ಬೆಂಗಳೂರು: ವಕೀಲರ ಬಹುದಿನಗಳ ಬೇಡಿಕೆಯಂತೆ ರಾಜ್ಯ ಸರ್ಕಾರ ಕಡೆಗೂ ರಾಜ್ಯದ ಎಲ್ಲಾ ವಕೀಲರಿಗೆ ವಿಮೆ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ರಾಜ್ಯದ ವಕೀಲರಿಗೆ ವಿಮೆ ಸೌಲಭ್ಯ ನೀಡಲು ವಯೋಮಿತಿ ಅನುಸಾರ ವಕೀಲರ ಪಟ್ಟಿಯನ್ನು ಸಿದ್ಧಪಡಿಸಿ ಕೊಡುವಂತೆ ರಾಜ್ಯ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಿಗೆ ಲಿಖಿತ ಮನವಿ ಕಳುಹಿಸಿದ್ದಾರೆ.
ಕೋವಿಡ್ ನಡುವೆಯೂ ಆರೋಗ್ಯ ಹಾಗೂ ಜೀವ ಲೆಕ್ಕಿಸದೆ ಕೆಲಸ ಮಾಡುತ್ತಿದ್ದ ವಕೀಲರಿಗೆ ದೆಹಲಿ ಮಾದರಿಯಲ್ಲಿ ವಿಮಾ ಸೌಲಭ್ಯ ಕಲ್ಪಿಸಬೇಕು ಎಂದು ಬೆಂಗಳೂರು ವಕೀಲರ ಸಂಘವೂ ಸೇರಿದಂತೆ ರಾಜ್ಯದ ಹಲವು ವಕೀಲರ ಸಂಘಟನೆಗಳು ಸರ್ಕಾರಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದ್ದವು. ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎ.ಪಿ ರಂಗನಾಥ್ ಹಲವು ಬಾರಿ ಗೃಹ ಮತ್ತು ಕಾನೂನು ಇಲಾಖೆಯೊಂದಿಗೆ ಚರ್ಚಿಸಿದ್ದರಲ್ಲದೇ 2020ರ ಮಾರ್ಚ್ ನಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೂ ಪತ್ರ ಬರೆದಿದ್ದರು. ಈ ಕುರಿತು ಪಿಐಎಲ್ ದಾಖಲಿಸಿಕೊಂಡಿದ್ದ ಹೈಕೋರ್ಟ್, ಎಲ್ಲ ವಕೀಲರಿಗೆ ವಿಮೆ ನೀಡುವ ಕುರಿತು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.