ಕರ್ನಾಟಕ

karnataka

ನಮ್ಮಲ್ಲಿರುವ ಲೋಪದೋಷಗಳ ಬಗ್ಗೆ ನಾನು ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ: ಸಿ.ಪಿ ಯೋಗೇಶ್ವರ್

By

Published : Jul 8, 2021, 8:01 PM IST

ಎಂ.ಪಿ ರೇಣುಕಾಚಾರ್ಯ ಸಿಎಂ‌ ರಾಜಕೀಯ ಕಾರ್ಯದರ್ಶಿಯಾಗಲು ಸಿ.ಪಿ ಯೋಗೇಶ್ವರ್ ಕಾರಣ. ನಾನೂ ಈ ಹಿಂದೆ ಮಂತ್ರಿಯಾಗಿದ್ದೆ, ಶಾಸಕನಾಗಿದ್ದೆ. ಹಲವಾರು ಬಾರಿ ರಾಜೀನಾಮೆ ಕೊಟ್ಟು ಗೆದ್ದು ಬಂದಿದ್ದೇನೆ. ಮುಂದಿನ ವಿದ್ಯಮಾನಗಳು ಏನಾಗುತ್ತದೆಯೋ ನೋಡೋಣ ಎಂದು ಸಚಿವ ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.

Minister C.P. Yogeshwar
ಸಿ.ಪಿ ಯೋಗೇಶ್ವರ್

ಬೆಂಗಳೂರು: ಸಿಎಂ ವಿರುದ್ಧ ಮಾತನಾಡಿರುವವರ ಬಗ್ಗೆ ಶಾಸಕರೆಲ್ಲಾ ಸೇರಿ ಹೈಕಮಾಂಡ್​ಗೆ ದೂರು ನೀಡುತ್ತೇವೆ ಎಂದ ರೇಣುಕಾಚಾರ್ಯ ಮಾತಿಗೆ ಸಚಿವ ಸಿ.ಪಿ ಯೋಗೇಶ್ವರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಬೇರೆಯವರ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ವಿಚಾರವನ್ನು ಆಯಾ ಸಂದರ್ಭದಲ್ಲಿ ವ್ಯಕ್ತಪಡಿಸುತ್ತಿದ್ದೇನೆ, ಅದಕ್ಕೆ ಬದ್ಧವಾಗಿದ್ದೇನೆ. ನಾನು ನಮ್ಮಲ್ಲಿರುವ ಲೋಪದೋಷಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ ಎಂದಿದ್ದಾರೆ.

ರೇಣುಕಾಚಾರ್ಯ ಮಾತಿಗೆ ಪ್ರತಿಕ್ರಿಯಿಸಿದ ಸಚಿವ ಸಿ.ಪಿ ಯೋಗೇಶ್ವರ್

ಎಂ.ಪಿ.ರೇಣುಕಾಚಾರ್ಯ ಸಿಎಂ‌ ರಾಜಕೀಯ ಕಾರ್ಯದರ್ಶಿಯಾಗಲು ಸಿ.ಪಿ ಯೋಗೇಶ್ವರ್ ಕಾರಣ. ಇವತ್ತು ಅವರಿಗೆ "ಸೆವೆನ್ ಮಿನಿಸ್ಟರ್ ಕ್ವಾಟರ್ಸ್"ನಲ್ಲಿ ಒಂದು ಮನೆ ಸಿಕ್ಕಿದೆ ಅಂದ್ರೆ ಅದಕ್ಕೆ ನಾನು ಕಾರಣ. ನನ್ನ ನಿಲುವನ್ನು ನಾನು ಪ್ರತಿಪಾದಿಸದೇ ಬಿಡುವುದಿಲ್ಲ ಎಂದರು.

ರಾಜೀನಾಮೆ ಕೊಟ್ಟು ಸಿಎಂ ವಿರುದ್ಧ ಮಾತನಾಡಲಿ ಎಂಬ ರೇಣುಕಾಚಾರ್ಯ ಮಾತಿಗೆ ಉತ್ತರಿಸಿ ಅವರು, ನಾನು ಈ ಹಿಂದೆ ಮಂತ್ರಿಯಾಗಿದ್ದೆ, ಶಾಸಕನಾಗಿದ್ದೆ. ಹಲವಾರು ಬಾರಿ ರಾಜೀನಾಮೆ ಕೊಟ್ಟು ಗೆದ್ದು ಬಂದಿದ್ದೇನೆ. ಮುಂದಿನ ವಿದ್ಯಮಾನಗಳು ಏನಾಗುತ್ತದೆಯೋ ನೋಡೋಣ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿಯ ಬಗ್ಗೆ ಅಪಾರವಾದ ಗೌರವವಿದೆ. ನಾವು ಮುಖ್ಯಮಂತ್ರಿಗಳ ಆಡಳಿತ ವೈಖರಿಯನ್ನು ಒಪ್ಪಿಕೊಂಡಿದ್ದೇವೆ. ನಿನ್ನೆ ಪ್ರಧಾನಿಯವರು ಮಂತ್ರಿ ಮಂಡಲವನ್ನು ವಿಸ್ತರಣೆ ಮಾಡಿದ್ದಾರೆ, ಅದರ ಬಗ್ಗೆ ಗೌರವವಿದೆ. ನಮ್ಮ ರಾಜ್ಯದಲ್ಲೂ ಉತ್ತಮವಾಗಿ ಆಡಳಿತವನ್ನು ನಡೆಸುತ್ತಿದ್ದಾರೆ. ಆಯಾ ಸಂದರ್ಭದಲ್ಲಿ ನಮ್ಮ ನೋವನ್ನ ನಿಮ್ಮ ಮುಂದೆ ವ್ಯಕ್ತಪಡಿಸುತ್ತೇವೆ. ನಮಗೆ ಆಗಿರುವ ಕಿರುಕುಳದ ಬಗ್ಗೆ ನೋವು ವ್ಯಕ್ತಪಡಿಸಿದ್ರೆ, ನಾಳೆ ಬೆಳಗ್ಗೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿಎಂ ಬಳಿ ಹೋಗಿ ಕೈಕಾಲು ಕಟ್ಟಿಕೊಳ್ಳುತ್ತಾರೆ. ಡಿಕೆಶಿ ರಾತ್ರಿ ಹೊತ್ತು ಹೋಗುತ್ತಾರೆ ಎಂದರು.

