ಕರ್ನಾಟಕ

karnataka

ETV Bharat / city

ಅಕ್ರಮ ಗಣಿಗಾರಿಕೆ: ಸೀಮಂತ್ ಕುಮಾರ್ ಸಿಂಗ್ ವಿರುದ್ಧದ ಸಿಬಿಐ ತನಿಖಾ ವರದಿ ಕೇಳಿದ ಹೈಕೋರ್ಟ್‌

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಎಸಿಬಿ ಎಡಿಜಿಪಿ ಸೀಮಂತ್​ ಕುಮಾರ್ ಸಿಂಗ್ ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿ ತನಿಖೆ ನಡೆಸಿದೆ. ಈ ಬಗೆಗಿನ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

By

Published : Jul 8, 2022, 7:19 AM IST

High Court
High Court

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ವಿರುದ್ಧ ಭೂವ್ಯಾಜ್ಯ ಲಂಚ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಕಟುವಾಗಿ ಟೀಕೆ ಮಾಡಿದ್ದ ಹೈಕೋರ್ಟ್, ಈಗ ಎಸಿಬಿ ಎಡಿಜಿಪಿಯಾಗಿರುವ ಸೀಮಂತ್ ಕುಮಾರ್ ಸಿಂಗ್ ಅವರು ಈ ಹಿಂದೆ ಬಳ್ಳಾರಿಯಲ್ಲಿ ಎಸ್​ಪಿಯಾಗಿದ್ದಾಗ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ ತನಿಖಾ ವರದಿ ಸಲ್ಲಿಸುವಂತೆ ಎಸಿಬಿಗೆ ನಿರ್ದೇಶನ ನೀಡಿದೆ. ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ವಿರುದ್ಧದ ಲಂಚ ಪ್ರಕರಣದ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರು ಎಡಿಜಿಪಿ ವಿರುದ್ಧ ಅನುಮಾನ ಬರಲು ಹಲವಾರು ಕಾರಣಗಳಿವೆ. ಅವರಿಗೆ 'ಆತ್ಮಸಾಕ್ಷಿಯನ್ನು ಕೇಳಿಕೊಳ್ಳಲು ಹೇಳಿ' ಎಂದು ಖಾರವಾಗಿ ತಿಳಿಸಿದರು.

ಸೀಮಂತ್​ ಕುಮಾರ್ ಸಿಂಗ್ ಅವರು 2013 ರ ಏಪ್ರಿಲ್​ನಲ್ಲಿ ಬಳ್ಳಾರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪದ ಮೇಲೆ ಅವರ ಮನೆ ಮೇಲೆ ಸಿಬಿಐ ದಾಳಿ ಮಾಡಿ ತನಿಖೆ ನಡೆಸಿದೆ. ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದ ಸೀಮಂತ್​ ಕುಮಾರ್ ಸಿಂಗ್ ತಮ್ಮ ಅಧೀನ ಅಧಿಕಾರಿಗಳ ಮೂಲಕ ಗಣಿ ಕಂಪನಿಗಳ ಮಾಲೀಕರಿಂದ ಮಾಮೂಲು ವಸೂಲು ಮಾಡಿಸುತ್ತಿದ್ದರು. ಸ್ವಸ್ತಿಕ್ ನಾಗರಾಜ್ ಎನ್ನುವರಿಂದ 3 ಲಕ್ಷ ರೂಪಾಯಿ ಪಡೆದ ಬಗ್ಗೆ ಆರೋಪಗಳಿವೆ. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ತನಿಖೆ ನಡೆಸುತ್ತಿರುವ ಸಿಬಿಐ, ಸೀಮಂತ್​ ಕುಮಾರ್ ಸಿಂಗ್ ಅವರ ಬಗ್ಗೆ ಯಾವುದೇ ಕ್ರಮಕ್ಕೆ ಸೂಚಿಸಿಲ್ಲ. ಈ ಬಗೆಗಿನ ಸಿಬಿಐ ತನಿಖಾ ವರದಿ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ನ್ಯಾಯಮೂರ್ತಿಗಳು ಸಿಬಿಐ ಪರ ವಕೀಲರಿಗೆ ಆದೇಶಿಸಿದರು.

