ಬೆಂಗಳೂರು : 2020ನೇ ವರ್ಷ ಮುಗಿದು ಹೊಸ ವರ್ಷದ ಹೊಸ್ತಿಲಲ್ಲಿ ನಾವಿದ್ದೇವೆ. ಈ ವರ್ಷ ಅನೇಕ ರೀತಿಯ ರಾಜಕೀಯ ಬದಲಾವಣೆ, ಸಾವು, ನೋವುಗಳನ್ನು ಕಂಡಿದ್ದೇವೆ. ಎಲ್ಲದಕ್ಕಿಂತ ಮುಖ್ಯವಾಗಿ ಕೊರೊನಾ ಎಂಬ ಮಹಾಮಾರಿಗೆ ಕರ್ನಾಟಕ ಅಕ್ಷರಶಃ ನಲುಗಿಹೋಗಿದೆ.
ಇದರ ಮಧ್ಯೆ ರಾಜಕಾರಣದಲ್ಲಿ ಆದ ಬದಲಾವಣೆ ಕೂಡಾ ಪ್ರಮುಖವಾಗಿದ್ದು, ಜೆಡಿಎಸ್ ಪಕ್ಷಕ್ಕೆ 2020 ಭಾರಿ ಹೊಡೆತವನ್ನೇ ಕೊಟ್ಟಿದೆ. ಕೆಲವೇ ದಿನಗಳ ಹಿಂದೆ ವಿಧಾನ ಪರಿಷತ್ನ ಉಪಸಭಾಪತಿ ಎಸ್.ಎಲ್. ಧರ್ಮೇಗೌಡ ಅವರ ಆತ್ಮಹತ್ಯೆ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆ ಜೆಡಿಎಸ್ಗೆ ದೊಡ್ಡ ಆಘಾತ ತಂದಿದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು ಎನ್ನಬಹುದು.
ಪರಿಷತ್ನಲ್ಲಿ ಗಲಾಟೆ
ವಿಧಾನ ಪರಿಷತ್ನಲ್ಲಿ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿರುದ್ಧ ಬಿಜೆಪಿ ಅವಿಶ್ವಾಸ ತಂದ ಸಂದರ್ಭದಲ್ಲಿ ನಡೆದ ವಿದ್ಯಮಾನ ಕಪ್ಪಚುಕ್ಕೆಯಾಗಿದೆ.ಡಿಸೆಂಬರ್ 15ರಂದು ನಡೆದ ಒಂದು ದಿನದ ಕಲಾಪದಲ್ಲಿ ಸಭಾಪತಿ ಅವರನ್ನು ಸದನಕ್ಕೆ ಬರುವುದನ್ನೇ ತಡೆಯಲಾಯಿತು.
ಉಪಸಭಾಪತಿ ಧರ್ಮೇಗೌಡರನ್ನು ಬಲವಂತವಾಗಿ ಪೀಠದಲ್ಲಿ ಕೂರಿಸಲಾಯಿತು. ನಂತರ ಪ್ರತಿಪಕ್ಷದ ಸದಸ್ಯರು ಅವರನ್ನು ಎಳೆದು ಹಾಕಿದರು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ವಾದ, ತಳ್ಳಾಟ, ನೂಕಾಟ ನಡೆಯಿತು. ಈ ಘಟನೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು.
ಬಿಜೆಪಿ ಬಗ್ಗೆ ಮೃಧು ಧೋರಣೆ ತಾಳಿದ ಜೆಡಿಎಸ್
ಒಂದು ಕಾಲದಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಾಗಿದ್ದ ಜೆಡಿಎಸ್ ಬಿಜೆಪಿ ಪಕ್ಷದೊಂದಿಗೆ ಮೃದು ಧೋರಣೆ ಅನುಸರಿಸಿದ ಮಾತುಗಳು ಕೇಳಿ ಬಂದವು. ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗಳು ಮತ್ತು ಸ್ಥಳೀಯ ಕೃಷಿ ಉತ್ಪಾದನಾ ಮಾರುಕಟ್ಟೆ ಸಮಿತಿಗಳ ಅಧಿಕಾರವನ್ನು ಮೊಟಕುಗೊಳಿಸುವ ಮತ್ತು ಖಾಸಗಿ ವ್ಯಕ್ತಿಗಳಿಗೆ ಕೃಷಿ ವ್ಯಾಪಾರವನ್ನು ಪ್ರಾರಂಭಿಸಲು ಅನುವು ಮಾಡಿಕೊಡುವ ಎಪಿಎಂಸಿ ತಿದ್ದುಪಡಿ ಮಸೂದೆಯಂತಹ ವಿವಾದಾತ್ಮಕ ಕಾನೂನುಗಳನ್ನು ಸರ್ಕಾರ ಈ ವರ್ಷ ಅಂಗೀಕರಿಸಿತು. ಇದಕ್ಕೆ ಜೆಡಿಎಸ್ ಬೆಂಬಲ ನೀಡಿದ್ದು ಚರ್ಚೆಗೆ ಗ್ರಾಸವಾಯಿತು.
