ಕರ್ನಾಟಕ

karnataka

By

Published : Oct 21, 2021, 10:54 PM IST

ETV Bharat / city

ಸಿಂದಗಿ, ಹಾನಗಲ್ ಉಪಸಮರ: ಮುಂದಿನ ಫಲಿತಾಂಶಕ್ಕೆ ಜನರೇ ನಿರ್ಣಾಯಕ!

ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಇನ್ಯಾರೇ ಸೋಲಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಅಲ್ಲದೇ ಎಲ್ಲಾ ಅಭ್ಯರ್ಥಿಗಳಿಗೂ 2023ರ ವಿಧಾನಸಭೆ ಚುನಾವಣೆಗೆ ವೇದಿಕೆಯೂ ಆಗಲಿದೆ.

hanagal-and-sindagi-by-polls-analysis
ಸಿಂಧಗಿ, ಹಾನಗಲ್ ಉಪಸಮರ: ಮುಂದಿನ ಫಲಿತಾಂಶಕ್ಕೆ ಜನರೇ ನಿರ್ಣಾಯಕ!

ಬೆಂಗಳೂರು: ಎರಡು ವಿಧಾನಸಭೆ ಉಪಚುನಾವಣೆ ಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿಯೇ ಸಾಗಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಜತೆ ಒಂದು ಪ್ರಾದೇಶಿಕ ಪಕ್ಷ ಸಹ ಪೈಪೋಟಿಗೆ ಬಿದ್ದಂತೆ ಪ್ರಚಾರ ನಡೆಸುತ್ತಿದೆ.

ಇತಿಹಾಸದ ಪುಟ ತಿರುವಿದಾಗ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮೇಲುಗೈ ಹೊಂದಿದೆ. ಆದರೆ, ಈ ಚುನಾವಣೆ ಹಿಂದೆಲ್ಲಾ ಚುನಾವಣೆಗಳಿಗಿಂತ ಭಿನ್ನವಾಗಿರಲಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಿಜೆಪಿ ಆಡಳಿತ ಪಕ್ಷವಾಗಿದ್ದು ಗೆಲುವಿಗಾಗಿ ಹರಸಾಹಸ ನಡೆಸಲಿದೆ. ಇನ್ನು ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ತನ್ನ ಸದಸ್ಯರನ್ನು ಹೊಂದಿರಲಿಲ್ಲ. ಇದರಿಂದ ಸ್ಥಾನ ಲಭಿಸಿದರೆ ಸಂತೋಷ, ಇಲ್ಲವಾದರೂ ಕಳೆದುಕೊಳ್ಳುವುದು ಏನೂ ಇಲ್ಲ.

ಸದ್ಯ ಸಿಂದಗಿಯಲ್ಲಿ ಜೆಡಿಎಸ್ ಸದಸ್ಯರಾಗಿದ್ದ ಮಾಜಿ ಸಚಿವ ಎಂ.ಸಿ. ಮನಗೂಳಿ ಹಾಗೂ ಹಾನಗಲ್​​ನಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಸದಸ್ಯರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ.

ಸಿಂದಗಿ ಚಿತ್ರಣ:1957ರಿಂದ ಇದುವರೆಗೂ ನಡೆದ ಚುನಾವಣೆಗಳ ಪೈಕಿ ಸಿಂದಗಿ ಕ್ಷೇತ್ರವನ್ನು ಗಮನಿಸಿದರೆ ಇಲ್ಲಿ ಅತಿ ಹೆಚ್ಚು ಅಂದರೆ 8 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಸಹ 3 ಸಾರಿ ಗೆಲುವು ಸಾಧಿಸಿದೆ. ಇದುವರೆಗೂ ಕ್ಷೇತ್ರದಲ್ಲಿ 14 ಬಾರಿ ವಿಧಾನಸಭೆ ಚುನಾವಣೆ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ 8 ಬಾರಿ ಅಂದರೆ 1957, 1962, 1967, 1972, 1978, 1985, 1989 ಮತ್ತು 1999ರಲ್ಲಿ ಗೆಲುವು ದಾಖಲಿಸಿದೆ.

