ಬೆಂಗಳೂರು:ರೈತ ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಬೇಕು. ಬೆಳೆ ಸಮೀಕ್ಷೆಯನ್ನು ಯಶಸ್ವಿಯನ್ನಾಗಿಸಿ ಸರ್ಕಾರದ ಉತ್ಸವವನ್ನಾಗಿಸುವ ದೊಡ್ಡಮಟ್ಟದ ಸವಾಲು ಎಲ್ಲರ ಮುಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೃಷಿ ಇಲಾಖೆಯ ಸಮೃದ್ಧಿ ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಂಟಿ ಕೃಷಿ ನಿರ್ದೇಶಕರು, ಜಿಲ್ಲಾಧಿಕಾರಿಗಳು, ಕೆವಿಕೆ ಸೇರಿದಂತೆ ಕೃಷಿ ಅಧಿಕಾರಿಗಳ ಜೊತೆ ಕೃಷಿ ಸಚಿವರು, ಸರ್ಕಾರದ ಮುಖ್ಯಕಾರ್ಯದರ್ಶಿಗಳ ಜೊತೆ ವಿಡಿಯೋ ಸಂವಾದ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಬೆಳೆ ಸಮೀಕ್ಷೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆಯ ಕೆಲಸವೆಂದು ವರ್ಗೀಕರಿಸುವುದು ಬೇಡ. ಇದು ಸರ್ಕಾರದ ಕೆಲಸವೆಂದು ಒಗ್ಗಟ್ಟಾಗಿ ಎಲ್ಲರೂ ಪಾಲ್ಗೊಂಡು ಬೆಳೆ ಸಮೀಕ್ಷೆಯನ್ನು ಆಯಾ ರೈತರಿಂದಲೇ ಮಾಡಿಸಿ ಅಪ್ಲೋಡ್ ಮಾಡಿಸಬೇಕು. ಸ್ವಾಭಿಮಾನಿ ರೈತ ತನ್ನ ಹೊಲದ ಸಮೀಕ್ಷೆಯನ್ನು ತಾನೇ ನಡೆಸಿ ರೈತನೇ ಸರ್ಟಿಫಿಕೇಟ್ ಕೊಡುವಂತಹ ವಿಶೇಷ ಯೋಜನೆಯಿದು ಎಂದರು.
ಬೆಳೆ ಸಮೀಕ್ಷೆಗೆ ಆ್ಯಪ್
ತಾಲೂಕಿನ ಎಡಿಎಗಳು, ಸ್ಥಳೀಯ ಶಾಸಕರನ್ನು ರೈತರ ಹೊಲಕ್ಕೆ ಕರೆದುಕೊಂಡು ಹೋಗಿ ರೈತರಿಂದಲೇ ಬೆಳೆ ಸಮೀಕ್ಷೆಗೆ ಫೋಟೋ ಅಪ್ಲೋಡ್ ಮಾಡಿಸಬೇಕು. ತೋಟಗಾರಿಕೆ ಮತ್ತು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳು, ಪ್ರೊಫೆಸರ್ಗಳು, ಸಹಾಯಕ ಪ್ರೊಫೆಸರ್ಗಳನ್ನು ಸಹ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಚಾರಕ್ಕೆ ಬಳಸಿಕೊಳ್ಳಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳ ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ಕೃಷಿ ತೋಟಗಾರಿಕಾ ವಿದ್ಯಾರ್ಥಿಗಳು ರೈತರು ಬೆಳೆ ಸಮೀಕ್ಷೆ ಆ್ಯಪ್ ಡೌನ್ಲೋಡ್ ಬೆಳೆ ವಿವರ ಅಪ್ಲೋಡ್ ಮಾಡಲು ನೆರವಾಗುವಂತೆ ಹೇಳಬೇಕು. ಸಾಮಾಜಿಕ ಜಾಲತಾಣಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಬೇಕು. ಸಹಕಾರಿ ಸಂಘಗಳು ಹಾಲು ಉತ್ಪಾದಕ ಸಂಘಗಳ ಪ್ರತಿನಿಧಿಗಳನ್ನು ಹಾಗೂ ಕೃಷಿ ಇಲಾಖೆಯ ಹತ್ತು ಸಾವಿರ ಅಧಿಕಾರಿಗಳನ್ನು ಬಳಸಿಕೊಂಡು ಹೆಚ್ಚೆಚ್ಚು ಬೆಳೆ ಸಮೀಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಬೆಳೆ ಸಮೀಕ್ಷೆ ಆ್ಯಪ್ ಹಾಗೂ ರೈತರೇ ತಮ್ಮ ಬೆಳೆ ಸಮೀಕ್ಷೆ ವಿವರ ದಾಖಲಿಸುವಂತೆ ಮಾಡಬೇಕು. ರೈತರೇ ನೇರವಾಗಿ ಆ್ಯಪ್ನಲ್ಲಿ ವಿವರ ದಾಖಲಿಸುವಂತೆ ಮಾಡಬೇಕು. ಇದು ಬೆಳೆ ಸಮೀಕ್ಷೆ ಸರ್ಕಾರದ ಹಬ್ಬವಾಗಬೇಕು. ಇದಕ್ಕಾಗಿಯೇ ಬೆಳೆ ಸಮೀಕ್ಷೆಯನ್ನು ಉತ್ಸವ-2020 ಎಂದು ಕರೆಯಲಾಗಿದೆ ಎಂದು ಸಚಿವರು ವಿವರಿಸಿದರು.