ಕರ್ನಾಟಕ

karnataka

ಜಲ ಜೀವನ್ ಮಿಷನ್ ಅಡಿ 2023ಕ್ಕೆ ಎಲ್ಲ ಮನೆಗಳಿಗೂ ಕುಡಿಯುವ ನೀರು: ಸಚಿವ ಈಶ್ವರಪ್ಪ ಭರವಸೆ

By

Published : Sep 24, 2021, 1:54 PM IST

2023ರೊಳಗೆ ರಾಜ್ಯದ ಎಲ್ಲ ಹಳ್ಳಿಗಳಲ್ಲಿ ಪ್ರತಿ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆ ಮಾಡುವ ಗುರಿ ಹೊಂದಿದ್ದು, ಮೂರು ವರ್ಷದಲ್ಲಿ ಈ ಗುರಿಯನ್ನು ತಲುಪಲಿದ್ದೇವೆ ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ.

Minister Eshwarappa talking Council Session
2023ಕ್ಕೆ ಜಲ ಜೀವನ್ ಮಿಷನ್ ಅಡಿ ಎಲ್ಲಾ ಮನೆಗಳಿಗೂ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆ; ಸಚಿವ ಈಶ್ವರಪ್ಪ

ಬೆಂಗಳೂರು: ಜಲ ಜೀವನ್ ಮಿಷನ್ ಯೋಜನೆಯಡಿ 2023ರ ಒಳಗೆ ರಾಜ್ಯದ ಪ್ರತಿ ಗ್ರಾಮದ ಪ್ರತಿ ಮನೆಗೂ ನಲ್ಲಿ ಮೂಲಕ ಕುಡಿಯುವ ನೀರಿನ ಪೂರೈಕೆ ಮಾಡಲಾಗುತ್ತದೆ. ಯೋಜನೆಗೆ ಹಣಕಾಸು ಕೊರತೆ ಇಲ್ಲ, ಸುಸ್ಥಿರ ಜಲಮೂಲದ ಆಧಾರದಲ್ಲಿ ಗುರಿ ತಲುಪಲಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಪರಿಷತ್‌ ಕಲಾಪದಲ್ಲಿ ತಿಳಿಸಿದ್ದಾರೆ.

2023ಕ್ಕೆ ಜಲ ಜೀವನ್ ಮಿಷನ್ ಅಡಿ ಎಲ್ಲ ಮನೆಗಳಿಗೂ ನಲ್ಲಿ ಮೂಲಕ ಕುಡಿಯುವ ನೀರು ಪೂರೈಕೆ; ಸಚಿವ ಈಶ್ವರಪ್ಪ

ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೇಂದ್ರ ಸರ್ಕಾರ ಮೋದಿ ಪ್ರಧಾನಿ ಆದ ನಂತರ ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ಉತ್ಸುಕತೆ ತೋರಿದೆ. 2023ರ ಕೊನೆಯ ಒಳಗೆ ರಾಜ್ಯದ ಎಲ್ಲ ಹಳ್ಳಿ, ಎಲ್ಲ ಮನೆಗೂ ಕುಡಿಯುವ ನೀರನ್ನು ನಲ್ಲಿ ಮೂಲಕ ಕೊಡಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿ ದಿನ 6 - 8 ಸಾವಿರ ಮನೆಗಳ ಸಂಪರ್ಕ ಕೊಡಲಾಗುತ್ತಿದೆ. 2023ಕ್ಕೆ ನಾವು ಮೂರು ವರ್ಷದ ಗುರಿ ತಲುಪಲಿದ್ದೇವೆ ಎಂದರು.

