ಬೆಂಗಳೂರು: ರಾಜರಾಜೇಶ್ವರಿನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಸದ್ಯ ಆರ್ ಆರ್ ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗುಪ್ತಚರ ಇಲಾಖೆ ಹಾಗೂ ಖಾಕಿ ಪಡೆ ಫುಲ್ ಅಲರ್ಟ್ ಆಗಿವೆ.
ಮತದಾರರ ಮೇಲೆ ಹಣ-ಹೆಂಡ ಪ್ರಭಾವ ಬೀರದಂತೆ ತಡೆಯಲು ಆರ್ಆರ್ ನಗರದಲ್ಲಿ ಖಾಕಿ ಹದ್ದಿನ ಕಣ್ಣು
ಆರ್ ಆರ್ ನಗರ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪಡೆ ನಗರವನ್ನು ಸುತ್ತುವರೆದಿದ್ದಾರೆ. ಚುನಾವಣೆ ಹಿನ್ನೆಲೆ ಹಲವು ಆಮಿಷಗಳಿಂದ ಜನರನ್ನು ಸೆಳೆಯುವವರ ಮೇಲೆಯೂ ಪೊಲೀಸರು ಕಣ್ಣಿಟ್ಟಿದ್ದಾರೆ.
ಮೂರು ಪಕ್ಷಗಳು ಕಳೆದೊಂದು ವಾರದಿಂದ ತಮ್ಮ ತಮ್ಮ ಪಕ್ಷದ ಪ್ರತಿಷ್ಠಿತ ನಾಯಕರು ಹಾಗೂ ನಟರ ಮೂಲಕ ಮತ ಹಾಕುವಂತೆ ಮನವಿ ಮಾಡಿವೆ. ಇದೇ ವೇಳೆ ಎರಡು ಪಕ್ಷದ ನಡುವೆ ಜಿದ್ದಾ ಜಿದ್ದಿ ಕೂಡ ನಡೆದಿತ್ತು. ಹೀಗಾಗಿ ಮತದಾನ ನಡೆಯುವವರೆಗೆ ಯಾವುದೇ ತೊಂದರೆಯಾಗಬಾರದೆಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಹಲವು ಕ್ರಮ ಕೈಗೊಂಡಿದೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ನೇತೃತ್ವದಲ್ಲಿ ಪಶ್ಚಿಮ ವಿಭಾಗ ಡಿಸಿಪಿ, ಉತ್ತರ ವಿಭಾಗ ಡಿಸಿಪಿ, ಪ್ಯಾರಾಮಿಲಿಟರಿ ತಂಡ ಸೇರಿದಂತೆ ಪೊಲೀಸ್ ಪಡೆ ನಗರವನ್ನು ಸುತ್ತುವರೆದಿದೆ.
ಆರ್ ಆರ್ ನಗರ ವ್ಯಾಪ್ತಿಯಲ್ಲಿ ಸುಮಾರು ಆರರಿಂದ ಎಂಟು ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿರುವ ಪೊಲೀಸರು ಅನುಮಾನಾಸ್ಪದವಾಗಿ ಓಡಾಡುವ ವಾಹನಗಳ ಮೇಲೆ ಕಣ್ಣಿಟ್ಟಿದ್ದಾರೆ. ಮತದಾರರ ಮೇಲೆ ಹಣ, ಹೆಂಡ ಪ್ರಭಾವ ಬೀರದಂತೆ ತಡೆಯಲು ಕ್ರಮಗಳನ್ನು ಕೈಗೊಂಡಿದ್ದಾರೆ.