ಕರ್ನಾಟಕ

karnataka

By

Published : Mar 28, 2022, 6:55 PM IST

ETV Bharat / city

ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕೆ ಏಕರೂಪ ದರಪಟ್ಟಿ ಜಾರಿ : ಸಚಿವ ಸಿ.ಸಿ ಪಾಟೀಲ್

2022-23ನೇ ಸಾಲಿನ ಲೋಕೋಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವ ಸಿ.ಸಿ ಪಾಟೀಲ್, ವಿವಿಧ ಇಂಜಿನಿಯರ್ ವಿಭಾಗಗಳಲ್ಲಿ ಒಂದೊಂದು ರೀತಿಯ ದರ ಪಟ್ಟಿ ಇತ್ತು. ಹೀಗಾಗಿ, ರಾಜ್ಯದಲ್ಲಿ 32 ದರಪಟ್ಟಿಗಳಿದ್ದವು. ಎಲ್ಲ ಇಂಜಿನಿಯರಿಂಗ್ ವಿಭಾಗದ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ದರ ಪಟ್ಟಿಗೆ ಬದಲಾಗಿ ಏಕರೂಪ ದರಪಟ್ಟಿಯನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು..

Minister CC Patil
ಸಚಿವ ಸಿ.ಸಿ ಪಾಟೀಲ್

ಬೆಂಗಳೂರು :ಕಟ್ಟಡ ಮತ್ತು ರಸ್ತೆ ನಿರ್ಮಾಣಕ್ಕೆ ರಾಜ್ಯದಲ್ಲಿ ಏಕರೂಪ ದರಪಟ್ಟಿ ರೂಪಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು. 2022-23ನೇ ಸಾಲಿನ ಲೋಕೋಪಯೋಗಿ ಇಲಾಖೆ ಅನುದಾನ ಬೇಡಿಕೆಗಳ ಮೇಲೆ ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, ವಿವಿಧ ಇಂಜಿನಿಯರ್ ವಿಭಾಗಗಳಲ್ಲಿ ಒಂದೊಂದು ರೀತಿಯ ದರ ಪಟ್ಟಿ ಇತ್ತು. ಹೀಗಾಗಿ, ರಾಜ್ಯದಲ್ಲಿ 32 ದರಪಟ್ಟಿಗಳಿದ್ದವು. ಎಲ್ಲ ಇಂಜಿನಿಯರಿಂಗ್ ವಿಭಾಗದ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ದರ ಪಟ್ಟಿಗೆ ಬದಲಾಗಿ ಏಕರೂಪ ದರಪಟ್ಟಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಹಣವು ಉಳಿತಾಯವಾಗಲಿದೆ ಎಂದರು.

ಸಚಿವ ಸಿ.ಸಿ ಪಾಟೀಲ್

2018-19ರಲ್ಲಿ ಆಗಿರುವ ಹೊರೆ ತಗ್ಗಿಸುವ ಉದ್ದೇಶದಿಂದ 'ಅಪೆಂಡಿಕ್ಸ್-ಇ'ನಲ್ಲಿ ಅನುದಾನ ಕೊಡಲು ಸಾಧ್ಯವಾಗಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಮುಖ್ಯಮಂತ್ರಿಗಳ ಜತೆ 'ಅಪೆಂಡಿಕ್ಸ್-ಇ'ನಲ್ಲಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ 600 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗುವುದು. ಮಲೆನಾಡು ಭಾಗದಲ್ಲಿ ಸಣ್ಣ ಸಣ್ಣ ಹಳ್ಳ ತೊರೆಗಳಿಗೆ ಕಾಲು ಸಂಕ ಅಥವಾ ಗ್ರಾಮ ಬಂಧು ಸೇತುವೆ ನಿರ್ಮಾಣಕ್ಕೆ 200 ಕೋಟಿ ರೂ. ಒದಗಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಉತ್ತಮ ಗುಣಮಟ್ಟದ ರಸ್ತೆ ಜಾಲ ನಿರ್ಮಾಣ :ರಾಜ್ಯದ ಪ್ರಮುಖ ನಗರಗಳಿಗೆ ವರ್ತುಲ ರಸ್ತೆ ನಿರ್ಮಾಣ ಮಾಡಲಾಗುವುದು. ಉತ್ತಮ ಗುಣಮಟ್ಟದ ರಸ್ತೆ ಜಾಲ ನಿರ್ಮಾಣಕ್ಕೆ ಸರ್ಕಾರ ಬದ್ದವಾಗಿದೆ. ರಾಜ್ಯದಲ್ಲಿ 91,120 ಕಿ.ಮೀ ರಸ್ತೆ ಜಾಲವಿದ್ದು, 7 ಸಾವಿರ ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಕಾಮಗಾರಿಗಳು ವಿವಿಧ ಹಂತದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ವಲಯಕ್ಕೆ ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ಒದಗಿಸಲಾಗಿದೆ.

