ಕರ್ನಾಟಕ

karnataka

ETV Bharat / city

ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ಸ್ವಾರ್ಥದಿಂದ ಜನರ ಜೊತೆ ಚೆಲ್ಲಾಟವಾಡುತ್ತಿದೆ: ಹೆಚ್​ಡಿಕೆ ಕಿಡಿ - ಕರ್ನಾಟಕ ಲಾಕ್​ಡೌನ್

ಆಕ್ಸಿಜನ್, ವೆಂಟಿಲೇಟರ್, ಐಸಿಯು ನಿರ್ವಹಣೆಗೆ ಸಚಿವರನ್ನು ನೇಮಕ ಮಾಡುವಂತೆ ಸರ್ಕಾರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

hdkumaraswamy
hdkumaraswamy

By

Published : May 4, 2021, 1:13 AM IST

ಬೆಂಗಳೂರು:ಸರ್ಕಾರಕ್ಕೆ ಆರ್ಥಿಕವಾಗಿ ಶಕ್ತಿ ಇದ್ದರೂ ಕೋವಿಡ್-19ರ ನಿರ್ವಹಣೆಯಲ್ಲಿ ಸ್ವಾರ್ಥದಿಂದ ರಾಜ್ಯದ ಜನತೆ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಆಕ್ಸಿಜನ್, ವೆಂಟಿಲೇಟರ್, ಐಸಿಯು ನಿರ್ವಹಣೆಗೆ ಸಚಿವರನ್ನು ನೇಮಕ ಮಾಡುವಂತೆ ಸಲಹೆ ಮಾಡಿದರು‌. ಕೋವಿಡ್ ಎರಡನೇ ಅಲೆ ಹರಡುವಿಕೆಯನ್ನು ಆರಂಭಿಕ ಹಂತದಲ್ಲೇ ಸೂಕ್ತ ರೀತಿಯಲ್ಲಿ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಸೋಂಕು ಉಲ್ಬಣಗೊಂಡ ನಂತರವೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ಸಭೆ ಮಾಡುವುದಾಗಿ ಹೇಳುತ್ತಾರೆ. ವೈದ್ಯರನ್ನು ದೂರಿದರೆ ಪ್ರಯೋಜನವಿಲ್ಲ. ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಅಮಾಯಕರೊಂದಿಗೆ ಚೆಲ್ಲಾಟವಾಡಬಾರದು. ಕಳೆದ ವಾರ ಕೋಲಾರದಲ್ಲಿ ಇಂದು ಚಾಮರಾಜನಗರದಲ್ಲಿ ಸಾವು ಸಂಭವಿಸಿದೆ‌. ಸಚಿವರು ಕೇವಲ ಹೇಳಿಕೆ ನೀಡಿದರೆ ಸಾಲದು. ಜವಾಬ್ದಾರಿ ನಿರ್ವಹಣೆ ಮಾಡಬೇಕು. ಒಬ್ಬ ರೋಗಿಗೆ ನಿತ್ಯ 15 ಲೀಟರ್​ವರೆಗೂ ಆಕ್ಸಿಜನ್ ಬೇಕಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಹಿತಿ ಇಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.

ಕೋವಿಡ್ ನಿಯಂತ್ರಿಸುವ ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ವಿಚಾರದಲ್ಲಿ ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದರೆ, ಒಂದು ಕ್ಷಣವೂ ಅಧಿಕಾರದಲ್ಲಿರಲು ಅರ್ಹವೇ ಎಂಬ ಪ್ರಶ್ನೆ ಎದುರಾಗುತ್ತದೆ ಎಂದು ಟೀಕಿಸಿದರು‌. ಬೆಂಗಳೂರಿನ ದೊಡ್ಡ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇರುವ ಹಾಗೂ ರಾಮನಗರದಲ್ಲಿ ರೆಮಿಡಿಸಿವಿರ್ ಔಷಧ ಕೊರತೆ ಇರುವ ಮಾಹಿತಿ ಬಂದಿದೆ ಎಂದು ಹೇಳಿದರು‌. (ಸರ್ಕಾರ ಸತ್ತು ಹೋಗಿದೆ, ಜನರನ್ನೂ ಸಾಯಿಸ್ತಿದೆ: ಡಿ.ಕೆ.ಶಿವಕುಮಾರ್)

ABOUT THE AUTHOR

...view details