ಬಹುಗ್ರಾಮ ಕುಡಿಯುವ ನೀರು ಯೋಜನೆಯೂ ಜಾರಿಯಲ್ಲಿದೆ. ಎಲ್ಲೆಲ್ಲಿ ನೀರಿನ ಲಭ್ಯತೆ ಇದೆಯೋ ಅಲ್ಲಿ ಯೋಜನೆ ಮುಗಿಸಲು ಸಾಧ್ಯವಿದೆ. ನೀರು ಇಲ್ಲದ ಕೆಲವು ಕಡೆಯೂ ಕಾಮಗಾರಿ ಮಾಡಿದ್ದಾರೆ. ಅಲ್ಲಿ ನೀರು ಇಲ್ಲದ ಕಾರಣ ಕಾಮಗಾರಿ ವ್ಯರ್ಥವಾಗಿದೆ. ಎಸ್ಟಿಮೇಟ್‌ನಲ್ಲಿ ಒಂದು ಪೈಪ್​ ಇದೆ.

ಹಾಕಿರೋದು ಬೇರೆ ಪೈಪ್​, ಅದರ ತನಿಖೆ ಮಾಡಿ ಲೋಪ ಸರಿಪಡಿಸಲಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಎತ್ತಿನಹೊಳೆ ಯೋಜನೆ ಬಂದ ಕೂಡಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗುತ್ತದೆ. ಯೋಜನೆಗೆ ಹಣದ ಕೊರತೆ ಇಲ್ಲ ಎಂದು ಸಚಿವ ಈಶ್ವರಪ್ಪ ಸ್ಪಷ್ಟಪಡಿಸಿದರು. ರಾಜ್ಯದ ಅಂಗನವಾಡಿ ಕೇಂದ್ರ, ಶಾಲೆಗಳಿಗೆ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಆದ್ಯತೆ ಕೊಡಲಾಗಿದೆ. ಎಲ್ಲಿ ಈ ವ್ಯವಸ್ಥೆ ಆಗಿಲ್ಲವೋ ಅಲ್ಲಿ ಮುಗಿಸಿಕೊಡಲಿದ್ದೇವೆ ಎಂದರು.

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಸರ್ಕಾರ ನಮ್ಮದಲ್ಲ:

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಸರ್ಕಾರ ನಮ್ಮದಲ್ಲಿ. ಎತ್ತಿಗೆ ಜ್ವರ ಬಂದರೆ ಎತ್ತಿಗೇ ಬರೆ ಹಾಕುವ ಸರ್ಕಾರ ಎಂದು ಗಾದೆ ಮೂಲಕ ಸರ್ಕಾರಕ್ಕೆ ಟಾಂಗ್ ನೀಡಿದ್ದ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್‌ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದರು.

ಪ್ರಶ್ನೋತ್ತರ ಕಲಾಪದಲ್ಲಿ ಪ್ರವಾಹ ಹಾನಿ ಕುರಿತು ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸಿದರು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕುವ ಸರ್ಕಾರ ಇದಾಗಿದೆ ಎಂದು ಕಾಲೆಳೆದರು. ಪ್ರಶ್ನೆಗೆ ಉತ್ತರ ನೀಡುವ ವೇಳೆ ಇದಕ್ಕೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ, ಎತ್ತಿಗೆ ಜ್ವರ ಬಂದರೆ ಎಮ್ಮಗೆ ಬರೆ ಹಾಕುವ ಸರ್ಕಾರ ಇದಾಗಿದೆ ಎನ್ನುವ ಗಾದೆ ಮಾತು ಹೇಳಿದ್ದಾರೆ.

