ಬೆಂಗಳೂರು: ಯುಗಾದಿ ಹಬ್ಬವಾಗಲಿ, ರಂಜಾನ್ ಆಗಲಿ ಕೋವಿಡ್ ನಿಯಮ ಜಾರಿಯಲ್ಲಿದೆ. ಹಬ್ಬಕ್ಕೆ ಯಾವುದೇ ವಿನಾಯಿತಿ ಇಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಒಂದೇ ದಿನ ಏಳು ಸಾವಿರ ಪಾಸಿಟಿವ್ ಕೇಸ್ ಬಂದಿದೆ. ಬೆಂಗಳೂರಿನಲ್ಲಿ ಐದು ಸಾವಿರ ಕೇಸ್ ಬಂದಿದೆ. ಬಿಬಿಎಂಪಿ ಆಯುಕ್ತರು, ನಗರಾಡಳಿತ ತಜ್ಞರ ಜೊತೆ ಸಭೆ ಮಾಡುತ್ತೇನೆ. ಬಿಬಿಎಂಪಿ ಎಂಟು ವಲಯ ರಚನೆ ಮಾಡಿದ್ದು, ಕ್ಯಾಬಿನೆಟ್ ಸಚಿವರ ನೇಮಕ ಮಾಡಿದ್ದಾರೆ. ಎಲ್ಲರನ್ನೊಳಗೊಂಡ ನಿಯೋಗ ಮಾಡಿದ್ದಾರೆ. ಸೋಂಕು ನಿಯಂತ್ರಣಕ್ಕೆ ಆಡಳಿತಾತ್ಮಕವಾಗಿ ಏನೆಲ್ಲಾ ಕ್ರಮಕೈಗೊಳ್ಳಬೇಕು ಅನ್ನೋ ಚರ್ಚೆ ಮಾಡುತ್ತೇವೆ ಎಂದರು.
ಪ್ರಧಾನಮಂತ್ರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ಮಾಡಲಿದ್ದಾರೆ. ಸಭೆಯಲ್ಲಿ ದೇಶದಲ್ಲಿರೋ ಕೋವಿಡ್ ಸ್ಥಿತಿಗತಿಗಳ ಬಗ್ಗೆ ಚರ್ಚೆ ಮಾಡಲಿದ್ದಾರೆ. ಎರಡನೇ ಅಲೆ ನಿಯಂತ್ರಣ, ಮಾರ್ಗಸೂಚಿ ಬಗ್ಗೆ ಅನುಷ್ಠಾನ ಬಗ್ಗೆ ಚರ್ಚೆ ಮಾಡಲಿದ್ದಾರೆ. ಸಿಎಂ ಕೂಡ ರಾಜ್ಯದ ಸ್ಥಿತಿ ಗತಿ ಬಗ್ಗೆ ಪ್ರಧಾನಿಗೆ ತಿಳಿಸಲಿದ್ದಾರೆ. ಐವತ್ತು ಲಕ್ಷಕ್ಕೂ ಅಧಿಕ ಲಸಿಕೆ ಕೊಡುವ ಕೆಲಸ ಆಗಲಿದೆ ಎಂದು ಹೇಳಿದರು.