ಆಕ್ಷೇಪಾರ್ಹ ಟೀಕೆಗಳ ರದ್ದತಿಗೆ ಮನವಿ: ಭೂವ್ಯಾಜ್ಯಕ್ಕೆ ಸಂಬಂಧಿಸಿದ ಲಂಚ ಪ್ರಕರಣದ ಆರೋಪಿ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ತಮ್ಮ ವಿರುದ್ಧ ಹೈಕೋರ್ಟ್ ನ್ಯಾಯಮೂರ್ತಿಗಳಾದ ಹೆಚ್.ಪಿ.ಸಂದೇಶ್ ಅವರು ಮಾಡಿರುವ ಟೀಕೆಗಳನ್ನು ರದ್ದುಪಡಿಸುವಂತೆ ಕೋರಿ ಸೀಮಂತ್‌ ಕುಮಾರ್‌ ಸಿಂಗ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿಯಾಗಿ ಹುದ್ದೆಯಲ್ಲಿ ಹೆಚ್ಚಿನ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಅರ್ಜಿಯಲ್ಲಿ ಸೀಮಂತ್‌ ಕುಮಾರ್ ಸಿಂಗ್‌ ತಿಳಿಸಿದ್ದಾರೆ. ತಮ್ಮ ವಿರುದ್ಧ ಹೈಕೋರ್ಟ್‌ ನ್ಯಾಯಮೂರ್ತಿಗಳು ಮಾಡಿರುವ ಮೌಖಿಕ ಟೀಕೆಗಳನ್ನು ತೆಗೆದುಹಾಕಬೇಕು ಮತ್ತು ತಮ್ಮ ಸೇವಾ ದಾಖಲೆಯನ್ನು ಸಲ್ಲಿಸಲು ನೀಡಿರುವ ಆದೇಶವನ್ನು ರದ್ದುಪಡಿಸಬೇಕೆಂದು ಅವರು ಕೋರಿದ್ದಾರೆ.

ಲಂಚ ಪ್ರಕರಣವೊಂದರಲ್ಲಿ ಆರೋಪಿಯೊಬ್ಬರು ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ತಾವಾಗಲಿ ಅಥವಾ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಯ ಕಾರ್ಯದರ್ಶಿಯವರಾಗಲಿ ಪ್ರತಿವಾದಿಯಾಗಿಲ್ಲ, ಅರೋಪಿ ಸಲ್ಲಿಸಿರುವ ಅರ್ಜಿಯು ಜಾಮೀನು ಅರ್ಜಿಯಷ್ಟೇ ಆಗಿದೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿಗಳು ಅದನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಂತೆ ಪರಿಗಣಿಸಿ ವಿಚಾರಣೆ ನಡೆಸಿದ್ದಾರೆ. ತಮ್ಮ ಹಾಗೂ ತಮ್ಮ ನೇತೃತ್ವದ ಎಸಿಬಿ ಸಂಸ್ಥೆಯ ಪ್ರಾಮಾಣಿಕತೆ, ಬದ್ಧತೆಯ ಬಗ್ಗೆ ಅನಗತ್ಯ ಟೀಕೆ ಮಾಡಿದ್ದಾರೆ. ತಮ್ಮ ಸೇವಾ ವರದಿಯನ್ನು ಸಲ್ಲಿಸಲು ಕೋರಿರುವುದು ಸಹ ಜಾಮೀನು ಅರ್ಜಿ ವ್ಯಾಪ್ತಿಯನ್ನು ಮೀರಿದ್ದಾಗಿದೆ ಎಂದು ಅರ್ಜಿಯಲ್ಲಿ ಹೈಕೋರ್ಟ್ ಟೀಕೆಗಳ ಬಗ್ಗೆ ಆಕ್ಷೇಪವೆತ್ತಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ ಅವರು ಭಾಗಿಯಾಗಿದ್ದಾರೆ ಎನ್ನಲಾದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ.ಎಚ್‌.ಪಿ. ಸಂದೇಶ್‌ ಅವರು ಎಸಿಬಿ ಹಾಗೂ ಅದರ ಎಡಿಜಿಪಿಯಾದ ಸೀಮಂತ್‌ ಕುಮಾರ್‌ ಅವರ ವಿರುದ್ಧ ಗಂಭೀರ ಟೀಕೆಗಳನ್ನು ಮಾಡಿದ್ದರು. ತಮಗೆ ವರ್ಗಾವಣೆ ಬೆದರಿಕೆ ಇರುವ ಬಗ್ಗೆಯೂ ಅವರು ಪ್ರಸ್ತಾಪಿಸಿದ್ದರು. ವರ್ಗಾವಣೆ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ತಿಳಿಸಿದ್ದ ಅವರು, ಎಸಿಬಿ ಎಡಿಜಿಪಿಯವರ ಸೇವಾ ದಾಖಲೆಯನ್ನು ಕೋರ್ಟ್ ಗೆ ಸಲ್ಲಿಸುವಂತೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದರು.

ಇದನ್ನೂ ಓದಿ:ಭ್ರಷ್ಟಾಚಾರ ಆರೋಪಿತ ಐಎಎಸ್ ಅಧಿಕಾರಿ ಮಂಜುನಾಥ್‌ಗೆ ಮೂಡಿಗೆರೆ ಬಿಜೆಪಿ ಶಾಸಕರ ಬೆಂಬಲ

ABOUT THE AUTHOR

...view details