ಕರ್ನಾಟಕ

karnataka

By

Published : May 9, 2021, 8:01 PM IST

ETV Bharat / city

ಲಾಕ್​ಡೌನ್​ಗೆ ಸ್ವಯಂಪ್ರೇರಿತರಾಗಿ ಸಹಕರಿಸಿ: ಜನತೆಗೆ ಸುರೇಶ್ ಕುಮಾರ್ ಮನವಿ

ಕೋವಿಡ್ ಸರಪಳಿಯನ್ನು ತುಂಡರಿಸದಿದ್ದಲ್ಲಿ ಸಾರ್ವಜನಿಕ‌ ಆರೋಗ್ಯ ವ್ಯವಸ್ಥೆ ತೀವ್ರವಾಗಿ ಹದಗೆಡಲಿದೆ. ಜನತೆ ತಮ್ಮ ಹಾಗೂ ಸಮಾಜದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಉಳಿದು ಸಹಕಾರ ನೀಡಬೇಕು. ಗ್ರಾಮಾಂತರ ಪ್ರದೇಶಗಳ ನಾಗರಿಕರೂ ಲಾಕ್ ಡೌನ್ ಕುರಿತಂತೆ ವಿಶೇಷ ಗಮನ ಹರಿಸಬೇಕು ಎಂದು ಜನರಲ್ಲಿ ಸಚಿವ ಸುರೇಶ್​ ಕುಮಾರ್​​ ಮನವಿ ಮಾಡಿದ್ದಾರೆ.

minister-suresh-kumar-requested-people-to-support-for-lockdown
ಸಚಿವ ಸುರೇಶ್​ ಕುಮಾರ್​​

ಬೆಂಗಳೂರು: ನಾಳೆಯಿಂದ ಪ್ರಾರಂಭವಾಗಲಿರುವ ಲಾಕ್ ಡೌನ್ ಹಿಂದಿನ ಸದುದ್ದೇಶವನ್ನು ಅರ್ಥೈಸಿಕೊಂಡು ಜನತೆ ಸ್ವಯಂಪ್ರೇರಿತರಾಗಿ ಸಹಕರಿಸಬೇಕೆಂದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ರಾಜ್ಯದ ಜನರಲ್ಲಿ ಮನವಿ ಮಾಡಿದರು.

ನಗರದ ರಾಜಾಜಿನಗರದಲ್ಲಿ ಕೋವಿಡ್ ಸೋಂಕಿತರಿಗೆ ಹೊಸದಾಗಿ ಪ್ರಾರಂಭಿಸಲಾಗಿರುವ 20 ಆಕ್ಸಿಜನ್ ಪೂರಕ ಹಾಸಿಗೆಗಳ ಕೋವಿಡ್ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸೋಂಕಿನ ಸರಪಳಿಯನ್ನು ತುಂಡರಿಸುವಲ್ಲಿ ಲಾಕ್‌ಡೌನ್ ಗೆ ನಾಗರಿಕರು‌ ಸಹಕರಿಸುವುದು‌ ಅತ್ಯಂತ ಅವಶ್ಯಕವಾಗಿದೆ ಎಂದರು.

ಈ ಹಿಂದೆ ಬಹುಪಾಲು ನಗರ‌ ಕೇಂದ್ರಗಳಿಗೆ ಸೀಮಿತವಿದ್ದ ಕೋವಿಡ್ ಸೋಂಕು ಈಗ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿದ್ದು, ಅದರ ನಿಯಂತ್ರಣಕ್ಕೆ ಕಠಿಣ ಕ್ರಮಗಳು ಅನಿವಾರ್ಯವಾಗಿವೆ. ಕೋವಿಡ್ ಸರಪಳಿಯನ್ನು ತುಂಡರಿಸದಿದ್ದಲ್ಲಿ ಸಾರ್ವಜನಿಕ‌ ಆರೋಗ್ಯ ವ್ಯವಸ್ಥೆ ತೀವ್ರವಾಗಿ ಹದಗೆಡಲಿದೆ. ಜನತೆ ತಮ್ಮ ಹಾಗೂ ಸಮಾಜದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿಯೇ ಉಳಿದು ಸಹಕಾರ ನೀಡಬೇಕು. ಗ್ರಾಮಾಂತರ ಪ್ರದೇಶಗಳ ನಾಗರಿಕರೂ ಲಾಕ್ ಡೌನ್ ಕುರಿತಂತೆ ವಿಶೇಷ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ಆಕ್ಸಿಜನ್ ಪೂರಕ ಹಾಸಿಗೆಗಳ ಕೋವಿಡ್ ಕೇಂದ್ರವನ್ನು ಉದ್ಘಾಟಿಸಿ ಸಚಿವ ಸುರೇಶ್​ ಕುಮಾರ್​​

ಅದೇ ಉದ್ದೇಶದಿಂದ ತಮ್ಮ ಉಸ್ತುವಾರಿಯಾದ‌ ಚಾಮರಾಜನಗರ ಜಿಲ್ಲೆಯಲ್ಲಿಯೂ ತಾಲೂಕು‌ ಟಾಸ್ಕ್ ಫೋರ್ಸ್ ಗಳನ್ನು ರಚಿಸಿ, ಗ್ರಾಮಾಂತರ ಪ್ರದೇಶಗಳಲ್ಲಿಯೂ ಕೋವಿಡ್ ಆರೈಕೆ‌ ಕೇಂದ್ರಗಳನ್ನು ತೆರೆಯಲಾಗುತ್ತಿದೆ‌ ಎಂದರು.

