ಕರ್ನಾಟಕ

karnataka

ನಿತ್ಯವೂ ʼಸುಳ್ಳಿನ ಜಪʼ ಮಾಡುತ್ತಾ ಜನರನ್ನು ದಾರಿತಪ್ಪಿಸುವ ʼಸಿದ್ದಕಲೆʼ ಚೆನ್ನಾಗಿ ಸಿದ್ಧಿಸಿದೆ: ಸಿದ್ದರಾಮಯ್ಯಗೆ ಹೆಚ್​​ಡಿಕೆ ತಿರುಗೇಟು

By

Published : Sep 25, 2021, 8:45 PM IST

ಜಾತಿ ಗಣತಿ ವರದಿ ಬಗ್ಗೆ ಇಷ್ಟೆಲ್ಲ ಪ್ರೀತಿ-ಕಾಳಜಿ ತೋರುವ ಈ ಮಹಾನುಭಾವರು, ನಿನ್ನೆಯವರೆಗೂ ನಡೆದ ವಿಧಾನಮಂಡಲ ಕಲಾಪದಲ್ಲಿ ಏಕೆ ಪ್ರಸ್ತಾಪ ಮಾಡಲಿಲ್ಲ?. ತಮ್ಮ ಪಕ್ಷದಲ್ಲೇ ತಮಗೆ ಬೀಳುತ್ತಿರುವ ಒಳ ಏಟುಗಳ ಹೊಡೆತ ತಾಳಲಾಗದೆ, ಅದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಬಹಿರಂಗವಾಗಿ ಬೊಬ್ಬೆ ಹೊಡೆಯವುದು ಹತಾಶೆ ಮತ್ತು ರಾಜಕೀಯ ಅವಕಾಶವಾದಿತನವಷ್ಟೇ..

ಹೆಚ್.ಡಿ.ಕುಮಾರಸ್ವಾಮಿ ಹಾಗು  ಸಿದ್ದರಾಮಯ್ಯ
ಹೆಚ್.ಡಿ.ಕುಮಾರಸ್ವಾಮಿ ಹಾಗು ಸಿದ್ದರಾಮಯ್ಯ

ಬೆಂಗಳೂರು :ಸುಳ್ಳನ್ನು ಪದೇಪದೆ ಹೇಳುತ್ತಾ ಜನರನ್ನು ದಾರಿತಪ್ಪಿಸುವ ʼಸಿದ್ದಕಲೆʼ ಅವರಿಗೆ ಚೆನ್ನಾಗಿ ಸಿದ್ಧಿಸಿದೆ ಎಂಬುದನ್ನು ನಾನು ಬಲ್ಲೆ. ನಿತ್ಯವೂ ʼಸುಳ್ಳಿನ ಜಪʼ ಮಾಡುವುದೇ ಅವರಿಗೆ ನಿತ್ಯ ಕಾಯಕ. ಇದು ಸತ್ಯಕ್ಕೆ ಮತ್ತು ರಾಜ್ಯಕ್ಕೆ ಎಸಗುವ ಅಪಚಾರ ಹಾಗೂ ಶಾಂತ ಸಮಾಜವನ್ನು ಒಡೆಯುವ ಹುನ್ನಾರ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನಾನು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ, ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಆಗ ಕಾಂತರಾಜು ಅವರ ವರದಿಯ ಬಗ್ಗೆ ಅವರು ಪ್ರಸ್ತಾಪವನ್ನೇ ಮಾಡಲಿಲ್ಲ. ಹಾಗೆ ಚರ್ಚೆ ಮಾಡುವ ಧೈರ್ಯವನ್ನೇಕೆ ತೋರಲಿಲ್ಲ? ಹೀಗಾಗಿ ಕೋಪದ ಪ್ರಶ್ನೆ ಎಲ್ಲಿಂದ ಬರುತ್ತದೆ? ಎಂದು ತಿರುಗೇಟು ನೀಡಿದ್ದಾರೆ.

