ಬೆಂಗಳೂರು :ದೇಶದಲ್ಲಿ ಮೊಟ್ಟಮೊದಲಿಗೆ ಕರ್ನಾಟಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಶಕ್ತಿ ತುಂಬುವ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಪ್ರಕಟಿಸಿದ್ದು, ಇದರಿಂದ ಅಮೆರಿಕ ಕಂಪನಿಗಳ ಹೂಡಿಕೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದರು.
ಕೇರಳದಲ್ಲಿನ ಚುನಾವಣಾ ಪ್ರಚಾರದ ನಡುವೆಯೇ ಭಾರತ-ಅಮೆರಿಕ ಕಾರ್ಯತಂತ್ರದ ಸಹಭಾಗಿತ್ವ ವೇದಿಕೆ ವರ್ಚುವಲ್ ಸಭೆ ಹಮ್ಮಿಕೊಂಡಿತ್ತು. ಈ ವೇಳೆ ತಿರುವನಂತಪುರಂನಲ್ಲಿದ್ದ ಡಿಸಿಎಂ ಅಶ್ವತ್ಥ್ ನಾರಾಯಣ ವರ್ಚುಯಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ದೇಶದಲ್ಲಿ ಮೊಟ್ಟಮೊದಲಿಗೆ ಕರ್ನಾಟಕ ಸಂಶೋಧನೆ ಮತ್ತು ಅಭಿವೃದ್ಧಿಗೆ ಶಕ್ತಿ ತುಂಬುವ ಎಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಪ್ರಕಟಿಸಿದ್ದು, ಇದರಿಂದ ಅಮೆರಿಕ ಕಂಪನಿಗಳ ಹೂಡಿಕೆಗೆ ಹೆಚ್ಚು ಅನುಕೂಲವಾಗಲಿದೆ. ಈ ನೀತಿಯು ಕೈಗಾರಿಕಾಭಿವೃದ್ಧಿಗೆ ಹೆಚ್ಚು ಪೂರಕವಾಗಲಿದೆ ಹಾಗೂ ಅತ್ಯುತ್ತಮ ಮಾನವ ಸಂಪನ್ಮೂಲ ಸೃಷ್ಟಿಗೂ ಇದು ಸಹಾಯಕವಾಗುತ್ತದೆ ಎಂದು ಹೇಳಿದರು.
ಉತ್ಕೃಷ್ಟ ಮಾನವ ಸಂಪನ್ಮೂಲ :ಕೈಗಾರಿಕೆ ಮತ್ತು ಹೂಡಿಕೆಗೆ ಪೂರಕವಾದ ರಾಜ್ಯ ಕರ್ನಾಟಕ. ಹೊಸ ಉದ್ಯಮಗಳನ್ನು ಸ್ಥಾಪಿಸಲು ಸೂಕ್ತವಾದ ತಾಣ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ರಾಜ್ಯದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ತಾಂತ್ರಿಕ ಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಂತಹ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ, ಉತ್ಕೃಷ್ಟ ಮಾನವ ಸಂಪನ್ಮೂಲಕ್ಕೂ ರಾಜ್ಯದಲ್ಲಿ ಕೊರತೆ ಇಲ್ಲ.
ಇನ್ನು, ಆವಿಷ್ಕಾರದಲ್ಲೂ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ನೀತಿ ಆಯೋಗದ ಆವಿಷ್ಕಾರ ಸೂಚ್ಯಂಕದಲ್ಲಿ ರಾಜ್ಯವು 2019, 2020 ಕ್ರಮವಾಗಿ ಮೊದಲ ಸ್ಥಾನದಲ್ಲೇ ಇದೆ. ಅದೇ ರೀತಿ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ನಿರ್ವಹಣೆ, ಅನಿಮೇಷನ್, ವಿಷ್ಯುಯೆಲ್ ಎಫೆಕ್ಟ್ಸ್, ಗೇಮ್ಸ್ ಮತ್ತು ಕಾಮಿಕ್ಸ್ ಕ್ಷೇತ್ರದಲ್ಲೂ ರಾಜ್ಯ ದಾಪುಗಾಲಿಡುತ್ತಿದೆ ಎಂದು ಡಿಸಿಎಂ ಹೇಳಿದರು.
ಕರ್ನಾಟಕ ಹೂಡಿಕೆಗೆ ಸೂಕ್ತ ತಾಣ :ಕೋವಿಡ್ ನಂತರದ ದಿನಗಳಲ್ಲಿ ಕೈಗಾರಿಕೆ, ಹೂಡಿಕೆ, ಆವಿಷ್ಕಾರ ಮುಂತಾದ ಕ್ಷೇತ್ರಗಳಲ್ಲಿ ಪುಟಿದೆದ್ದಿರುವ ಭಾರತವು, ಇಡೀ ಜಗತ್ತಿನಲ್ಲಿಯೇ ಸಹಜಸ್ಥಿತಿಗೆ ಮರಳಿದ ಮೊದಲ ದೇಶವಾಗಿದೆ. ಹಾಗೆಯೇ ಕರ್ನಾಟಕವು ಹೂಡಿಕೆಗೆ ಅತ್ಯಂತ ಸೂಕ್ತ ತಾಣ. ಕೋವಿಡೋತ್ತರ ಕಾಲದಲ್ಲಿ ಭಾರತ ಮತ್ತು ಅಮೆರಿಕಕ್ಕೆ ವಿಫುಲ ಅವಕಾಶಗಳಿವೆ.
