಜಯೇಂದ್ರ ಸಿಎಂ ಮಗ ಹಾಗೂ ಸಿಕ್ಕಾಪಟ್ಟೆ ಹಣವಿದೆ. ಅದಕ್ಕೆ ಅವರನ್ನು ಚುನಾವಣೆ ಪ್ರಚಾರಕ್ಕೆ ಕರೆಯುತ್ತಾರೆ ಎಂದು ಕಿಡಿಕಾರಿದರು.
ಇವರ ಯೋಗ್ಯತೆ ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಇಡಿಯವರು ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡು ತನಿಖೆ ಮಾಡಿದ್ದಾರೆ. ಇಡಿ ಕರೆದಿಲ್ಲ ಎಂದು ವಿಜಯೇಂದ್ರ ಹೇಳಲಿ ಎಂದು ಸವಾಲು ಹಾಕಿದರು.
ಕಾಶ್ಮೀರ ರೀತಿಯಲ್ಲಿ ವಿಶೇಷ ಸ್ಥಾನಮಾನ ಯಡಿಯೂರಪ್ಪನವರಿಗೆ ನೀಡಲಾಗಿದ್ಯಾ?
ಸಚಿವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್, ರಾಜ್ಯಪಾಲರದ್ದು ಪಕ್ಷದ ವೇದಿಕೆನಾ? ಈಶ್ವರಪ್ಪ ಅವರು ಅಂತರ್ಮುಖಿ ಆಗಿದ್ದಾರೆ. ಯಾರ ಯಾರ ನಾಯಕತ್ವ ಎಷ್ಟೆಷ್ಟು ಅಂತಾ ಗೊತ್ತಾಗುತ್ತದೆ. ಈಶ್ವರಪ್ಪ ಈಲ್ಡ್ ಆಗಿಲ್ಲ ಅನಿಸ್ತದೆ. ಅವರು ರಾಜ್ಯಪಾಲರ ಭೇಟಿ ಮಾಡಿದ್ದು ನನಗೇನೂ ಗೊತ್ತಿರಲಿಲ್ಲ. ಇನ್ನೂ ಬಹಳ ಮಂದಿ ರೊಚ್ಚಿಗೇಳುವವರಿದ್ದಾರೆ ಎಂದು ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಏಪ್ರಿಲ್ 17ರ ನಂತರ ಶಾಸಕರು ಹಾಗೂ ಸಚಿವರು ಸಾಕಷ್ಟು ಮಂದಿ ರೊಚ್ಚಿಗೆ ಏಳುತ್ತಾರೆ. ಸೂರ್ಯ ಚಂದ್ರ ಇರುವವರೆಗೂ ಯಡಿಯೂರಪ್ಪ ಸಿಎಂ ಎಂದು ಹೇಳುತ್ತಾರೆ. ಅವರಿಗೆ ಏನು ಕಾಶ್ಮೀರ ರೀತಿಯಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದ್ಯಾ? ಪಕ್ಷದ ಸಿದ್ಧಾಂತದ ಹಿನ್ನೆಲೆಯಲ್ಲಿ ಎರಡು ವರ್ಷ ಬೋನಸ್ ಕೊಟ್ಟಿದ್ದು ದೊಡ್ಡದು. ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಿ ಎಂದು ವ್ಯಂಗ್ಯವಾಡಿದರು.