ಇನ್ನು ಬಿಜೆಪಿ 2004, 2008, 2013ರಲ್ಲಿ ಗೆದ್ದರೆ, ಜೆಡಿಎಸ್ ಇದೇ ಮೊದಲ ಬಾರಿಗೆ ಖಾತೆಯನ್ನು 2018ರಲ್ಲಿ ತೆರೆದಿತ್ತು. 1983ರಲ್ಲಿ ಜೆಎನ್​ಪಿ, 1994ರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಎಂ.ರಾಮಪ್ಪ ಎಂಬುವರು ಮೂರು ಬಾರಿ ಗೆಲುವು ಸಾಧಿಸಿದ್ದೇ ಅಧಿಕ. 2008 ಮತ್ತು 2013ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ರಮೇಶ್ ಭೂಸನೂರು 2018ರಲ್ಲಿ ಹ್ಯಾಟ್ರಿಕ್ ಸಾಧಿಸುವ ಅವಕಾಶ ಕಳೆದುಕೊಂಡಿದ್ದರು. ಇದೀಗ ಪಕ್ಷ ಅವರಿಗೆ ಇನ್ನೊಂದು ಅವಕಾಶ ನೀಡಿದೆ.

ಹಾನಗಲ್ ಚಿತ್ರಣ:ಹಾನಗಲ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಕಣ ತೀವ್ರ ಕುತೂಹಲದಿಂದ ಕೂಡಿದೆ. ಇಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಸಮಬಲದ ಯಶಸ್ಸು ಇದೆ. ಎರಡೂ ಪಕ್ಷಗಳೂ ತಲಾ ನಾಲ್ಕು ಬಾರಿ ಗೆಲುವು ಸಾಧಿಸಿದ್ದು, ಐದನೇ ಗೆಲುವಿಗಾಗಿ ಇದೀಗ ಸೆಣೆಸಾಡುತ್ತಿವೆ.

ಜೆಡಿಎಸ್ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಸ್ಪರ್ಧೆಯಲ್ಲಿ ತಾನೂ ಇದ್ದೇನೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಬಿಜೆಪಿಯಿಂದ ಶಿವರಾಜ್ ಶರಣಪ್ಪ ಸಜ್ಜನರ ಕಣದಲ್ಲಿದ್ದಾರೆ. ಇವರು ಸಿ.ಎಂ.ಉದಾಸಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರು. ಇನ್ನು ಹಿಂದಿನ ಸಲದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮತ್ತೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಜೆಡಿಎಸ್​ನಿಂದ ನಯಾಜ್ ಶೇಖ್​​ರನ್ನು ಕಣಕ್ಕಿಳಿಸಲಾಗಿದೆ.

ಇಲ್ಲಿ ಕಾಂಗ್ರೆಸ್ ಪಕ್ಷ 1962, 1972, 1999, 2013 ರಲ್ಲಿ ಗೆದ್ದಿತ್ತು, ಬಿಜೆಪಿ 1994, 1999, 2008, 2018 ರಲ್ಲಿ ಗೆಲುವು ಸಾಧಿಸಿತ್ತು. 1957, 1967ರಲ್ಲಿ ಪಕ್ಷೇತರ, 1978, 1983, 1985ರಲ್ಲಿ ಜೆಎನ್​ಪಿ, 1989ರಲ್ಲಿ ಜೆಡಿ ಗೆಲುವು ಸಾಧಿಸಿತ್ತು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಇದೇ ಕ್ಷೇತ್ರದಿಂದ ಎರಡು ಬಾರಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.


ಒಟ್ಟಾರೆ ಈ ಸಾರಿಯ ಉಪಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಇನ್ಯಾರೇ ಸೋಲಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಅಲ್ಲದೇ ಎಲ್ಲ ಅಭ್ಯರ್ಥಿಗಳಿಗೂ 2023ರ ವಿಧಾನಸಭೆ ಚುನಾವಣೆಗೆ ಮುಂಚಿನ ವೇದಿಕೆಯಾಗಿ ಲಭಿಸಲಿದೆ.

ಇದನ್ನೂ ಓದಿ:100 ಕೋಟಿ ಲಸಿಕೆ ನೀಡಿ ಭಾರತ ದಾಖಲೆ..100 ಐತಿಹಾಸಿಕ ಸ್ಮಾರಕಗಳಲ್ಲಿ ತ್ರಿವರ್ಣ ವಿದ್ಯುತ್ ದೀಪಾಲಂಕಾರ

ABOUT THE AUTHOR

...view details