ಕರ್ನಾಟಕ

karnataka

By

Published : Jul 3, 2021, 11:58 PM IST

ETV Bharat / city

ತಟಸ್ಥವಾಗಿದ್ದ ಜೆಡಿಎಸ್​​ನ ಮುಂದಿನ 'ಆಟ' ಏನು?

ಸಿಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗದಿದ್ದರೂ ತಮ್ಮ ಪಕ್ಷದ ಅಭ್ಯರ್ಥಿಯನ್ನು ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ ಅ​ನ್ನು ಬೆಳೆಸುವ ಕನಸನ್ನು ಕಂಡಿದ್ದಾರೆ.

jds strategy for next election
ತಟಸ್ಥವಾಗಿದ್ದ ಜೆಡಿಎಸ್​​ನ ಮುಂದಿನ 'ಆಟ' ಏನು?

ಬೆಂಗಳೂರು :ರಾಜ್ಯದಲ್ಲಿ ಕೋವಿಡ್​​​ನಿಂದಾಗಿ ಇಷ್ಟು ದಿನ ತಟಸ್ಥವಾಗಿದ್ದ ಜೆಡಿಎಸ್ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಹೆಣೆಯುತ್ತಿದೆ. ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ನೀಡಿದ ಹೇಳಿಕೆ ಇದಕ್ಕೆ ಪುಷ್ಟಿ ನೀಡುವಂತಿದೆ.

ಕೋವಿಡ್ ಎರಡನೇ ಅಲೆಯಲ್ಲಿ ಸರ್ಕಾರ ಮಾಡಿದ ಹಲವು ಎಡವಟ್ಟುಗಳಿಂದ ಸಾಮಾನ್ಯ ಜನರು ಹೈರಾಣಾಗಿದ್ದು, ಬಿಜೆಪಿ ಸರ್ಕಾರದಲ್ಲಿ ನಾಯಕತ್ವದ ಪ್ರಶ್ನೆ, ಶಾಸಕರ ಅಸಮಾಧಾನದಿಂದ ಮೂಡಿರುವ ಒಡಕು. ಇನ್ನೊಂದೆಡೆ ಕಾಂಗ್ರೆಸ್ ನಲ್ಲಿ ನಾಯಕರ ಭಿನ್ನಾಭಿಪ್ರಾಯಗಳು ಹಾಗೂ ಸಿಎಂ ಕುರ್ಚಿ ಗೆ ಎದ್ದಿರುವ ಕೂಗು. ಇವೆಲ್ಲವೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವುದು ಮುಂದಿನ ದಿನಗಳಲ್ಲಿ ಪ್ಲಸ್ ಪಾಯಿಂಟ್ ಆಗುತ್ತವೆ ಎಂಬುದು ಜೆಡಿಎಸ್ ಲೆಕ್ಕಾಚಾರ.

ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಏಟಿಗೆ ಎದುರೇಟು ನೀಡುತ್ತಾ ಬಂದಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಲೆಕ್ಕಾಚಾರವೇ ಬೇರೆಯದೇ ಆಗಿದೆ. "ಈಗ ನಮ್ಮ ಆಟ ಪ್ರಾರಂಭಿಸುತ್ತೇವೆ. ಇನ್ನು ಮುಂದೆ ನಮ್ಮ ಆಟ ಹೇಗಿರುತ್ತದೆ ಎಂಬುದನ್ನು ನೋಡಲಿ " ಎಂದು ಸವಾಲು ಎಸೆದಿರುವ ಕುಮಾರಸ್ವಾಮಿ ಅವರ ಒಳಾರ್ಥ ಕುತೂಹಲ ಮೂಡಿಸಿದೆ.

ಲಾಕ್​ಡೌನ್ ಆದಾಗಿನಿಂದ ಬಿಡದಿ ಬಳಿಯಿರುವ ತಮ್ಮ ತೋಟದಲ್ಲಿ ಹೆಚ್ಚು ಸಮಯ ಇರುವ ಅವರು, ರೈತರು, ಬಡವರ ಸಮಸ್ಯೆಗಳನ್ನು ಮತ್ತಷ್ಟು ತಿಳಿದುಕೊಂಡಿದ್ದಾರೆ. ಹಾಗಾಗಿಯೇ ರೈತರು ಬದುಕಲು ಹೇಗೆ ಸಾಧ್ಯ? ಎಂಬುದನ್ನು ನನ್ನ ತೋಟದಲ್ಲಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದರು. ಜುಲೈ 15ರಿಂದ ನನ್ನ ಕಾರ್ಯಕ್ರಮ ಏನು? ಅನ್ನೋದನ್ನ ತಿಳಿಸುತ್ತೇನೆ ಎಂದಿದ್ದಾರೆ.