ಆ ವರದಿಯಲ್ಲಿ ಸಹಿಯೇ ಇಲ್ಲ ಎಂದು ಸ್ವತಃ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರೇ ಹೇಳಿ ಬಿಟ್ಟಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು, ಈಗ ಪ್ರತಿಪಕ್ಷ ನಾಯಕರೂ ಆಗಿರುವ ʼರಾಜಕೀಯ ಪಂಡಿತʼರಿಗೆ ಹೇಳಿಕೆ ನೀಡುವ ಮುನ್ನ ಆ ಬಗ್ಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಇರಬೇಕಾಗಿತ್ತು.

ಜಾತಿ ಗಣತಿ ವರದಿ ಬಗ್ಗೆ ಇಷ್ಟೆಲ್ಲ ಪ್ರೀತಿ-ಕಾಳಜಿ ತೋರುವ ಈ ಮಹಾನುಭಾವರು, ನಿನ್ನೆಯವರೆಗೂ ನಡೆದ ವಿಧಾನಮಂಡಲ ಕಲಾಪದಲ್ಲಿ ಏಕೆ ಪ್ರಸ್ತಾಪ ಮಾಡಲಿಲ್ಲ?. ತಮ್ಮ ಪಕ್ಷದಲ್ಲೇ ತಮಗೆ ಬೀಳುತ್ತಿರುವ ಒಳ ಏಟುಗಳ ಹೊಡೆತ ತಾಳಲಾಗದೆ, ಅದೆಲ್ಲವನ್ನೂ ಮುಚ್ಚಿಟ್ಟುಕೊಳ್ಳಲು ಬಹಿರಂಗವಾಗಿ ಬೊಬ್ಬೆ ಹೊಡೆಯವುದು ಹತಾಶೆ ಮತ್ತು ರಾಜಕೀಯ ಅವಕಾಶವಾದಿತನವಷ್ಟೇ ಎಂದು ಟೀಕಿಸಿದ್ದಾರೆ.

ಇಂತಹ ಪ್ರಮುಖ ವರದಿಯನ್ನು ಸಲ್ಲಿಸಬೇಕಾದ್ದು ಮುಖ್ಯಮಂತ್ರಿಗಳಿಗೆ ವಿನಃ, ಸಚಿವರಿಗಲ್ಲ. ಸುದೀರ್ಘ ರಾಜಕೀಯ ಅನುಭವ, ಸಂಸದೀಯ ಚರಿತ್ರೆ ಇದ್ದರಷ್ಟೇ ಸಾಲದು. ಕೊಂಚ ಸಾಮಾನ್ಯ ಜ್ಞಾನವೂ ಇರಲಿ. ಪದೇಪದೆ 'ಸಿದ್ದಹಸ್ತಿಕೆʼ ತೋರುವ ಪ್ರಯತ್ನ ಬೇಡ ಎಂದು ಹೇಳಿದ್ದಾರೆ.

ಯಾರೋ ಕಟ್ಟಿದ ಹುತ್ತಕ್ಕೆ ಹೊಕ್ಕು ರಾಜಕೀಯ ಮರುಹುಟ್ಟು ಪಡೆದು ಉಂಡ ಮನೆಗೆ ಕನ್ನ ಕೊರೆಯುವ ಮುನ್ನ ತಮ್ಮ ಹೇಳಿಕೆಗಳ ಬಗ್ಗೆ ಎಚ್ಚರಿಕೆವಹಿಸಲಿ. ಸಮಾಜದ ಶಾಂತಿಗೆ ಕೊಳ್ಳಿ ಇಡುವ ದುಸ್ಸಾಹಸಕ್ಕೆ ಕೈ ಹಾಕಿದರೆ ಜನರೇ ಉತ್ತರ ಕೊಡುತ್ತಾರೆ.

ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ವಿಕೃತ ಆನಂದ ಅನುಭವಿಸುವುದು ಹೇಯ. ಮುಗ್ಧ ಜನರಲ್ಲಿ ಜಾತಿಯ ವಿಷಬೀಜ ಬಿತ್ತುವುದು ರಾಜಕೀಯ ನಿಕೃಷ್ಟತೆಯ ಪರಮಾವಧಿ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ABOUT THE AUTHOR

...view details