ಕರ್ನಾಟಕ

karnataka

ETV Bharat / city

ಆಕ್ಷೇಪಾರ್ಹ ಟ್ವಿಟರ್‌ ಖಾತೆಗಳಿಗೆ ನಿರ್ಬಂಧ ಆದೇಶ: ಕೇಂದ್ರಕ್ಕೆ ಹೈಕೋರ್ಟ್ ನೋಟಿಸ್ - ಟ್ವಿಟರ್​ಗೆ ನಿರ್ಬಂಧ

ಆಕ್ಷೇಪಾರ್ಹವಾಗಿರುವ ಕೆಲವು ವ್ಯಕ್ತಿಗಳ ಟ್ವಿಟರ್ ಖಾತೆಗಳನ್ನು ರದ್ದುಪಡಿಸುವಂತೆ ಸಾಮಾಜಿಕ ಮಾಧ್ಯಮ ಟ್ವಿಟರ್‌ಗೆ ಆದೇಶಿಸಿರುವ ಪ್ರಕರಣಕ್ಕೆ​ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್‌ ನೀಡಿದೆ.

ಹೈಕೋರ್ಟ್
High Court

By

Published : Jul 27, 2022, 6:46 AM IST

ಬೆಂಗಳೂರು: ಆಕ್ಷೇಪಾರ್ಹ ವ್ಯಕ್ತಿಗತ ಟ್ವಿಟರ್ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ನಿರ್ಬಂಧಕ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತು.

ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿರುವ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಪ್ರತಿವಾದಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಲು ಆದೇಶಿಸಿ, ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿತು.

ಕೇಂದ್ರದ ವಿರುದ್ಧ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ, ಕೇಂದ್ರದ ನಿರ್ಬಂಧ ಆದೇಶದಿಂದ ಆಗುವ ತೊಂದರೆಗಳ ಬಗ್ಗೆ ಸುದೀರ್ಘ ವಿವರಣೆ ನೀಡಿದರು. ನಂತರ ಟ್ವಿಟರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಪ್ರಸಿದ್ಧ ಹಿರಿಯ ವಕೀಲ ಮುಕುಲ್‌ ರೋಹಟ್ಗಿ, ಟ್ವಿಟರ್‌ನಲ್ಲಿ ವ್ಯಕ್ತಿಗತವಾಗಿ ಹೊಂದಿರುವ ಸಾವಿರಾರು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಕಾನೂನಿನ ಪ್ರಕಾರ ಸರ್ಕಾರದ ಆದೇಶವನ್ನು ಪಾಲಿಸಬೇಕಿದೆ. ನಿರ್ಬಂಧಕ ಆದೇಶವು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧ ಎಂದು ತಿಳಿಸಿದರು.

ಈ ನಿರ್ಬಂಧ ಆದೇಶ ಮತ್ತು ಜಾರಿಯು ಗೌಪ್ಯವಾಗಿರಬೇಕು ಎಂದು ಕೇಂದ್ರ ಸರ್ಕಾರ ಹೇಳಿದ್ದು ಟ್ವಿಟರ್ ಅದನ್ನು ಬಹಿರಂಗಪಡಿಸಿಲ್ಲ. ಈ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದ ಗಮನಕ್ಕೆ ಮಾತ್ರ ತರಲಾಗುತ್ತಿದೆ. ಒಂದು ಸಾವಿರಕ್ಕೂ ಹೆಚ್ಚಿನ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವಂತೆ ಸರ್ಕಾರ ಆದೇಶಿಸಿದ್ದು ಯಾವುದೇ ಸಕಾರಣ ನೀಡಿಲ್ಲ ಎಂದು ರೋಹಟಗಿ ನ್ಯಾಯಾಲಯದ ಗಮನಕ್ಕೆ ತಂದರು.

ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಿದರೆ ಬಳಕೆದಾರರಿಗೆ ಉತ್ತರಿಸಬೇಕಾಗುತ್ತದೆ. ಸ್ವಾಭಾವಿಕ ನ್ಯಾಯದ ಅನ್ವಯ ಬಳಕೆದಾರರೊಬ್ಬರು ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದರೆ ಅವರಿಗೆ ಅದನ್ನು ತಿಳಿಸಿದ ಬಳಿಕ ಅವರ ಖಾತೆಯನ್ನು ನಿರ್ಬಂಧಿಸಬೇಕು. ಹೀಗಾಗಿ, ಯಾಕಾಗಿ ನಿರ್ದಿಷ್ಟ ಬಳಕೆದಾರರ ಖಾತೆಗಳನ್ನು ನಿರ್ಬಂಧಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕೇಂದ್ರವು ಕಾರಣ ನೀಡಬೇಕು. ಯಾವುದೇ ಕಾರಣ ನೀಡದೆ ಸರ್ಕಾರದ ಸೂಚನೆಯಂತೆ ಟ್ವಿಟರ್ ಖಾತೆ ರದ್ದುಪಡಿಸಿದರೆ ಅದರಿಂದ ಟ್ವಿಟರ್‌ ಉದ್ಯಮಕ್ಕೆ ಧಕ್ಕೆಯಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಾಲಯವು, ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿರುವ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು ಕೋವಿಡ್‌ ಸೋಂಕು ತಗುಲಿ ಚಿಕಿತ್ಸೆಯಲ್ಲಿದ್ದಾರೆ. ಎರಡು ವಾರಗಳ ನಂತರ ಅರ್ಜಿ ವಿಚಾರಣೆ ನಡೆಸುವ ಇಂಗಿತ ವ್ಯಕ್ತಪಡಿಸಿತು.

ಇದಕ್ಕೆ ರೋಹಟಗಿ ಸಹಮತ ವ್ಯಕ್ತಪಡಿಸಿ, ಆಗಸ್ಟ್‌ 25ರಂದು ಬೇರೊಂದು ಪ್ರಕರಣದ ವಿಚಾರಣೆಗೆ ಬೆಂಗಳೂರಿಗೆ ಬರುವ ಕಾರ್ಯಕ್ರಮವಿದ್ದು, ಅಂದು ಈ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಮನವಿ ಮಾಡಿದರು. ಇದಕ್ಕೆ ನ್ಯಾಯಮೂರ್ತಿಗಳು ಒಪ್ಪಿಗೆ ನೀಡಿದರು. ಈ ನಡುವೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ.ಬಿ.ನರಗುಂದ್‌ ಅವರು ಹಿರಿಯ ವಕೀಲ ಮುಕುಲ್‌ ರೋಹಟಗಿ ಅವರನ್ನು ಖುದ್ದು ವಿಚಾರಣೆಯಲ್ಲಿ ಹಾಜರಾಗಲು ನಿರ್ದೇಶಿಸಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದರು.

ಇದನ್ನೂ ಓದಿ:ಕೇಂದ್ರದ ವಿರುದ್ಧ ಟ್ವಿಟರ್ ಕಾನೂನು ಸಮರ: ಕಠಿಣ ನಿರ್ಬಂಧಗಳ ರದ್ದತಿಗೆ ಹೈಕೋರ್ಟ್​ಗೆ ಅರ್ಜಿ

ABOUT THE AUTHOR

...view details