ಕರ್ನಾಟಕ

karnataka

By

Published : Jul 5, 2021, 4:10 PM IST

ETV Bharat / city

ಬಿಬಿಎಂಪಿ, ತಾಲೂಕು, ಜಿಲ್ಲಾ ಪಂಚಾಯತಿ ಚುನಾವಣೆಗೆ ಜೆಡಿಎಸ್ ತಯಾರಿ ಹೇಗಿದೆ?

ಬಿಬಿಎಂಪಿ ಚುನಾವಣೆಯಲ್ಲಿ ಅಧಿಕಾರ ಹಿಡಿಯಬೇಕು ಎಂಬ ಛಲದೊಂದಿಗೆ ಜೆಡಿಎಸ್​ ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪಕ್ಷ ಸಂಘಟಿಸುವುದರ ಜೊತೆಗೆ ಚುನಾವಣಾ ಸಿದ್ಧತೆ ನಡೆಸಲು ಜೆಡಿಎಸ್‌ ಮುಖಂಡ, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಸಮಿತಿ ರಚಿಸಿದೆ.

 JDS prepares for the upcoming BBMP, Taluk and District Panchayat elections
JDS prepares for the upcoming BBMP, Taluk and District Panchayat elections

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಪೂರಕವಾಗಿ ಪಕ್ಷ ಸಂಘಟಿಸಲು ಮತ್ತು ಚುನಾವಣಾ ಸಿದ್ಧತೆಗಳನ್ನು ಜೆಡಿಎಸ್ ಮಾಡಿಕೊಳ್ಳುತ್ತಿದೆ. ನಿಗದಿತ ಸಮಯಕ್ಕೆ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆ ಕೋವಿಡ್‌ನಿಂದಾಗಿ ಮುಂದೂಡಲಾಗಿದ್ದು, ಚುನಾವಣೆ ದಿನಾಂಕ ಇನ್ನು ಪ್ರಕಟವಾಗಿಲ್ಲ. ಆದರೂ, ಜೆಡಿಎಸ್ ಚುನಾವಣೆಗೆ ತಯಾರಿ ಮಾಡಿಕೊಳ್ಳುತ್ತಿದೆ.

ಬೆಂಗಳೂರಿನಲ್ಲಿ ಪಕ್ಷ ಸಂಘಟಿಸುವುದರ ಜೊತೆಗೆ ಚುನಾವಣಾ ಸಿದ್ಧತೆ ನಡೆಸಲು ಜೆಡಿಎಸ್‌ ಮುಖಂಡ, ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಸಮಿತಿ ರಚಿಸಿದೆ. ಈ ಸಮಿತಿ ಸಂಚಾಲಕರಾಗಿ ಜೆಡಿಎಸ್​ನ ಬೆಂಗಳೂರು ನಗರ ಘಟಕದ ಅಧ್ಯಕ್ಷ ಆರ್‌. ಪ್ರಕಾಶ್‌ ಅವರನ್ನು ನೇಮಕ ಮಾಡಲಾಗಿದೆ. ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್‌. ಮಂಜುನಾಥ್‌, ವಿಧಾನಪರಿಷತ್‌ ಸದಸ್ಯರಾದ ಕೆ.ವಿ. ನಾರಾಯಣಸ್ವಾಮಿ, ಎಚ್‌.ಎಂ. ರಮೇಶ್‌ ಗೌಡ, ಮಾಜಿ ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ಪಕ್ಷದ ರಾಜ್ಯ ‘ಕೋರ್‌’ ಸಮಿತಿ ಸದಸ್ಯ ವಿ. ನಾರಾಯಣಸ್ವಾಮಿ, ಪಕ್ಷದ ಬೆಂಗಳೂರು ಮಹಾನಗರ ಮಹಿಳಾ ಘಟಕದ ಅಧ್ಯಕ್ಷೆ ರುತ್‌ ಮನೋರಮಾ ಮತ್ತು ಬಿಬಿಎಂಪಿ ಮಾಜಿ ಸದಸ್ಯ ಇಮ್ರಾನ್‌ ಪಾಷ ಸದಸ್ಯರಾಗಿದ್ದಾರೆ.

