ಕರ್ನಾಟಕ

karnataka

By

Published : Mar 9, 2022, 6:11 PM IST

ETV Bharat / city

ಹೆಸರಿಗೆ ಬಯಲು ಬಹಿರ್ದೆಸೆ ಮುಕ್ತ ಗ್ರಾಮ, ಅಲ್ಲಿ ಶೌಚಾಲಯಗಳೇ ಇಲ್ಲ.. ಸದನದ ಗಮನ ಸೆಳೆದ ಶಾಸಕ ಕಾಶೆಂಪುರ್

ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಯೋಜನೆಯ ಹುಳುಕಿನ ಬಗ್ಗೆ ಜೆಡಿಎಸ್​ ಶಾಸಕ ಬಂಡೆಪ್ಪ ಕಾಶೆಂಪುರ್​ ಸದನದ ಗಮನ ಸೆಳೆದರು. ಹಳ್ಳಿಗಳಲ್ಲಿ ಹೆಸರಿಗೆ ಮಾತ್ರ ಬಹಿರ್ದೆಸೆ ಮುಕ್ತ ಗ್ರಾಮ ಎಂದು ಬೋರ್ಡ್​ ಹಾಕಲಾಗುತ್ತದೆ. ಆದರೆ, ಅಲ್ಲಿ ಶೌಚಾಲಯಗಳೇ ಇರುವುದಿಲ್ಲ ಎಂದು ಆರೋಪಿಸಿದರು.

bandeppa-kashempura
ಬಂಡೆಪ್ಪ ಕಾಶೆಂಪುರ್

ಬೆಂಗಳೂರು:ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ, ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಕಾಶೆಂಪುರ್ ಅವರು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಘೋಷಣೆಗೆ ಸಂಬಂಧಿಸಿದಂತೆ ಸದನದ ಗಮನ ಸೆಳೆದರು.

ವಿಧಾನಸೌಧದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳ ಬಗ್ಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳ ಹಿಂದೆ ನಾನು ಜನಸ್ಪಂದನಾ ಕಾರ್ಯಕ್ರಮದ ನಿಮಿತ್ತವಾಗಿ ನನ್ನ ಕ್ಷೇತ್ರ ವ್ಯಾಪ್ತಿಯ ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿದ್ದೆ. ಆ ಗ್ರಾಮದಲ್ಲಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವೆಂದು ಬೋರ್ಡ್ ಹಾಕಲಾಗಿತ್ತು. ವಾಸ್ತವವಾಗಿ ನೋಡಿದಾಗ ಆ ಗ್ರಾಮದಲ್ಲಿ ಕೇವಲ 30 ರಿಂದ 40 ಪ್ರತಿಶತದಷ್ಟು ಮಾತ್ರ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಬೋರ್ಡ್​ ಇದೆ, ಶೌಚಾಲಯಗಳಿಲ್ಲ:ಮೀನಕೇರಾ ಗ್ರಾಮದಲ್ಲಿನ ಶೌಚಾಲಯಗಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಗ್ರಾಮದಲ್ಲಿ 918 ಕುಟುಂಬಗಳ ಪೈಕಿ 858 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ ಎಂದು ಸರ್ಕಾರ ಉತ್ತರಿಸಿದೆ. ಆದರೆ, ವಾಸ್ತವವಾಗಿ ಅಲ್ಲಿ ಅಷ್ಟು ಪ್ರಮಾಣದ ಶೌಚಾಲಯಗಳಿಲ್ಲ. ಅಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳೆಂದು ಬೋರ್ಡ್ ಹಾಕಲಾಗುತ್ತದೆ. ಆದರೆ ಎಷ್ಟೋ ಕಡೆಗಳಲ್ಲಿ ಶೌಚಾಲಯಗಳಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಸದನದ ಗಮನ ಸೆಳೆದ ಶಾಸಕ ಬಂಡೆಪ್ಪ ಕಾಶೆಂಪುರ್

ದಾಖಲಾತಿಗಾಗಿ ಶೌಚಾಲಯ ನಿರ್ಮಿಸಿ ಫೋಟೋ ತೆಗೆದುಕೊಂಡು ಹಣ ಒದಗಿಸಿಕೊಡುವ ಕೆಲಸವನ್ನು ಸರ್ಕಾರದಿಂದ ಮಾಡಲಾಗುತ್ತಿದೆ. ಆದರೆ ನಿರ್ಮಾಣಗೊಂಡ ಶೌಚಾಲಯಗಳು ಸದುಪಯೋಗವಾಗುತ್ತಿಲ್ಲ. ಈ ರೀತಿಯ ಸಮಸ್ಯೆಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿವೆ. ಸರ್ಕಾರವೇ ಶೌಚಾಲಯಗಳನ್ನು ನಿರ್ಮಿಸಿಕೊಡುವ ಕೆಲಸ ಮಾಡಬೇಕೆಂದು ಶಾಸಕ ಬಂಡೆಪ್ಪ ಕಾಶೆಂಪುರ್ ಒತ್ತಾಯಿಸಿದರು.

ಸತ್ಯವಾದರೆ ಕಠಿಣ ಕ್ರಮ:ಶಾಸಕರ ಪ್ರಶ್ನೆಗೆ ಉತ್ತರಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಕಾಶೆಂಪುರ್ ಅವರೊಂದಿಗೆ ನಾನು ಮೀನಕೇರಾ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಶಾಸಕರು ಹೇಳಿರುವುದು ಸತ್ಯವಾಗಿದ್ದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ. ಇದು ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ಹೇಳಿದರು.

ಓದಿ:ನಮ್ಮ ನೀರು ನಾವು ಬಳಸಿಕೊಳ್ಳೋಕೆ‌ ದೊಣ್ಣೆ ನಾಯಕನ ಅಪ್ಪಣೆ ಕೇಳಬೇಕಾ?: ಸಿದ್ದರಾಮಯ್ಯ

ABOUT THE AUTHOR

...view details