ಟೆಂಡರ್ ಕರೆಯುವಾಗ ನಿಗದಿತ ದರಕ್ಕಿಂತ ಕಡಿಮೆ ನಮೂದಿಸುವ ಗುತ್ತಿಗೆಗಾರರ ಕಾಮಗಾರಿ ಮೇಲೆ ಹೆಚ್ಚಿನ ನಿಗಾ ಇಡಲಾಗುವುದು. ಕಡಿಮೆ ಮೊತ್ತ ನಮೂದಿಸುವುದನ್ನು ತಡೆಯಲು ಆಗದು ಎಂದು ಹೇಳಿದರು. ಇನ್ನು ಮುಂದೆ ರಾಜ್ಯದಲ್ಲಿ ಅತಿಥಿಗೃಹವನ್ನು ಅವಶ್ಯಕತೆ ಇರುವ ಕಡೆ ಮಾತ್ರ ಮಾಡಲಾಗುವುದು ಎಂದರು.‌

ಅನುದಾನ ಹಂಚಿಕೆ ತಾರತಮ್ಯ ಆಗಿಲ್ಲ : ಅನುದಾನ ಹಂಚಿಕೆ ತಾರತಮ್ಯದ ಬಗ್ಗೆ ಉತ್ತರಿಸಿದ ಸಚಿವರು, 2014ರಿಂದ 2018ರವರೆಗೆ ಕಾಂಗ್ರೆಸ್ ಶಾಸಕರಿಗೆ ಸರಾಸರಿ 156 ಕೋಟಿ ರೂ., ಜೆಡಿಎಸ್ ಶಾಸಕರಿಗೆ ಸರಾಸರಿ 148 ಕೋಟಿ ರೂ. ಹಾಗೂ ಬಿಜೆಪಿ ಶಾಸಕರಿಗೆ 122 ಕೋಟಿ ರೂ. ಅನುದಾನ ಲೋಕೋಪಯೋಗಿ ಇಲಾಖೆಯಲ್ಲಿ ದೊರೆತಿದೆ. ನಮ್ಮ ಸರ್ಕಾರ ಬಂದ ಮೇಲೆ ಕಾಂಗ್ರೆಸ್ ಶಾಸಕರಿಗೆ 19 ಕೋಟಿ ರೂ, ಜೆಡಿಎಸ್ ಶಾಸಕರಿಗೆ 21 ಹಾಗೂ ಬಿಜೆಪಿ ಶಾಸಕರಿಗೆ 42 ಕೋಟಿ ರೂ. ಸರಾಸರಿ ಅನುದಾನ ದೊರೆತಿದೆ. ಎಸ್‍ಇಪಿ ಮತ್ತು ಪಿಎಸ್‍ಪಿ ಅನುದಾನ ಹಂಚಿಕೆಯಲ್ಲಿ ತಾರತಮ್ಯವಾಗಿಲ್ಲ ಎಂದರು.

2019-20ನೇ ಸಾಲಿನಲ್ಲಿ ಉಂಟಾದ ಪ್ರವಾಹದಲ್ಲಿ 1814 ರಸ್ತೆ, ಸೇತುವೆ, ಪುನರ್​​ ನಿರ್ಮಾಣಕ್ಕೆ 497 ಕೋಟಿ ರೂ., ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದ ಹಾಳಾಗಿರುವ 1604 ರಸ್ತೆ ಸೇತುವೆ ನಿರ್ಮಾಣ ಕಾಮಗಾರಿಯನ್ನು 679 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದು ಅಂಕಿ ಅಂಶಗಳ ಸಹಿತ ಉತ್ತರ ನೀಡಿದ ಸಚಿವರು, ಮುಂದುವರೆದ ಕಾಮಗಾರಿಗಳಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ವೇಗ ಹೆಚ್ಚಿಸುವುದಾಗಿ ಭರವಸೆ ನೀಡಿದರು.

ಧ್ವನಿ ಮತದ ಮೂಲಕ ಒಪ್ಪಿಗೆ:ಸದನಕ್ಕೆ ಉತ್ತರ ನೀಡಿದ ನಂತರ 2022-23ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸಂದಾಯವಾಗುವ ವೆಚ್ಚವನ್ನು ಭರಿಸಲು ಅನುಮತಿ ನೀಡಬೇಕೆಂದು ಸಚಿವರು ಕೋರಿದರು. ಆಗ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಲೋಕೋಪಯೋಗಿ ಇಲಾಖೆಯ ಅನುದಾನ ಬೇಡಿಕೆಯನ್ನು ಮತಕ್ಕೆ ಹಾಕಿದಾಗ ಧ್ವನಿ ಮತದ ಮೂಲಕ ಒಪ್ಪಿಗೆ ದೊರೆಯಿತು.

ಧರಣಿಗೆ ಮುಂದಾದ ಕಾಂಗ್ರೆಸ್ ಶಾಸಕರು :ಈ ಸಂದರ್ಭದಲ್ಲಿ ಶಾಸಕರಾದ ವೆಂಕಟರಾಮಯ್ಯ ಹಾಗೂ ಶಿವಣ್ಣ ಮಾತನಾಡಲು ಅವಕಾಶ ಕೊಡಲಿಲ್ಲವೆಂದು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗಿಳಿದು ಧರಣಿಗೆ ಮುಂದಾದರು. ನಂತರ ಅವಕಾಶ ಕೊಡಲಾಗುವುದು ಎಂದು ಸ್ಪೀಕರ್ ಹೇಳಿದಾಗ, ಶಾಸಕರು ತಮ್ಮ ಸ್ವಸ್ಥಾನಗಳಿಗೆ ಮರಳಿದರು.

ಇದನ್ನೂ ಓದಿ:'ಮನೆ ಮನೆಗೆ ಗಂಗೆ 'ಎಂಬ ಕಾರ್ಯಕ್ರಮದಡಿ 97.91 ಲಕ್ಷ ನಲ್ಲಿ ಸಂಪರ್ಕ : ಸಚಿವ ಕೆ.ಎಸ್. ಈಶ್ವರಪ್ಪ

For All Latest Updates

TAGGED:

ABOUT THE AUTHOR

...view details