ಕರ್ನಾಟಕ

karnataka

ರಾಜ್ಯಕ್ಕೆ ಹಂಚಿಕೆಯಾದ ನೀರು ಪೂರ್ಣ ಪ್ರಮಾಣದ ಸದ್ಬಳಕೆಗೆ ಕ್ರಮ ಕೈಗೊಳ್ಳಿ: ಸಚಿವ ಗೋವಿಂದ ಕಾರಜೋಳ ಸೂಚನೆ

ರಾಜ್ಯದ ವಿವಿಧ ಜಲಾಶಯಗಳ ನೀರನ್ನು ನ್ಯಾಯಾಲಯ ಅಥವಾ ಜಲವಿವಾದ ನ್ಯಾಯಾಧಿಕರಣವು ನೀಡಿದ ತೀರ್ಪಿನಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರು ಪೂರ್ಣಪ್ರಮಾಣದಲ್ಲಿ ಸದ್ಬಳಕೆಯಾಗಬೇಕು ಎಂದು ಸಚಿವ ಗೋವಿಂದ ಎಂ. ಕಾರಜೋಳ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

By

Published : Aug 9, 2021, 4:13 PM IST

Published : Aug 9, 2021, 4:13 PM IST

Minister Govinda Karajola notice
ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಗೋವಿಂದ ಕಾರಜೋಳ ಸಭೆ

ಬೆಂಗಳೂರು:ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆ‌ಯಾಗುವಂತೆ ಕ್ರಮ ವಹಿಸಬೇಕೆಂದು ನೂತನ ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕರ್ನಾಟಕ ನೀರಾವರಿ ನಿಗಮದಲ್ಲಿ ಇಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಥಮ ಸಭೆ ನಡೆಸಿದ ಅವರು, ರಾಜ್ಯದ ವಿವಿಧ ಜಲಾಶಯಗಳ ನೀರನ್ನು ನ್ಯಾಯಾಲಯವು ಅಥವಾ ಜಲವಿವಾದ ನ್ಯಾಯಾಧಿಕರಣವು ನೀಡಿದ ತೀರ್ಪಿನಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರು ಪೂರ್ಣ ಪ್ರಮಾಣದಲ್ಲಿ ಸದ್ಬಳಕೆಯಾಗಬೇಕು ಎಂದು ತಿಳಿಸಿದರು.

ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಗೋವಿಂದ ಕಾರಜೋಳ ಸಭೆ

ರಾಜ್ಯದಲ್ಲಿ 140 ಲಕ್ಷ ಹೆಕ್ಟೇರ್ ಪ್ರದೇಶ ವ್ಯವಸಾಯಕ್ಕೆ ಯೋಗ್ಯವಾಗಿದ್ದು, 40.66 ಲಕ್ಷ ಹೆಕ್ಟೇರ್ ಪ್ರದೇಶವು ಅದರಲ್ಲಿ ಬೃಹತ್ ಮತ್ತು ಮಧ್ಯಮ ಜಲಸಂಪನ್ಮೂಲ ಇಲಾಖೆಯ ಯೋಜಿತ ನೀರಾವರಿ ಕ್ಷೇತ್ರವಾಗಿದೆ. ಅದರಲ್ಲಿ 29.18 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ.

ಪ್ರಸಕ್ತ ಆಯವ್ಯಯದಲ್ಲಿ 18,702 ಕೋಟಿ ಅನುದಾನ ಮೀಸಲಿಡಲಾಗಿದ್ದು, ಜುಲೈ ಅಂತ್ಯಕ್ಕೆ 5,053 ಕೋಟಿ ರೂ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಮುಖವಾಗಿರುವುದರಿಂದ ಭೂ ಸ್ವಾಧೀನಕ್ಕೆ ಆದ್ಯತೆ ನೀಡಿ, ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

ಸರ್ಕಾರಕ್ಕೆ ಹೆಚ್ಚಿನ ಹೊರೆ ಆಗದಂತಹ ನೀರಿನ ಸದ್ಬಳಕೆಯಾಗುವ ಹಾಗೂ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು. ಕೆರೆಗೆ ನೀರು ತುಂಬುವ ಯೋಜನೆ, ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಯೋಜನೆಗಳು ಉತ್ತಮವಾಗಿದ್ದು, ಇದರಿಂದ ಅಂತರ್ಜಲ ವೃದ್ದಿಯಾಗುತ್ತದೆ. ಸವಳು - ಜವಳು ಸಮಸ್ಯೆ ಉದ್ವವವಾಗುವುದಿಲ್ಲ. ನಿರ್ವಹಣಾ ವೆಚ್ಚವೂ ಇರುವುದಿಲ್ಲ.

ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಗೋವಿಂದ ಕಾರಜೋಳ ಸಭೆ

ಕೃಷಿ ಹೊಂಡಗಳ ಒಳಭಾಗದಲ್ಲಿ ಉತ್ತಮ ಗುಣಮಟ್ಟದ ಶೀಟ್ ಅಳವಡಿಸಬೇಕು. ಇದರಿಂದ ನೀರು ಶೇಖರಣೆಗೆ ಅನುಕೂಲವಾಗುವುದರ ಜೊತೆಗೆ ಕೃಷಿ ಹೊಂಡಗಳಲ್ಲಿ ನೀರು ಇಂಗದೇ ಸದುಪಯೋಗವಾಗುತ್ತದೆ‌. ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು.

ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಲಕ್ಷಣ ರಾವ್ ಪೇಶ್ವೆ, ಕೆಎನ್ ಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಚಿಣಿ, ಅಪರ ಕಾರ್ಯದರ್ಶಿಗಳಾದ ಶ್ರೀ ಕುಲಕರ್ಣಿ, ಜಂಟಿಕಾರ್ಯದರ್ಶಿ ಶ್ರೀ ಬಸವರಾಜಯ್ಯ ಮತ್ತಿತರರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ:ಪಿಎಂ ಉಜ್ವಲ ಯೋಜನೆಯ 2ನೇ ಹಂತದಲ್ಲಿ ರಾಜ್ಯದಿಂದ ಆಯ್ಕೆಯಾದ ಏಕೈಕ ಜಿಲ್ಲೆ ಇದು

ABOUT THE AUTHOR

...view details