ಇನ್ನು ಕಳೆದ ಎರಡ್ಮೂರು ದಿನಗಳಿಂದ ಮಂಡ್ಯ ಸಂಸದೆ ಮತ್ತು ಕುಮಾರಸ್ವಾಮಿ ನಡುವೆ ಫೈಟಿಂಗ್ ನಡೆಯುತ್ತಿದೆ. ನಾನು ಗಮನಿಸಿದ ಹಾಗೆ ಕೆಆರ್​ಎಸ್​ನ ಇಪ್ಪತ್ತು, ಮೂವತ್ತು ಕಿ.ಮೀ ಸುತ್ತಲೂ ನಿರಂತರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಡ್ಯಾಮ್​ಗೆ ಡ್ಯಾಮೇಜ್ ಆಗಬಹುದು ಅಂತ ಸಂಸದರಿಗೆ ಆತಂಕವಿರಬಹುದು ಎಂದರು.

ಜೆಡಿಎಸ್​ ರಾಜಕೀಯ ನೆಲೆ ಕಳೆದುಕೊಳ್ಳುತ್ತಿದೆ: ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಈಗಾಗಲೇ ಅವರ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ‌ಅವರ ಹೇಳಿಕೆ ತೂಕ ಕಳೆದುಕೊಂಡಿದೆ. ನಾನು ನನ್ನ ಜಿಲ್ಲೆಯ ಸಮಸ್ಯೆ ಬಗ್ಗೆ ಹೇಳಿಕೊಂಡರೆ ಅದು ನನಗೆ ರಿವರ್ಸ್ ಆಗುತ್ತದೆ.‌ ಕುಮಾರಸ್ವಾಮಿ ಅವರ ರಾಜಕೀಯ ನೆಲೆ ದಿನೇ ದಿನೇ ಕಳೆದುಕೊಳ್ಳುತ್ತಿದೆ. ಹೀಗಾಗಿ ಆತಂಕದಿಂದ ವಿಚಲಿತರಾಗಿ ಮಾತನಾಡುತ್ತಿದ್ದಾರೆ. ಅವಾಚ್ಯವಾಗಿ ಮಾತಾಡುವುದು ಕುಮಾರಸ್ವಾಮಿ ಅವರಿಗೆ ಶೋಭೆ ತರುವಂತಹದ್ದಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ನ‌ ಕಥೆ ಗೊತ್ತಾಗಲಿದೆ ಎಂದರು.

ಕಳೆದ ಚುನಾವಣೆಯಲ್ಲಿ ಮಂಡ್ಯದ ಜನ ಮಗನನ್ನು ಸೋಲಿಸಿದ್ದಾರೆ. ಹಳೆ ಮೈಸೂರು ಭಾಗವನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ?. ಮಂಡ್ಯದಲ್ಲಿ ಬೇರೆ ಸಂಸದರು ಗೆದ್ದಿರುವುದು ಅವರಿಗೆ ತಡೆಯಲು ಆಗ್ತಿಲ್ಲ. ಮಂಡ್ಯ ಬಿಟ್ಟರೆ ಅವರಿಗೆ ಬೇರೆ ಕಡೆ ರೂಮ್ ಇಲ್ಲ. ಬೇರೆ ಎಲ್ಲೂ ಹೋಗಲು ಆಗಲ್ಲ. ಉತ್ತರ ಕರ್ನಾಟಕದ‌ ಬೇರೆ ಎಲ್ಲೂ ನೆಲೆಯಿಲ್ಲ, ಹಾಗಾಗಿ ನೋವಾಗಿದೆ. ಕುಮಾರಸ್ವಾಮಿ ಚುನಾವಣೆ ಬಂದಾಗಲೆಲ್ಲ ನಾನು ಮುಖ್ಯಮಂತ್ರಿ ಆಗ್ತಿನಿ ಅಂತ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಾರೆ ಎಂದರು.

ಮುಂದಿನ ದಿನಗಳಲ್ಲಿ ನಾನು ನಮ್ಮ ಇಲಾಖೆಯಿಂದ ಗಣಿಗಾರಿಕೆಗಳಿಗೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇನೆ. ಚೆನ್ನಪಟ್ಟಣ ನನ್ನ ಹುಟ್ಟು ತಾಲೂಕು. ನಾನು ಮತ್ತೆ ಅಲ್ಲಿಯೇ ಬಿಜೆಪಿ ಪಕ್ಷದಿಂದಲೇ ನಿಲ್ಲುತ್ತೇನೆ. ಡಿಕೆಶಿ ನಮಗೆ ಆಹ್ವಾನ ನೀಡಿರುವುದು, ನಾವೇನು ಅವರಿಗೆ ಆಹ್ವಾನ ನೀಡುವುದಿಲ್ಲ ಎಂದರು.

ABOUT THE AUTHOR

...view details