ಬೆಂಗಳೂರು:ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅವರನ್ನು ಜೆಡಿಎಸ್ ಪಕ್ಷದವರು ಎಂದು ನೋಡದೆ, ಮೂರೂ ಪಕ್ಷಗಳು ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಜೆಡಿಎಸ್ ಹಿರಿಯ ಮುಖಂಡ ವೈಎಸ್ವಿ ದತ್ತ ಮನವಿ ಮಾಡಿದರು.
ಕಾಂಗ್ರೆಸ್ನಿಂದಲೂ ಸಭಾಪತಿ ಚುನಾವಣೆಗೆ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್, ಬಿಜೆಪಿ ಎನ್ನದೇ ಹೊರಟ್ಟಿಯನ್ನು ಎಲ್ಲರೂ ಬೆಂಬಲಿಸಬೇಕು. ಅವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದು ಬಿಂಬಿಸಬಾರದು. ಸತತ ಏಳು ಬಾರಿ ಶಿಕ್ಷಕರ ಕ್ಷೇತ್ರದಿಂದ ಮೇಲ್ಮನೆಗೆ ಬಂದಿದ್ದಾರೆ. ಅವರೊಬ್ಬ ಹಿರಿಯ ನಾಯಕರು. ಮೂರೂ ಪಕ್ಷಗಳು ನಮ್ಮ ಅಭ್ಯರ್ಥಿ ಎಂದೇ ಭಾವಿಸಿ ಮತ ಹಾಕಬೇಕು. ಇಲ್ಲಿ ಯಾರೂ ಪಕ್ಷ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ ಜೆಡಿಎಸ್ ನಿಲುವು ಸ್ಪಷ್ಟವಾಗಿದೆ. ಈ ಬಗ್ಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಈಗಾಗಲೇ ಹೇಳಿದ್ದಾರೆ. ನಾವು ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಿದ್ದೇವೆ ಅಷ್ಟೆ. ಕಾಯ್ದೆಯನ್ನು ಜಾರಿಗೆ ತಂದರೆ, ರೈತಾಪಿ ಜನರ ಬದುಕು ತುಂಬಾ ಕಷ್ಟವಾಗಲಿದೆ. ಮೊದಲು ಕಾಯ್ದೆಯ ಸಾಧಕ-ಬಾಧಕ ಯೋಚನೆ ಮಾಡಬೇಕು. ಹಠಕ್ಕೆ ಬಿದ್ದು ಕಾಯ್ದೆ ತರುವುದು ಬೇಡ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.