ಆಕ್ಸಿಜನ್ ಕೋಟಾ:ಜಿಲ್ಲೆಗಳಿಗೆ ಆಕ್ಸಿಜನ್‌ ಪೂರೈಕೆ‌ ಕುರಿತಂತೆ ರಾಜ್ಯ ಸರ್ಕಾರವು ಜಿಲ್ಲಾವಾರು ಕೋಟಾ ನಿಗದಿಪಡಿಸಿದ್ದು, ಇದರಿಂದ ಆಮ್ಲಜನಕ‌ ಹಂಚಿಕೆಯಲ್ಲಿ ಉದ್ಭವಿಸುತ್ತಿದ್ದ ಅನವಶ್ಯಕವಾದ ಗೊಂದಲ, ಸಂಘರ್ಷಗಳು ನಿವಾರಣೆಯಾಗಲಿವೆ. ಹಂಚಿಕೆ‌ ಹೆಚ್ಚು ವೈಜ್ಞಾನಿಕವಾಗಿರಲಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಚಾಮರಾಜನಗರಕ್ಕೆ‌ ನಿಗದಿಯಾಗಿರುವ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿ ಒಂದು ಸಾವಿರ ಲೀಟರ್ ಆಕ್ಸಿಜನ್​​​ ಹಂಚಿಕೆಗೆ ತಾವು ಸರ್ಕಾರವನ್ನು ಕೋರಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ಕೇಂದ್ರ ಸರ್ಕಾರವೂ ಕೂಡಾ ಆಮ್ಲಜನಕ ಬಳಕೆಯ‌ ಕುರಿತಂತೆ ಹೆಚ್ಚು ನಿಗಾ‌ ಇಡಬೇಕೆಂಬ ನಿರ್ದೇಶನ‌ ನೀಡಿದೆ, ರಾಜ್ಯ ಸರ್ಕಾರವು ಉದ್ದೇಶಿಸಿರುವ ಆಮ್ಲಜನಕ‌ ಉಪಯುಕ್ತತೆ ಆಡಿಟ್ ಈ‌‌ ನಿಟ್ಟಿನಲ್ಲಿ‌ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.‌

ರಾಜಾಜಿನಗರದಲ್ಲಿ ಕೋವಿಡ್ ಸೋಂಕಿತರಿಗೆ ಸಹಕಾರ ಕೇಂದ್ರಗಳು:ರಾಜಾಜಿನಗರ ವಿಧಾನಸಭಾ‌ ಕ್ಷೇತ್ರದ ಕೋವಿಡ್ ಸೋಂಕಿತ ನಾಗರಿಕರ ಉಪಯೋಗಕ್ಕಾಗಿ ನಾವು ಈಗಾಗಲೇ ಸರ್ಕಾರಿ ಯುನಾನಿ‌‌ ಕಾಲೇಜು ಹಾಗೂ ಹೋಮಿಯೋಪತಿ‌ ಕಾಲೇಜುಗಳಲ್ಲಿ‌‌ ಇನ್ನೂರು ಹಾಸಿಗೆಗಳ ಕೋವಿಡ್ ಕೇರ್‌ ಕೇಂದ್ರಗಳನ್ನು ಪ್ರಾರಂಭಿಸಿದ್ದೇವೆ. ಇಂದು‌ ಉದ್ಘಾಟಿಸಿರುವ ಆರೈಕೆ‌ ಕೇಂದ್ರ‌ ಈ ಪ್ರದೇಶದ ಕೋವಿಡ್ ನಿಯಂತ್ರಣಕ್ಕೆ ಅತ್ಯಂತ ಸಹಕಾರಿಯಾಗಲಿದೆ ಎಂದರು.

ಈಗಾಗಲೇ ಕ್ಷೇತ್ರದ ಜನರಿಗಾಗಿ ನಾವು ಪ್ರಾರಂಭಿಸಿರುವ ಉಚಿತ ಆ್ಯಂಬುಲೆನ್ಸ್ ಸೇವೆಯನ್ನೂ ಸಾಕಷ್ಟು ನಾಗರಿಕರು ಬಳಸುತ್ತಿದ್ದಾರೆ. ಉಸಿರಾಟದ‌‌‌ ತೊಂದರೆಗೊಳಗಾಗುವ ಕೋವಿಡ್ ಸೋಂಕಿತರಿಗೆ ಆಮ್ಲಜನಕವನ್ನು ಪೂರೈಸಿ ಅವರಿಗೆ ಅಗತ್ಯ ಶುಶ್ರೂಷೆಯನ್ನು‌ ಒದಗಿಸುವ ಸಲುವಾಗಿ ಮನೆ ಮನೆಗೆ ಆಮ್ಲಜನಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ವಾರಿಯರ್​ಗಳಿಗಾಗಿ ಚೈತನ್ಯ ಕೇಂದ್ರಗಳು‌ ಕಾರ್ಯ ನಿರ್ವಹಿಸುತ್ತಿವೆ. ಕ್ಷೇತ್ರದ ನಾಗರಿಕರು ಸಹ ಸ್ವಯಂಪ್ರೇರಿತರಾಗಿ ಸರ್ಕಾರದ ಲಾಕ್ ಡೌನ್‌ ನಿರ್ಧಾರವನ್ನು ಬೆಂಬಲಿಸಿ, ಕೋವಿಡ್ ನಿರ್ಮೂಲನೆಗೆ ಸಹಕರಿಸಬೇಕೆಂದು‌ ಸಚಿವರು ಮನವಿ ಮಾಡಿದರು.

ABOUT THE AUTHOR

...view details