ಇದನ್ನೂ ಓದಿ:ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸೇರಿದಂತೆ 2020ರ ಪ್ರಮುಖ ಅಪರಾಧ ಪ್ರಕರಣಗಳ ಹಿನ್ನೋಟ
ವಿವಾದಾತ್ಮಕ ಗೋ ಹತ್ಯೆ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸುವಲ್ಲಿ ಸರ್ಕಾರ ಯಶಸ್ವಿಯಾಯಿತು. ಆದರೆ, ವಿಧಾನ ಪರಿಷತ್ನಲ್ಲಿ ಬಹುಮತವಿಲ್ಲದೆ ಇನ್ನೂ ಅಂಗೀಕಾರವಾಗಿಲ್ಲ. ಈ ಕಾಯ್ದೆಯನ್ನು ವಿರೋಧಿಸಿರುವುದಾಗಿ ಜೆಡಿಎಸ್ ಹೇಳಿದೆ.
ವಿಧಾನಪರಿಷತ್ನಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಪರವಾಗಿ ಜೆಡಿಎಸ್ ಮತ ಹಾಕಿದ್ದು, ಭಾರಿ ಅಚ್ಚರಿ ಹುಟ್ಟಿಸಿತ್ತು. ಈ ಮೊದಲು ಜೆಡಿಎಸ್, ಈ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರೈತ ವಿರೋಧವಾಗಿದೆ ಎಂದು ವಿರೋಧ ವ್ಯಕ್ತಪಡಿಸಿತ್ತು. ಆದರೆ, ಅಧಿವೇಶನದಲ್ಲಿ ಏಕಾಏಕಿ ಜೆಡಿಎಸ್ ಬೆಂಬಲಿಸಿದ್ದು, ರೈತ ಸಂಘಟನೆಗಳ ಕಣ್ಣು ಕೆಂಪಾಗಿಸಿತ್ತು.
ಇದೇ ವಿಚಾರವಾಗಿ ದಳಪತಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಇದರನ್ನ ಅರಿತ ಕುಮಾರಸ್ವಾಮಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿದ್ದಕ್ಕೆ ಸ್ಪಷ್ಟನೆ ಕೊಟ್ಟಿದ್ದರು. ಜೆಡಿಎಸ್ ನಾಯಕರ ವಿರುದ್ಧ ರೈತ ಸಂಘದ ಮುಂಖಡರು ಹರಿಹಾಯ್ದಿದ್ದು, ಅದಕ್ಕೆ ಕುಮಾರಸ್ವಾಮಿ ತಿರುಗೇಟು ನೀಡಿದ್ದು ಸುದ್ದಿಯಾಯಿತು.
ಜೆಡಿಎಸ್ ವಿಲೀನದ ಸದ್ದು
ಜೆಡಿಎಸ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನ ಮಾಡಲಾಗುತ್ತದೆ ಎಂಬ ಸುದ್ದಿ ವರ್ಷದ ಕೊನೆಗೆ ಸಂಚಲನಕ್ಕೆ ಕಾರಣವಾಗಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ನಡವಳಿಕೆಗಳು ಇಂಥಹ ಅನುಮಾನಗಳಿಗೆ ಕಾರಣವಾಗಿದ್ದವು. ಮೌನವಾಗಿದ್ದ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ವಿಲೀನದ ಸುದ್ದಿಗೆ ತೆರೆ ಎಳೆದು, ಸಂಕ್ರಾಂತಿ ನಂತರ ಜೆಡಿಎಸ್ನಲ್ಲಿ ಭಾರೀ ಬದಲಾವಣೆಯಾಗುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.
ಶಿರಾ ಹಾಗೂ ರಾಜರಾಜೇಶ್ವರಿ ನಗರ ಕ್ಷೇತ್ರಗಳ ಉಪಚುನಾವಣೆಯಲ್ಲಿನ ಸೋಲು ಜೆಡಿಎಸ್ಗೆ ಮತ್ತೊಂದು ಪೆಟ್ಟು ನೀಡಿತ್ತು. ಜೊತೆಗೆ ಹಲವು ಮುಖಂಡರು ಪಕ್ಷ ತೊರೆದಿದ್ದು ಜೆಡಿಎಸ್ ಗೆ ನುಂಗಲಾರದ ತುತ್ತಾಯಿತು. ಕೋವಿಡ್ ಸಂದರ್ಭದಲ್ಲಿ ಜೆಡಿಎಸ್ನ ಯುವ ಘಟಕದ ರಾಜ್ಯಾಧ್ಯಕ್ಷ, ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರ ವಿವಾಹ ಸಹ ದೊಡ್ಡ ಸುದ್ದಿಯಾಯಿತು.