ಕರ್ನಾಟಕ

karnataka

By

Published : Jan 1, 2022, 2:36 AM IST

ETV Bharat / city

ನಾನು ಕೊನೆಯವರೆಗೂ ಮಂತ್ರಿಯಾಗಿ ಮುಂದುವರಿಯುತ್ತೇನೆ: ಸಚಿವ ನಾರಾಯಣ ಗೌಡ

ಚುನಾವಣೆಗಳಲ್ಲಿ ಜೆಡಿಎಸ್​​ಗೆ ಹಿನ್ನಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ಪಕ್ಷದ ಮೇಲೆ ಹಿಡಿತ ತಪ್ಪಿದೆ. ಅದಕ್ಕಾಗಿ ಚುನಾವಣೆಗಳಲ್ಲಿ ಸೋಲಾಗ್ತಿದೆ ಎಂದು ಸಚಿವ ನಾರಾಯಣಗೌಡ ಅಭಿಪ್ರಾಯಪಟ್ಟರು.

Minister Narayanagowda on ministry and other issues
ನಾನು ಕೊನೆಯವರೆಗೂ ಮಂತ್ರಿಯಾಗಿ ಮುಂದುವರಿಯುತ್ತೇನೆ: ಸಚಿವ ನಾರಾಯಣ ಗೌಡ

ಬೆಂಗಳೂರು: ಹಿರಿಯರನ್ನು ಕೈ ಬಿಟ್ಟು ಹೊಸಬರಿಗೆ ಸಂಪುಟದಲ್ಲಿ ಸ್ಥಾನ ನೀಡುವ ವಿಚಾರವಾಗಿ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಕೆಲವರನ್ನು ಸಚಿವ ಸ್ಥಾನದಿಂದ ತೆಗೆಯುತ್ತಾರೆ ಎಂಬುದು ಕೂಡಾ ಸುಳ್ಳು. ನಾನು ಕೊನೆಯವರೆಗೂ ಮಂತ್ರಿಯಾಗಿ ಮುಂದುವರಿಯುತ್ತೇನೆ ಎಂದು ಸಚಿವ ನಾರಾಯಣಗೌಡ ಸ್ಪಷ್ಟಪಡಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಪುಕ್ಸಟ್ಟೆ ಪ್ರಚಾರಕ್ಕಾಗಿ ಮಾತಾಡ್ತಿದ್ದಾರೆ. ಮೇಕೆದಾಟು ಯೋಜನೆ ರೂಪಿಸಿ, ಹಣ ಬಿಡುಗಡೆ ಮಾಡಿದ್ದು ನಮ್ಮ ಸರ್ಕಾರ. ಮೇಕೆದಾಟು ಯೋಜನೆ ನಮ್ಮ ಕೂಸು, ಆದರೆ ಡಿಕೆಶಿ ಪಾದಯಾತ್ರೆ ಮೂಲಕ ಅದರ ಹೆಸರು ಪಡೆಯಲು ಹೊರಟಿದ್ದಾರೆ. ಅವರ ಪಾದಯಾತ್ರೆಯಿಂದ ನಮಗೇನೂ ಭಯ ಇಲ್ಲ. ಹಳೆ ಮೈಸೂರು ಭಾಗದಲ್ಲಿ ಇಬ್ಬರೂ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಪಕ್ಷ ಸಂಘಟಿಸಿ, ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇನೆ ಎಂದರು.

ಚುನಾವಣೆಗಳಲ್ಲಿ ಜೆಡಿಎಸ್​​ಗೆ ಹಿನ್ನಡೆ ವಿಚಾರದ ಬಗ್ಗೆ ಮಾತನಾಡಿದ ಅವರು, ಜೆಡಿಎಸ್ ನಾಯಕರಿಗೆ ಪಕ್ಷದ ಮೇಲೆ ಹಿಡಿತ ತಪ್ಪಿದೆ. ಅದಕ್ಕಾಗಿ ಚುನಾವಣೆಗಳಲ್ಲಿ ಸೋಲಾಗ್ತಿದೆ. ಅವರು ದೊಡ್ಡವರು, ನಾನು ಅವರಿಗೆ ಸಲಹೆ ಕೊಡುವಷ್ಟು ದೊಡ್ಡವನಲ್ಲ. ಆದರೆ ಬರುವ ಚುನಾವಣೆಯಲ್ಲಿ ಅವರ ಪಕ್ಷದಿಂದ ಬಿಜೆಪಿಗೆ ಬರ್ತಾರೆ. ತುಂಬಾ ಜನ ಬಿಜೆಪಿಗೆ ಬರ್ತಾರೆ. ಬರುವವರ ಪಟ್ಟಿ ದೊಡ್ಡದಿದೆ. ಅದನ್ನು ಮುಂದೆ ಬಹಿರಂಗಪಡಿಸ್ತೇನೆ ಎಂದರು.

ಕಾಶಿನಾಥ ನಾಯ್ಕರಿಗೆ ನಗದು ಪುರಸ್ಕಾರ: ಇದೇ ವೇಳೆ ಸಚಿವ ನಾರಾಯಣಗೌಡ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಗುರುವಾದ ಕಾಶಿನಾಥ ನಾಯ್ಕರಿಗೆ 5 ಲಕ್ಷ ನಗದು ಪುರಸ್ಕಾರ ನೀಡಿ ಸನ್ಮಾನಿಸಿದರು.

ಜಾವೆಲಿನ್ ಥ್ರೋನಲ್ಲಿ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಬಂಗಾರದ ಸಾಧನೆ ಮಾಡಿದ್ದು, ಅವರ ಸಾಧನೆ ಹಿಂದೆ ಇರುವುದು ನಮ್ಮ ಕನ್ನಡಿಗ ಕಾಶಿನಾಥ ನಾಯ್ಕ ಅವರು. ಹಾಗಾಗಿ, ಐದು ಲಕ್ಷ ನಗದು ಪುರಸ್ಕಾರ ನೀಡುವ ಮೂಲಕ ಅವರನ್ನು ಗೌರವಿಸಲಾಗಿದೆ. ಇದು ನಮಗೆ ತುಂಬಾ ಖುಷಿ ತಂದಿದೆ. ನೀರಜ್ ಚೋಪ್ರಾ ಅವರಿಗೆ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಿದ್ದೇವೆ ಎಂದರು.

ಕ್ರೀಡಾ ದತ್ತು ಯೋಜನೆಯಲ್ಲಿ 75 ಕ್ರೀಡಾಪಟುಗಳನ್ನು ದತ್ತು ತೆಗೆದುಕೊಳ್ಳಲಾಗಿದ್ದು, ಈ ಕ್ರೀಡಾಪಟುಗಳನ್ನು 2024ರ ಒಲಿಂಪಿಕ್ಸ್‌ಗೆ ಕಳುಹಿಸುವ ಗುರಿ ಹೊಂದಲಾಗಿದೆ. ಜನವರಿ 4-5ರಂದು ಆದಿಚುಂಚನಗಿರಿಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದೆ.

ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ. ಕ್ರೀಡಾ ಇಲಾಖೆಗೆ ಹೆಚ್ಚಿನ ಶಕ್ತಿ ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ನಾರಾಯಣಗೌಡ ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಬೆಂಗಳೂರಿನ ಎಂಜಿ ರಸ್ತೆಗೆ ಭೇಟಿ ನೀಡಿದ ಗೃಹ ಸಚಿವ: ಪೊಲೀಸರಿಗೆ ಸಿಹಿ ಹಂಚಿ ಶುಭಾಶಯ

ABOUT THE AUTHOR

...view details