ಕರ್ನಾಟಕ

karnataka

ಹೈಕೋರ್ಟ್‌ಗೆ ಕೋವಿಡ್, ಬ್ಲ್ಯಾಕ್‌ ಫಂಗಸ್ ನಿರ್ವಹಣೆ ಮಾಹಿತಿ ನೀಡಿದ ಸರ್ಕಾರ

By

Published : Jun 25, 2021, 2:21 AM IST

ರಾಜ್ಯದಲ್ಲಿ ಕೋವಿಡ್‌ ನಿರ್ವಹಣೆ ಮತ್ತು ಬ್ಲ್ಯಾಕ್ ಫಂಗಸ್‌ಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡಲಾಗಿದೆ. ಚಿಕಿತ್ಸೆಗೆ ಬೇಕಾದ ಚುಚ್ಚುಮದ್ದು ದುಬಾರಿಯಾಗಿದ್ದು, ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ಕೋರ್ಟ್‌ಗೆ ಹೇಳಿದೆ.

Govt. Providing Covid, Black Fungus Information To High Court
ಹೈಕೋರ್ಟ್‌ಗೆ ಕೋವಿಡ್, ಬ್ಲ್ಯಾಕ್‌ ಫಂಗಸ್ ನಿರ್ವಹಣೆ ಮಾಹಿತಿ ನೀಡಿದ ಸರ್ಕಾರ

ಬೆಂಗಳೂರು :ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಟ್ಟಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ, ರಾಜ್ಯದಲ್ಲಿ ಬ್ಲ್ಯಾಕ್‌ ಫಂಗಸ್ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡಲಾಗಿದೆ. ಚಿಕಿತ್ಸೆಗೆ ಬೇಕಾದ ಚುಚ್ಚುಮದ್ದು ದುಬಾರಿಯಾಗಿದ್ದು, ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕಳೆದೊಂದು ವಾರದಲ್ಲಿ ರಾಜ್ಯದಾದ್ಯಂತ 100 ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ 3,086 ಬ್ಲ್ಯಾಕ್‌ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 2,371 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 247 ಜನ ಫಂಗಸ್ ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಆಸ್ಪತ್ರೆಗಳಲ್ಲಿ ಬೆಡ್ ಮಾಹಿತಿ ಪ್ರಕಟಿಸಬೇಕು ಹಾಗೂ ಕೋವಿಡ್ ಸೋಂಕಿತರಿಗೆ ಬ್ಲ್ಯಾಕ್‌ ಫಂಗಸ್ ಬಗ್ಗೆ ಅರಿವು ಮೂಡಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಪಿಎಂ ಕೇರ್ಸ್ ನಿಧಿ ಅಡಿ ರಾಜ್ಯ ಸರ್ಕಾರಕ್ಕೆ ಮಂಜೂರಾಗಿರುವ 28 ಹೊಸ ಆಮ್ಲಜನಕ ಘಟಕಗಳ ಸ್ಥಾಪನೆ ಕುರಿತಂತೆ ವಿವರ ನೀಡಲು ನ್ಯಾಯಾಲಯ ಇದೇ ವೇಳೆ ಸೂಚಿಸಿತು.

ಇದನ್ನೂ ಓದಿ: ಸಿಲಿಕಾನ್ ಸಿಟಿ ಹೆಸರಿಗೆ ತಕ್ಕಂತೆ ನ್ಯಾಯಾಲಯಗಳು ಆಧುನೀಕರಣಗೊಳ್ಳಬೇಕು : ಹೈಕೋರ್ಟ್

'ಮೂರನೇ ಸಂಭಾವ್ಯ ಅಲೆ ಬಗ್ಗೆ ಎಚ್ಚರವಿರಲಿ'
ಕೋವಿಡ್ ಮೂರನೇ ಸಂಭಾವ್ಯ ಅಲೆ ಗಮನದಲ್ಲಿರಿಸಿಕೊಂಡು ಹಾಸಿಗೆಗಳ ಲಭ್ಯತೆ ಹಾಗೂ ಇನ್ನಿತರೆ ವಿವರಗಳನ್ನು ಒಳಗೊಂಡ ರಿಯಲ್ ಟೈಮ್ ಮಾಹಿತಿ ನೀಡುವ ಪೋರ್ಟಲ್ ಸ್ಥಾಪನೆಗೆ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು. ಹಾಗೆಯೇ, ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಆಗುತ್ತಿರುವ ತಾರತಮ್ಯ ಆರೋಪದ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ನಿರ್ದೇಶಿಸಿತು.

ಒಂದು ವಾರ ಕಾಲಾವಕಾಶ
ಈ ನಡುವೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಮೃತಪಟ್ಟ 24 ಕುಟುಂಬದವರಿಗೆ ನೀಡಲಾಗಿರುವ ಮಧ್ಯಂತರ ಪರಿಹಾರ ಹೆಚ್ಚಳದ ಕುರಿತು ತೀರ್ಮಾನಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಒಂದು ವಾರ ಕಾಲಾವಕಾಶವನ್ನು ನೀಡಿತು.

ABOUT THE AUTHOR

...view details