ಅದೇ ರೀತಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲಿಚ್ಛಿಸಿರುವ ಮಹಿಳಾ ಸ್ಪರ್ಧಾಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸುವುದು. ನಮ್ಮ ಪಕ್ಷದ ಮಹಿಳಾ ಭಾಗವಹಿಸುವಿಕೆ ಮತ್ತು ನಾಯಕತ್ವವನ್ನು ವಾರ್ಡ್ ಮತ್ತು ಕ್ಷೇತ್ರ ಮಟ್ಟ ದಲ್ಲಿ ಬ‌ಲವರ್ಧನೆ ಗೊಳಿಸಲು ಬೆಂಗಳೂರು ಮಹಾನಗರ ಮಹಿಳಾ ಘಟಕದ ಅಧ್ಯಕ್ಷೆ ರುತ್‌ ಮನೋರಮಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.ಸದ್ಯದಲ್ಲಿಯೇ ಬರಲಿರುವ ಬಿಬಿಎಂಪಿ ಚುನಾವಣೆಯ ದೃಷ್ಟಿಯಿಂದ ಈ ಸಮಿತಿ ಈಗಾಗಲೇ ಎರಡು ಸಭೆಗಳನ್ನು ನಡೆಸಿದೆ. ಮಹಿಳಾ ಘಟಕದ ಸಭೆ ನಾಳೆ ರೂತ್ ಮನೋರಮಾ ಅಧ್ಯಕ್ಷತೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆಯಲಿದೆ.

ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸುವ ಮಹಿಳೆಯರು ತಮ್ಮ ಹೆಸರು ಮತ್ತು ವಿವರಣೆಯನ್ನು ನನಗೆ ಮತ್ತು ತಮ್ಮ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಿಗೆ ಸಲ್ಲಿಸಲು ಮಹಿಳಾ ಘಟಕದ ಅಧ್ಯಕ್ಷರು ಸೂಚಿಸಿದ್ದಾರೆ. ತಮ್ಮ ವಾರ್ಡ್ ಯಾವ ವರ್ಗಕ್ಕೆ ಸೇರುತ್ತದೆಯೆಂದು ತಿಳಿಯುವವರೆಗೂ ತಾವು ತಮ್ಮ ವಾರ್ಡಿನಲ್ಲಿ ಪಕ್ಷದ ಅಭಿವೃದ್ಧಿಗಾಗಿ ಸಲ್ಲಿಸಿರುವ ಸೇವೆಗಳು, ಸಮಾಜ ಸೇವೆಗಳು, ಸಾಧನೆಗಳು ಹಾಗೂ ಕಲ್ಯಾಣ ಅಭಿವೃದ್ಧಿ ಕಾರ್ಯಕ್ರಮಗಳು, ಕೋವಿಡ್ ಸಮಯದಲ್ಲಿ ನೆರವು ಕಾರ್ಯಕ್ರಮದ ಪಟ್ಟಿ ತಯಾರು ಮಾಡಿಕೊಂಡು ಸಭೆಯಲ್ಲಿ ಮಾಹಿತಿ ನೀಡಬೇಕು.

ನಾಳೆ ನಡೆಯಲಿರುವ ಈ ಸಭೆಗೆ ವಿಧಾನಸಭಾ ಕ್ಷೇತ್ರ ಮಟ್ಟದ 28 ಮಹಿಳಾ ಅಧ್ಯಕ್ಷರುಗಳು ಮತ್ತು ಪ್ರತಿ ವಾರ್ಡ್ ಮಟ್ಟದ ಮಹಿಳಾ ಅಧ್ಯಕ್ಷರುಗಳು ಹಾಗೂ ಮಹಿಳಾ ಮುಖಂಡರನ್ನು ಆಹ್ವಾನಿಸಲಾಗಿದೆ. ಪ್ರತಿ ವಾರ್ಡ್ ನಲ್ಲೂ ಪಕ್ಷ ಸಂಘಟನೆಯಾಗುವುದರ ಜೊತೆಗೆ ಬಿಬಿಎಂಪಿ ಚುನಾವಣೆಗೆ ಸಮರ್ಥ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಜೆಡಿಎಸ್ ನ ಲೆಕ್ಕಾಚಾರವಾಗಿದೆ.

ಇನ್ನು ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೂ ತಯಾರಿ ನಡೆಸುತ್ತಿರುವ ಜೆಡಿಎಸ್, ಯುವಕರನ್ನು ಸಂಘಟಿಸಲು ಮುಂದಾಗಿದೆ. ಈ ಸಂಬಂಧ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಹಾಗೂ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲು ಮುಂದಿದ್ದು, ಜಲೈ 7 ರಂದು ಈ ಸಂಬಂಧ ನಾಯಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ABOUT THE AUTHOR

...view details