ಆದರೆ, ನಮ್ಮ ಸರ್ಕಾರ ಎಮ್ಮಗೆ ಜ್ವರ ಬಂದರೆ ಎಮ್ಮೆಗೇ ಬರೆ ಹಾಕುತ್ತದೆ. ಎತ್ತಿಗೆ ಜ್ವರ ಬಂದರೆ ಎತ್ತಿಗೆ ಬರೆ ಹಾಕುತ್ತದೆ ಎಂದರು. ಈ ವೇಳೆ, ಮಧ್ಯ ಪ್ರವೇಶಿಸಿದ ಸಭಾಪತಿ ಬಸವರಾಜ ಹೊರಟ್ಟಿ. ಪ್ರಶ್ನೆಗೆ ಜ್ವರ ಬಂದರೆ ಏನು ಮಾಡುವುದು ಎಂದು ಹಾಸ್ಯ ಚಟಾಕಿ ಹಾರಿಸಿದರು. ಇದಕ್ಕೂ ಪ್ರತಿಕ್ರಿಯೆ ನೀಡಿದ ಸಚಿವ ಈಶ್ವರಪ್ಪ, ಆಯಾ ಇಲಾಖೆ‌ ಸಚಿವರು ಆ ಪ್ರಶ್ನೆಗೆ ಬರೆ ಹಾಕಲಿದ್ದಾರೆ ಎಂದರು. ನಂತರ ನನ್ನ ಇಲಾಖೆಯ ಪ್ರಶ್ನೆಗೆ ಉತ್ತರ ನೀಡಿದ್ದೇನೆ, ಸದಸ್ಯರು ಕೇಳಿರುವ ವಿವರಣೆ ಕಂದಾಯ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಅವರಿಂದ ಉತ್ತರ ಕೊಡಿಸಲಾಗುತ್ತದೆ ಎಂದರು.

ಗಡಿ ಭಾಗದ ಚೆಕ್ ಪೋಸ್ಟ್ ಖಾಲಿ ಹುದ್ದೆ ಭರ್ತಿ:

ರಾಜ್ಯದ ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯಿಂದ ಅಳವಡಿಸಿರುವ 15 ಚೆಕ್ ಪೋಸ್ಟ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಹುದ್ದೆಗಳ ಭರ್ತಿ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಪರವಾಗಿ ನಾರಾಯಣಸ್ವಾಮಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯಿಂದ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಗಡಿ ಭಾಗದಲ್ಲಿನ ಎಲ್ಲ 15 ಚೆಕ್ ಪೋಸ್ಟ್‌ಗಳಲ್ಲಿ ಕಾರ್ಯನಿರ್ವಹಿಸಲು 37 ಖಾಯಂ ಹುದ್ದೆ ಮಂಜೂರಾಗಿದ್ದು, 8 ಹುದ್ದೆ ಮಾತ್ರ ಭರ್ತಿಯಾಗಿದೆ. 29 ಹುದ್ದೆ ಖಾಲಿ ಇವೆ.

ಇದರ ಜೊತೆಗೆ ಇಲಾಖೆಯಲ್ಲಿ 2021 ರವರೆಗೆ 2,781 ಹುದ್ದೆ ಮಂಜೂರಾತಿ ಆಗಿದ್ದು, 1,257 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. 1,529 ಹುದ್ದೆ ಖಾಲಿ ಇವೆ. ತಾಂತ್ರಿಕ ತೊಂದರೆಯಿಂದ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಈಗ ಕೆಪಿಎಸ್ಸಿಗೆ ಹುದ್ದೆ ಭರ್ತಿ ಮಾಡಲು ಪ್ರಸ್ತಾವನೆ ಮಾಡಲಾಗಿದೆ. ಆದಷ್ಟು ಬೇಗ ಹುದ್ದೆ ಭರ್ತಿ ಮಾಡಲಾಗುತ್ತದೆ ಎಂದರು.

ಹುದ್ದೆಗಳು ಖಾಲಿ ಇರುವುದು ಸತ್ಯ, ಆದರೆ, ಚೆಕ್ ಪೋಸ್ಟ್ ಗಳಲ್ಲಿ ಹಫ್ತಾ ವಸೂಲಿ ಮಾಡಲಾಗುತ್ತದೆ ಎನ್ನುವುದು ಸರಿಯಲ್ಲ, ಈ ಪದ ಕಡತದಿಂದ ತೆಗೆಯಬೇಕು, ನಾವು ಆದಷ್ಟು ಬೇಗ ಖಾಲಿ ಹುದ್ದೆ ಭರ್ತಿ ಮಾಡಲಿದ್ದೇವೆ ಎಂದರು.

ABOUT THE AUTHOR

...view details