ಅವೆಲ್ಲವನ್ನೂ ಸದುಪಯೋಗ ಮಾಡಿಕೊಳ್ಳೋಣ. ಅನೇಕ ಕ್ಷೇತ್ರಗಳಲ್ಲಿ ಭಾರತ-ಅಮೆರಿಕ ದೇಶಗಳು ಜಾಗತಿಕ ಶಕ್ತಿಗಳಾಗಿ ಹೊರಹೊಮ್ಮಿವೆ. ರಕ್ಷಣೆ, ವಿಜ್ಞಾನ-ತಂತ್ರಜ್ಞಾನ, ವೈದ್ಯಕೀಯ, ಮಾನವ ಸಂಪನ್ಮೂಲ, ಬಾಹ್ಯಾಕಾಶ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳು ಬಹಳ ನಿಕಟವಾಗಿ ಕೆಲಸ ಮಾಡುತ್ತಿವೆ. ಈ ಕಾರಣಕ್ಕೆ 2019ನೇ ಸಾಲಿನಲ್ಲಿ ಎರಡೂ ದೇಶಗಳ ನಡುವೆ ಸರಕು ಮತ್ತು ಸೇವೆಗಳಲ್ಲಿ ಒಟ್ಟಾರೆ ದ್ವಿಪಕ್ಷೀಯ ವ್ಯಾಪಾರವು 149 ಬಿಲಿಯನ್ ಮೀರಿದೆ.
ಇದಕ್ಕೆ ಪೂರಕವಾಗಿ ಹೇಳುವುದಾದರೆ, ಭಾರತ-ಅಮೆರಿಕ ಪಾಲುದಾರಿಕೆಯಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದಾಗಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಬೆಳವಣಿಗೆಗೆ ರಾಜ್ಯವು ಅನನ್ಯ ಕೊಡುಗೆ ನೀಡಿದೆ. 220 ಬಿಲಿಯನ್ನಷ್ಟು ಒಟ್ಟು ದೇಶೀಯ ಉತ್ಪನ್ನ (ಜಿಎಸ್ಡಿಪಿ) ಹೊಂದಿರುವ ಕರ್ನಾಟಕವು, ದೇಶದ ಅತ್ಯಂತ ಶ್ರೀಮಂತ ರಾಜ್ಯಗಳಲ್ಲಿ ಒಂದು. ಮಾಹಿತಿ-ಜೈವಿಕ ತಂತ್ರಜ್ಞಾನ, ಆರೋಗ್ಯ, ಆವಿಷ್ಕಾರ, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣ, ಏರೋಸ್ಪೇಸ್ ಮುಂತಾದ ಕ್ಷೇತ್ರಗಳಲ್ಲಿಯೂ ರಾಜ್ಯವು ಮುಂಚೂಣಿಯಲ್ಲಿದೆ.
ವರ್ಚುಯಲ್ ಸಭೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಜೊತೆಗೆ ಭಾರತದಲ್ಲಿರುವ ಸ್ಯಾನ್ಫ್ರಾನ್ಸಿಸ್ಕೋ ರಾಜ್ಯದ ಕಾನ್ಸುಲ್ ಜನರಲ್ ಡಾ.ಟಿ ವಿ ನಾಗೇಂದ್ರ ಪ್ರಸಾದ್, ಉಪ ಕಾನ್ಸುಲ್ ಜನರಲ್ ರಾಜೇಶ್ ನಾಯಕ್, ಅಮೆರಿಕ-ಭಾರತ ಕಾರ್ಯತಂತ್ರ ವೇದಿಕೆಯ ಅಧ್ಯಕ್ಷ ಜಾನ್ ಚಾಂಬರ್ಸ್, ವೆಸ್ಟ್ ಕೋಸ್ಟ್ ವಿಭಾಗದ ಮುಖ್ಯಸ್ಥರಾದ ದೀಪ್ತಿ ದೇಸಾಯಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ ಪಾಲ್ಗೊಂಡಿದ್ದರು.
ಓದಿ:ಬಿಎಸ್ವೈ, ಕಟೀಲ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ ಮಂಗಳಾ ಅಂಗಡಿ: ಸಿಡಿ ಲೇಡಿ ಬಗ್ಗೆ ಸಿಎಂ ಹೇಳಿದ್ದೇನು!?