ಕರ್ನಾಟಕ

karnataka

ಸಿಲಿಕಾನ್ ಸಿಟಿಯಲ್ಲಿ ಗುಡುಗು, ಗಾಳಿಸಹಿತ ಜೋರು ಮಳೆ: ಜನಜೀವನ ಅಸ್ತವ್ಯಸ್ತ

By

Published : May 2, 2022, 6:51 AM IST

Updated : May 2, 2022, 7:24 AM IST

ಬೆಂಗಳೂರಿನ ಬೊಮ್ಮನಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಹೊಸೂರು ರಸ್ತೆ, ಮಡಿವಾಳ, ಎಚ್.ಎಸ್.ಆರ್ ಲೇಔಟ್, ಬಿಳೇಕಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿನ್ನೆ ಸಂಜೆ ಗುಡುಗು, ಗಾಳಿ ಸಮೇತ ಭಾರಿ ಮಳೆಯಾಗಿದೆ.

rain
ಬೆಂಗಳೂರು ಮಳೆ

ಬೆಂಗಳೂರು: ಬಿಸಿಲ ಬೇಗೆಯಿಂದ ಬಸವಳಿದ ರಾಜ್ಯ ರಾಜಧಾನಿಯಲ್ಲಿ ನಿನ್ನೆ ಸಂಜೆ ಆಲಿಕಲ್ಲು ಸಹಿತ ಭಾರಿ ಮಳೆಯಾಯಿತು. ನಗರದ ಹಲವು ಭಾಗಗಳ ರಸ್ತೆಗಳು ಹೊಳೆಯಂತಾದವು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನಕ್ಕೆ ತೊಂದರೆಯಾಯಿತು.

ಎಲ್ಲೆಲ್ಲಿ ಮಳೆ?: ಬೆಂಗಳೂರು ದಕ್ಷಿಣ ಭಾಗದ ಪ್ರದೇಶಗಳಾದ ಬೊಮ್ಮನಹಳ್ಳಿ, ಕೋರಮಂಗಲ, ಬಿಟಿಎಂ ಲೇಔಟ್, ಹೊಸೂರು ರಸ್ತೆ, ಮಡಿವಾಳ, ಎಚ್.ಎಸ್.ಆರ್ ಲೇಔಟ್, ಬಿಳೇಕಳ್ಳಿ ಸೇರಿ ಹಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಈ ಪ್ರದೇಶದ ಹಲವು ಭಾಗಗಳಲ್ಲಿ ರಾಜಕಾಲುವೆ ಉಕ್ಕಿ ಹರಿದು ಕೆಲಕಾಲ ಸ್ಥಳೀಯ ನಿವಾಸಿಗಳು ಪರದಾಡಿದರು.

ಚಿಕ್ಕಪೇಟೆ, ರೇಸ್ ಕೋರ್ಸ್ ರಸ್ತೆ, ಚಾಲುಕ್ಯ ವೃತ್ತ, ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಮಾರ್ಕೆಟ್, ಚಾಮರಾಜಪೇಟೆ, ವಸಂತನಗರ, ಕೆ.ಆರ್.ಸರ್ಕಲ್, ಕೆಂಗೇರಿ, ರಾಜರಾಜೇಶ್ವರಿ ನಗರ ಭಾಗದಲ್ಲಿ ಗುಡುಗು, ಗಾಳಿ ಸಮೇತವಾಗಿ ಮಳೆ ಸುರಿಯಿತು.


ಲಕ್ಷ್ಮಯ್ಯ ಲೇಔಟ್​ನಲ್ಲಿ ನುಗ್ಗಿದ ನೀರು: ಉತ್ತರಹಳ್ಳಿ ಬಳಿಯ ಲಕ್ಷ್ಮಯ್ಯ ಲೇಔಟ್​ನಲ್ಲಿ 100ಕ್ಕೂ ಹೆಚ್ಚು ಮನೆ, ಅಂಗಡಿಗಳಿಗೆ ನೀರು ನುಗ್ಗಿ ಇಡೀ ಪ್ರದೇಶ ಜಲಾವೃತವಾಗಿದೆ. ಕಳೆದ 20 ದಿನಗಳ ಹಿಂದೆ ಸಹ ಮಳೆ ಬಂದಾಗ ರಾಜಕಾಲುವೆ ತುಂಬಿ ರಸ್ತೆ, ಮನೆಗಳಿಗೆ ಹರಿದು ಸ್ಥಳೀಯರು ಸಮಸ್ಯೆಯಲ್ಲಿ ಸಿಲುಕಿದ್ದರು. ಇದೀಗ ಮತ್ತೆ ಸಮಸ್ಯೆ ಉಂಟಾಗಿದ್ದು, ರಾಜಕಾಲುವೆ ಸಮಸ್ಯೆ ಬಗೆಹರಿದಿಲ್ಲ ಎಂದು ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಧರೆಗುರುಳಿದ ಮರಗಳು: ಕಾವಲ್ ಬೈರಸಂದ್ರದಲ್ಲಿ ಒಳಚರಂಡಿ ನೀರು ಉಕ್ಕಿ ಹರಿದು ಮನೆಗಳಿಗೆ ನುಗ್ಗಿತ್ತು. ಬಿಟಿಎಂ ಲೇಔಟ್‌ನಲ್ಲಿ 3 ಕಡೆ ಮರಗಳು ಧರೆಗುರುಳಿದ್ದು, ಕೆ.ಜಿ.ರಸ್ತೆ ಕೋರಮಂಗಲದಲ್ಲಿ ಸಾಕಷ್ಟು ದೂರುಗಳು ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಬಂದಿವೆ.

ಕೆಟ್ಟು ನಿಂತ ವಾಹನಗಳು: ಶಾಂತಿ ನಗರ ಮುಖ್ಯರಸ್ತೆಯಲ್ಲಿ 5ಕ್ಕೂ ಹೆಚ್ಚು ಕಾರು, 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ ಆಟೋಗಳು ಕೆಟ್ಟು ನಿಂತವು. ರಸ್ತೆಯಲ್ಲಿ ನೀರು ಹರಿದು ಸವಾರರು ಸಂಕಷ್ಟಕ್ಕೆ ಸಿಲುಕಿದರು. ನೀರಿನಿಂದ ವಾಹನಗಳನ್ನು ಹೊರತರಲು ಪರದಾಡಿದರು.

ಇದನ್ನೂ ಓದಿ:ರಾಜ್ಯದಲ್ಲೂ ಕಲ್ಲಿದ್ದಲು ಕೊರತೆಯ ತೂಗುಗತ್ತಿ: ಯರಮರಸ್ ಉಷ್ಣ ಸ್ಥಾವರ ಕಾರ್ಯಸ್ಥಗಿತ; ಸದ್ಯ ಹೀಗಿದೆ ಸ್ಥಿತಿಗತಿ

Last Updated : May 2, 2022, 7:24 AM IST

ABOUT THE AUTHOR

...view details