ಬೆಂಗಳೂರು: ಸಕ್ಕರೆ ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಬಾಕಿ ಹಣವನ್ನು ಈ ತಿಂಗಳ ಅಂತ್ಯದೊಳಗೆ ಪಾವತಿಸಬೇಕೆಂದು ಸರ್ಕಾರ ಗಡುವು ನೀಡಿದೆ. ಕಳೆದ ವರ್ಷ ಮನವಿ ಮಾಡಿದ ಹಿನ್ನೆಲೆಯಲ್ಲಿ ರೈತರಿಗೆ ಬಾಕಿ ಹಣ ನೀಡಿದ್ದರು. ಈ ವರ್ಷ ಇನ್ನೂ ಕಬ್ಬು ಕಟಾವು ನಡೆದಿದೆ. ರಾಜ್ಯದಲ್ಲಿ 621.93 ಮೆ.ಟನ್ ಕಬ್ಬು ನುರಿಸಲಾಗಿದೆ. 19,626 ಕೋಟಿ ರೂ. ರೈತರಿಗೆ ಬಾಕಿ ಕೊಡಿಸಬೇಕಿದೆ. 18,224. ಕೋಟಿ ರೂ. ಈಗಾಗಲೇ ಪಾವತಿ ಮಾಡುವ ಕೆಲಸ ಆಗಿದೆ ಎಂದು ಸಕ್ಕರೆ ಸಚಿವ ಶಂಕರ್ ಪಾಟೀಲ್ ಬಿ.ಮುನೇನಕೊಪ್ಪ ಮಾಹಿತಿ ನೀಡಿದರು.
ವಿಕಾಸ ಸೌಧದಲ್ಲಿ ಇಂದು ಕಾರ್ಖಾನೆಯ ಮಾಲೀಕರು ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರ ಸಭೆ ಕರೆದು ಚರ್ಚಿಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಸೂಚನೆ ಕೊಟ್ಟ ನಂತರ 400 ಕೋಟಿ ಕೊಟ್ಟಿದ್ದಾರೆ. ಅಂದರೆ ಶೇಕಡಾ 93 ರಷ್ಟು ಹಣವನ್ನು ಕಾರ್ಖಾನೆಯವರು ನೀಡಿದ್ದಾರೆ. ಬಾಕಿ ಶೇ. 7 ಹಣವನ್ನು ಈ ತಿಂಗಳ ಅಂತ್ಯದೊಳಗೆ ನೀಡುವಂತೆ ಸೂಚಿಸಿದ್ದೇವೆ. 1,435 ಕೋಟಿ ಬಾಕಿ ಉಳಿದಿದೆ. ಇಂದಿನ ಸಭೆಯಲ್ಲಿ 200. ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದು ವಿವರಿಸಿದರು.
ಸಹಕಾರಿ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನ: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರವೇ ನಡೆಸಲು 50 ಕೋಟಿ ರೂ. ನೀಡಲಾಗಿದೆ. ಬಾಗಲಕೋಟೆಯ ರನ್ನ ಕಾರ್ಖಾನೆಯನ್ನು ನಡೆಸಲು ಖಾಸಗಿಯವರು ಮುಂದೆ ಬಂದಿದ್ದಾರೆ. ಆರ್ಥಿಕ ಸಂಕಷ್ಟದಿಂದ ಹಾಗೂ ಇತರೆ ಕಾರಣಗಳಿಂದಾಗಿ ಸ್ಥಗಿತಗೊಂಡಿದ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಕಬ್ಬು ಬೆಳಗಾರ ರೈತರ ಮತ್ತು ಕಾರ್ಮಿಕರ ಹಿತದೃಷ್ಠಿಯಿಂದ ಪುನಶ್ಚೇತನಗೊಳಿಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ, ಮುಧೋಳ ಮತ್ತು ಮೈಸೂರಿನ ಶ್ರೀರಾಮ ಸಹಕಾರಿ ಸಕ್ಕರೆ ಕಾರ್ಖಾನೆ, ಕೆ.ಆರ್.ನಗರ ಈ ಎರಡು ಕಾರ್ಖಾನೆಗಳನ್ನು ಖಾಸಗಿಯವರಿಗೆ ದೀರ್ಘಾವಧಿ ಮೇಲೆ ಗುತ್ತಿಗೆ ನೀಡಲಾಗಿದೆ. ಹಂಗಾಮಿನಿಂದ ಕಾರ್ಖಾನೆಗಳು ಕಾರ್ಯ ಪ್ರಾರಂಭಿಸಲಿವೆ ಎಂದು ಹೇಳಿದರು.