ಕರ್ನಾಟಕ

karnataka

By

Published : Aug 20, 2021, 2:17 AM IST

ETV Bharat / city

ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳ ವಜಾಗೊಳಿಸಿದ ಹೈಕೋರ್ಟ್

ಹೊಸ ಜನಗಣತಿ ನಡೆಯದೇ ಈಗಿನ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಮರು ವಿಂಗಡಣೆ ಮಾಡಿದ್ದು ಸರಿಯಲ್ಲ. ಹಾಗಾಗಿ, ಕ್ಷೇತ್ರಗಳ ಮರು ವಿಂಗಡಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

high-court-dismisses-petitions-challenging-zilla-panchayat-constituency-reallocation
ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿಗಳ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು:ರಾಯಚೂರು, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ತಕರಾರು ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರು ವಿಂಗಡಣೆಯನ್ನು ಪ್ರಶ್ನಿಸಿ ರಾಯಚೂರು ಜಿಲ್ಲೆಯ ಭೀಮಯ್ಯ, ತುಮಕೂರು ಜಿಲ್ಲೆಯ ಎಚ್.ಎಂ. ವಿಶ್ವನಾಥ್, ಚಿಕ್ಕಬಳ್ಳಾಪುರ ಜಿಲ್ಲೆಯ ಎಂ.ವಿ. ಬಾಲರಾಜ ಮತ್ತಿತರು ಸಲ್ಲಿಸಿದ್ದ ಪ್ರತ್ಯೇಕ ಚುನಾವಣಾ ತಕರಾರು ಅರ್ಜಿಗಳನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ ತೀರ್ಪನ್ನು ಗುರುವಾರ ಪ್ರಕಟಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ.

ರಾಜ್ಯ ಚುನಾವಣಾ ಆಯೋಗ ಈಗಾಗಲೇ ಕ್ಷೇತ್ರ ಮರು ವಿಂಗಡಣಾ ಕಾರ್ಯ ಪೂರ್ಣಗೊಳಿಸಿದೆ. ಕ್ಷೇತ್ರವಾರು ಮೀಸಲಾತಿ ನಿಗದಿ ಕಾರ್ಯ ಚಾಲ್ತಿಯಲ್ಲಿದೆ. ಈ ಹಂತದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿರುವ ಹೈಕೋರ್ಟ್, ಕ್ಷೇತ್ರ ಮರು ವಿಂಗಡಣೆ ಪ್ರಶ್ನಿಸಿದ್ದ ಎಲ್ಲಾ ತಕರಾರು ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದೆ.

2011ರ ಜನಗಣತಿ ಆಧಾರವಾಗಿಟ್ಟುಕೊಂಡೇ ಕ್ಷೇತ್ರ ಮರು ವಿಂಗಡಣೆ ಮಾಡಲಾಗಿದೆ. ಹಿಂದಿನ ಕ್ಷೇತ್ರ ಮರುವಿಂಗಡಣೆ ಬಳಿಕ ಕೆಲವೊಂದು ಕ್ಷೇತ್ರಗಳು ಮೇಲ್ದರ್ಜೇಗೇರಿವೆ. ಮೇಲಾಗಿ ಕ್ಷೇತ್ರ ಮರು ವಿಂಗಡಣೆಗೆ ಜನಸಂಖ್ಯೆ ನಿಗದಿಪಡಿಸಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮಕ್ಕೆ ತಿದ್ದುಪಡಿ ತರಲಾಗಿದೆ. ಹೀಗಾಗಿ, ಕ್ಷೇತ್ರ ಮರು ವಿಂಗಡಣೆ ಮಾಡುವ ಅಧಿಕಾರ ಆಯೋಗಕ್ಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕ್ಷೇತ್ರ ಮರು ವಿಂಗಡಣೆಯಿಂದ ಕೆಲವೊಂದು ಗ್ರಾಮಗಳು, ಜನವಸತಿ ಪ್ರದೇಶಗಳು ಪಕ್ಕದ ಕ್ಷೇತ್ರಗಳಿಗೆ ಸೇರ್ಪಡೆಗೊಂಡಿರಬಹುದು. ಎಲ್ಲೇ ಇದ್ದರೂ, ಮತದಾನ ಮಾಡಬಹುದು. ಕ್ಷೇತ್ರ ಮರು ವಿಂಗಡಣೆಯಿಂದ ಮತ ಚಲಾಯಿಸುವ ವ್ಯಕ್ತಿಯ ವ್ಯಕ್ತಿಗತ ಹಕ್ಕು ಕಸಿದುಕೊಂಡಂತಾಗುವುದಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ತನ್ನ ನಿರ್ಧಾರ ಸಮರ್ಥಿಸಿಕೊಂಡಿತ್ತು.

ಇದನ್ನೂ ಓದಿ:ಪೋಷಕರು ಮಕ್ಕಳನ್ನು ತ್ಯಜಿಸುವ ಪ್ರಕರಣಗಳ ಬಗ್ಗೆ ಹೈಕೋರ್ಟ್ ಕಳವಳ: ಪರಿಶೀಲನೆಗೆ ನಿರ್ದೇಶನ

ಜನಗಣತಿ ಆಧರಿಸಿ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳ ಮರು ವಿಂಗಡಣೆ ಮಾಡಬೇಕು. 2011ರ ಜನಗಣತಿ ಅಧರಿಸಿ ಈಗಾಗಲೇ ಒಂದು ಬಾರಿ ಕೇತ್ರ ಮರು ವಿಂಗಡಣೆ ಮಾಡಲಾಗಿದೆ. ಈಗ ಹೊಸದಾಗಿ ಜನಗಣತಿ ನಡೆದಿಲ್ಲ. ಹೀಗಿರುವಾಗ ಕ್ಷೇತ್ರಗಳಿಗೆ ಜನಸಂಖ್ಯೆ ನಿಗದಿಪಡಿಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಹೊಸ ಜನಗಣತಿ ನಡೆಯದೇ ಈಗಿನ ಜನಗಣತಿ ಆಧಾರದಲ್ಲಿ ಕ್ಷೇತ್ರಗಳ ಮರು ವಿಂಗಡಣೆ ಮಾಡಿದ್ದು ಸರಿಯಲ್ಲ. ಹಾಗಾಗಿ, ಕ್ಷೇತ್ರಗಳ ಮರು ವಿಂಗಡಣೆ ಮಾಡಿ ರಾಜ್ಯ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ABOUT THE AUTHOR

...view details