ಕರ್ನಾಟಕ

karnataka

By

Published : Nov 22, 2021, 7:25 PM IST

ETV Bharat / city

ಭ್ರಷ್ಟ ಅಧಿಕಾರಿಗೆ 13 ವರ್ಷದ ಬಳಿಕ ಶಿಕ್ಷೆ ನೀಡಿದ ಹೈಕೋರ್ಟ್‌; ವಿಚಾರಣಾ ನ್ಯಾಯಾಲಯದ ಕ್ರಮಕ್ಕೆ ಆಕ್ಷೇಪ

ಲಂಚ ಸ್ವೀಕರಿಸಿರುವುದು ಸಾಕ್ಷ್ಯಸಹಿತ ದೃಢಪಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ, ಆರೋಪಿತ ಅಧಿಕಾರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣ ದಾಖಲಾದ 13 ವರ್ಷಗಳ ಬಳಿಕ ಭ್ರಷ್ಟಾಚಾರ ಆರೋಪದಡಿ ಅಪರಾಧಿಗೆ ಶಿಕ್ಷೆ ವಿಧಿಸಲಾಗಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು:ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ (Midday Meal Scheme) ಬಳಸಿದ್ದ ಟ್ಯಾಕ್ಸಿಗೆ ನೀಡಬೇಕಿದ್ದ ಬಾಡಿಗೆ ಹಣದ ಚೆಕ್ ವಿತರಿಸಲು ₹1 ಸಾವಿರ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಕೊಪ್ಪಳ ಜಿಲ್ಲಾ ಪಂಚಾಯಿತಿ ನೌಕರನಿಗೆ ಹೈಕೋರ್ಟ್ 2 ವರ್ಷ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಈ ಪ್ರಕರಣದಲ್ಲಿ ಲಂಚ ಸ್ವೀಕರಿಸುವ ವೇಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದರೂ ವಿಚಾರಣಾ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದ್ದ ಕೊಪ್ಪಳ ಜಿಲ್ಲಾ ಪಂಚಾಯಿತಿಯ ಪ್ರಥಮ ದರ್ಜೆ ಸಹಾಯಕನಿಗೆ ಶಿಕ್ಷೆ ಕೊಡಿಸುವಲ್ಲಿ ಲೋಕಾಯುಕ್ತ (Lokayukta Police) ಪೊಲೀಸರು ಯಶಸ್ವಿಯಾಗಿದ್ದಾರೆ.

ಲಂಚ ಸ್ವೀಕರಿಸಿರುವುದು ಸಾಕ್ಷ್ಯಸಹಿತ ದೃಢಪಟ್ಟಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾ. ರಾಜೇಂದ್ರ ಬಾದಾಮಿಕರ್ ಅವರಿದ್ದ ಪೀಠ, ಆರೋಪಿತ ಅಧಿಕಾರಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣ ದಾಖಲಾದ 13 ವರ್ಷಗಳ ಬಳಿಕ ಭ್ರಷ್ಟಾಚಾರ ಆರೋಪದಡಿ ಶಿಕ್ಷೆ ವಿಧಿಸಲಾಗಿದೆ.

ಪ್ರಕರಣದ ಹಿನ್ನೆಲೆ:

2008ರ ಜೂನ್ ಹಾಗೂ ಜುಲೈ ತಿಂಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ಬಳಸಲು ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕಾರೊಂದನ್ನg ಬಾಡಿಗೆಗೆ ಪಡೆದಿದ್ದರು. ಈ ಎರಡು ತಿಂಗಳ ಬಾಡಿಗೆ ಮೊತ್ತ ₹30,500 ಚೆಕ್ ನೀಡಲು ₹10 ಸಾವಿರ ಲಂಚ ನೀಡುವಂತೆ ಜಿ.ಪಂ ನ ಹಣಕಾಸು ವಿಭಾಗದ ಪ್ರಥಮ ದರ್ಜೆ ಸಹಾಯಕ ಎಸ್.ನಿರುಪಡಿ ಬೇಡಿಕೆ ಇಟ್ಟಿದ್ದರು.