ಸದ್ದಿಲ್ಲದೆ ಪಕ್ಷ ಸಂಘಟನೆ : ಕೋವಿಡ್ ನಡುವೆಯೂ ಪಕ್ಷ ಸಂಘಟನೆ ಮಾಡುವ ಬಗ್ಗೆ ನಿರ್ಧರಿಸಿರುವ ಹೆಚ್​ಡಿಕೆ, ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಳಿ ಹಲವು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ನಿರ್ಧರಿಸಿರುವ ಅವರು, ಈಗಾಗಲೇ ಪಕ್ಷದ ಹಲವು ಘಟಕಗಳನ್ನು ವಿಸರ್ಜನೆ ಮಾಡಿದ್ದಾರೆ. ಆ ಘಟಕಗಳಿಗೆ ಹೊಸದಾಗಿ ನೇಮಕ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಅದಾಗಲೇ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕುಮಾರಸ್ವಾಮಿ ಅವರ ಟಾರ್ಗೆಟ್ ಇರುವುದು 2023ರ ವಿಧಾನಸಭೆ ಚುನಾವಣೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ತಮ್ಮದೇ ಆದ ಪಡೆಯನ್ನು ಸಜ್ಜುಗೊಳಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಪಂಚರತ್ನ ಪ್ಲಾನ್ : ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜನರ ಬಳಿ 'ಪಂಚರತ್ನ' ಯೋಜನೆ ಮುಂದಿಡಲು ನಿರ್ಧರಿಸಿರುವ ಹೆಚ್​ಡಿಕೆ, ಆರೋಗ್ಯ, ರೈತ, ವಸತಿ, ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮವೇ ಈ ಪಂಚರತ್ನ ಯೋಜನೆ. ಅದಕ್ಕೆ 'ಪಂಚಾಕ್ಷರಿ' ಎಂದು ಹೆಸರಿಡಲು ತೀರ್ಮಾನಿಸಿರುವ ಕುಮಾರಸ್ವಾಮಿ ಅವರು, ನಾವು ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ಒಂದೊಂದು ಕಾರ್ಯಕ್ರಮ ಕೊಡುತ್ತೇನೆ ಎಂದು ಈಗಾಗಲೇ ಹೇಳಿದ್ದಾರೆ.

ಸಿಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗದಿದ್ದರೂ ತಮ್ಮ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ. ಆ ಮೂಲಕ ಉತ್ತರ ಕರ್ನಾಟಕದಲ್ಲಿ ಜೆಡಿಎಸ್​ ಅ​ನ್ನು ಬೆಳೆಸುವ ಕನಸನ್ನು ಕಂಡಿದ್ದಾರೆ.

ಇದನ್ನೂ ಓದಿ: UNLOCK 3.0 ಮುಖ್ಯಾಂಶಗಳು: ಜುಲೈ 5 ರಿಂದ ರಾಜ್ಯದಲ್ಲಿ ಯಾವುದಕ್ಕೆಲ್ಲಾ ಅವಕಾಶ?

ಇದರ ಜೊತೆಗೆ ಪಕ್ಷ ಬಿಟ್ಟು ಹೋಗಿರುವ ಕೆಲವು ಮೂಲ ನಾಯಕರನ್ನು ಸಂಪರ್ಕಿಸಿರುವ ಕುಮಾರಸ್ವಾಮಿ ಅವರನ್ನು ಪಕ್ಷಕ್ಕೆ ಮತ್ತೆ ಆಹ್ವಾನಿಸಿದ್ದಾರೆ. ಇದು ಸಹ ಅವರ ಗೇಮ್ ಪ್ಲಾನ್​ನಲ್ಲಿ ಒಂದು.
ಒಟ್ಟಾರೆ, ಪ್ರಾದೇಶಿಕ ಪಕ್ಷ ಜೆಡಿಎಸ್ ಅನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಹೊಸ ಹೊಸ ತಂತ್ರಗಾರಿಕೆಯನ್ನು ಮಾಡಿರುವ ಹೆಚ್​​ಡಿಕೆ ಅದರಲ್ಲಿ ಯಶಸ್ವಿಯಾಗುವರೇ ಎಂಬುದು ಕಾದುನೋಡಬೇಕು.

ABOUT THE AUTHOR

...view details