ಆದರೆ, ಕಾರಿಗೆ ಡೀಸೆಲ್ ಹಾಕಿಸಲು ಸಹ ಹಣವಿಲ್ಲ ಎಂದಿದ್ದ ಟ್ಯಾಕ್ಸಿ ಚಾಲಕ (Taxi driver) ಒಂದು ತಿಂಗಳ ಚೆಕ್ ನೀಡಿದರೆ ಹಣ ನೀಡುವ ಭರವಸೆ ನೀಡಿದ್ದ. ಆದರೆ ಲಂಚದ ಹಣ ನೀಡದ ಕಾರಣ ಎರಡನೇ ಚೆಕ್ ವಿತರಿಸಲು ಅಧಿಕಾರಿ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರು ಚಾಲಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಈ ಕುರಿತ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ₹500 ನ ಒಂದು ನೋಟು ಹಾಗೂ ₹100 ರ ಐದು ನೋಟುಗಳನ್ನು ಕಾರಿನ ಚಾಲಕನಿಂದ ಪಡೆದು, ರಾಸಾಯನಿಕ ದ್ರಾವಣ (Chemical) ಸಿಂಪಡಿಸಿ ಅದನ್ನು ಚಾಲಕನಿಗೇ ಹಿಂದುರುಗಿಸಿ, ಆ ಹಣವನ್ನು ಅಧಿಕಾರಿಗೆ ನೀಡಲು ಸೂಚಿಸಿದ್ದರು. 2008ರ ಆಗಸ್ಟ್ 25ರಂದು ಕಾರು ಚಾಲಕ ಬಾಡಿಗೆ ಹಣದ ಚೆಕ್ ಕೇಳಲು ಹೋದಾಗ ಅಧಿಕಾರಿ ಇಟ್ಟ ಬೇಡಿಕೆಯಂತೆ ಆ ಹಣವನ್ನು ನೀಡಿದ್ದರು.

ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಹಣದ ಸಮೇತ ರೆಡ್​ಹ್ಯಾಂಡ್​ ಆಗಿ ಹಿಡಿದಿದ್ದರು. ನಂತರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (Prevention of Corruption Act)ಅಡಿ ಪ್ರಕರಣ ದಾಖಲಿಸಿದ್ದರು. ಆದರೆ, ಅಧಿಕಾರಿಯನ್ನು ಲೋಕಾಯುಕ್ತ ನ್ಯಾಯಾಲಯ (Lokayukta court) ಖುಲಾಸೆಗೊಳಿಸಿ ಆದೇಶಿಸಿತ್ತು. ಬಳಿಕ ಲೋಕಾಯುಕ್ತ ಪೊಲೀಸರು ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು.

ಹೈಕೋರ್ಟ್ ಅಸಮಾಧಾನ:

ವಿಚಾರಣಾ ನ್ಯಾಯಾಲಯದ ವಿರುದ್ಧ ಹೈಕೋರ್ಟ್ ಅಸಮಾಧಾನ ಹೊರಹಾಕಿದೆ. ಸಾಕ್ಷಿಗಳಿದ್ದರೂ ಆರೋಪಿ ಅಧಿಕಾರಿಯನ್ನು ಖುಲಾಸೆ ಮಾಡಿದ್ದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಹೈಕೋರ್ಟ್ ತನ್ನ ಆದೇಶದಲ್ಲಿ ಕಟುವಾಗಿ ಆಕ್ಷೇಪಿಸಿದೆ. ಲಂಚ ಸ್ವೀಕರಿಸುವ ವೇಳೆಯೇ ಅಧಿಕಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಲಂಚ ಪಡೆದಿದ್ದ ಹಣವನ್ನು ಆರೋಪಿತನ ಜೇಬಿನಿಂದಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೇ, ಆರೋಪಿತ ಅಧಿಕಾರಿಯ ಕೈ ಮತ್ತು ಶರ್ಟ್ ಜೇಬಿನಲ್ಲಿ ಹಣಕ್ಕೆ ಸಿಂಪಡಿಸಿದ್ದ ರಾಸಾಯನಿಕ ಪತ್ತೆಯಾಗಿರುವುದು ಪರೀಕ್ಷೆ ವೇಳೆ ಖಚಿತವಾಗಿದೆ. ಲಂಚ ಸ್ವೀಕರಿಸಿರುವುದಕ್ಕೆ ಇಬ್ಬರು ಸಾಕ್ಷಿಗಳೂ ಲಭ್ಯವಿದ್ದಾರೆ. ಹೀಗಿದ್ದೂ ವಿಚಾರಣಾ ನ್ಯಾಯಾಲಯ ಆರೋಪಿತನನ್ನು ಖುಲಾಸೆಗೊಳಿಸಿರುವುದು ನಿಯಮಬಾಹಿರ ಎಂದಿದೆ.

ಇದನ್ನೂ ಓದಿ:ಹುಣಸೂರಲ್ಲಿ ಕೆರೆ ಏರಿ ಮೇಲೆ ಸೆಲ್ಫಿ ತೆಗೆಯಲು ಹೋಗಿ ಸ್ನೇಹಿತರಿಬ್ಬರು ನೀರುಪಾಲು: ಓರ್ವ ಪಾರು

For All Latest Updates

ABOUT THE AUTHOR

...view details